ಸಾರಾಂಶ
ಧಾರವಾಡ:
ಶಿಕ್ಷಕರಿಗೆ ಪಠ್ಯ ಪುಸ್ತಕವೇ ಸರ್ವಸ್ವವಲ್ಲ. ಪಠ್ಯ ಪುಸ್ತಕ ಮೀರಿದ ಜ್ಞಾನವನ್ನು ವಿಷಯ ಬೋಧನೆ ಮೂಲಕ ಮಾಡುವುದು ಅಗತ್ಯವಾಗಿದೆ ಎಂದು ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಅಭಿಪ್ರಾಯಪಟ್ಟರು.ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘವು ನಿಂಗಣ್ಣಕುಂಟಿ (ಇಟಗಿ) ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ನಿವೃತ್ತರಾಗಿಯೂ ಕ್ರಿಯಾಶೀಲರಾಗಿರುವ ಶಿಕ್ಷಕರಿಗೆ ಸನ್ಮಾನ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.ಒಂದು ಅರ್ಥದಲ್ಲಿ ಪ್ರಾಥಮಿಕ ಶಿಕ್ಷಣವೇ ಶಿಕ್ಷಣದ ಬುನಾದಿ. ಶಿಕ್ಷಣದ ಬುನಾದಿ ಗಟ್ಟಿಯಾಗಬೇಕಾದರೆ ವಿದ್ಯಾರ್ಥಿಗಳು ಸಮಾಜದಲ್ಲಿ ಬದುಕುವ ಸಾಮರ್ಥ್ಯ, ಸ್ವಾವಲಂಬನೆ, ಉತ್ಪಾದನಾ ಸಾಮರ್ಥ್ಯ, ನವವಿಚಾರ ಹಾಗೂ ನಾಯಕತ್ವದ ಗುಣ ಬೆಳೆಸುವುದು ಅಗತ್ಯವಾಗಿದೆ ಎಂದರು.ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ (ಇಟಗಿ) ಮಾತನಾಡಿ, ನನ್ನ ಸೇವಾ ಅವಧಿಯಲ್ಲಿ ನಾನು ಮಕ್ಕಳ ಸಾಹಿತಿಯಾಗಿ ರೂಪಗೊಳ್ಳಲು ಡಾ. ದ.ರಾ. ಬೇಂದ್ರೆ ಅವರೇ ಪ್ರೇರಕ ಶಕ್ತಿ ಎಂದು ಹೇಳಿದರು.
ನಿವೃತ್ತ ಕ್ರಿಯಾಶೀಲ ಶಿಕ್ಷಕರಾದ ಇಂದುಮತಿ ಬ್ಯಾಲಹುಣಸಿ, ಮಹಾದೇವ ಕರ್ಜಗಿ, ರಂಗಪ್ಪ ನಾಯ್ಕರ ಅವರನ್ನು ದತ್ತಿ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಕವಿವ ಸಂಘದ ಪರವಾಗಿ ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಅವರ ಜನ್ಮದಿನದ ಪ್ರಯುಕ್ತ ಸನ್ಮಾನಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಕವಿವ ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ, ವಿಜ್ಞಾನ-ತಂತ್ರಜ್ಞಾನದ ಫಲವಾಗಿ ಶಿಕ್ಷಕರಿಗೆ ಹಿಂದಿನಂತೆ ಲವಲವಿಕೆ ಮತ್ತು ಕ್ರಿಯಾಶೀಲತೆ ಇಂದು ಇಲ್ಲದಾಗಿದೆ. ಇದಕ್ಕೆ ಇಂದಿನ ಒತ್ತಡದ ಜೀವನವು ಮುಖ್ಯ ಕಾರಣವಿರಬಹುದು. ಇಂದಿನ ಶಿಕ್ಷಕರು ಹೊಸ ಚಿಂತನಶೀಲ ಸಮಾಜ ಸೃಷ್ಟಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.
ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿದರು. ಡಾ. ಜಿನದತ್ತ ಅ. ಹಡಗಲಿ ವಂದಿಸಿದರು. ಬಸವಪ್ರಭು ಹೊಸಕೇರಿ, ಸತೀಶತುರಮರಿ, ಶಂಕರ ಹಲಗತ್ತಿ, ಡಾ. ಮಹೇಶ ಹೊರಕೇರಿ, ಡಾ. ನಿಂಗು ಸೊಲಗಿ, ಎಂ.ಎಂ. ಚಿಕ್ಕಮಠ, ಡಾ. ಲಿಂಗರಾಜ ಅಂಗಡಿ, ವಿ.ಎನ್. ಕೀರ್ತಿವತಿ, ಪುಷ್ಪಾ ಸಾಂಬ್ರಾಣಿ, ಗೋಣಿಬಸವ ಕುಂಟಿ ಸೇರಿದಂತೆ ಮುಂತಾದವರಿದ್ದರು.