ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಸನ ರಘು, ಎಸ್ಸಿ ಇಂಟರ್ನ್ಯಾಷನಲ್ ಸಂಸ್ಥೆಯ ಸುದೀಪ್, ಮೈಸೂರು ಧಮ್ಮದೀಪ ಸಂಸ್ಥಾನದ ಡಾ.ಚಿಂ.ಬ.ಬಸವರಾಜು, ಚನ್ನಪಟ್ಟಣದ ಭರತ್ ಕುಮಾರ್, ಮಲ್ಕುಂಡಿ ಮಹದೇವಸ್ವಾಮಿ, ಸುನೀಲ್ ಹಾಗೂ ಶಿಕ್ಷಕಿ ಸರಿತಾಕುಮಾರಿ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಕನಕಪುರ
ಸಮಾಜದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಕ್ರಾಂತಿಯನ್ನೇ ಉಂಟು ಮಾಡಿದ ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ ದಂಪತಿಯಂತಹ ಮಹಾತ್ಮರ ಸಾಧನೆಗೆ ತಕ್ಕ ಗೌರವ ಲಭಿಸಬೇಕು ಎಂದು ಬುದ್ಧಗಯಾ ಮಹಾಬೋಧಿ ಮಹಾವಿಹಾರದ ಪೂಜ್ಯ ಕ್ರಾಂತಿಕಾರಿ ವಿನಯಾಚಾರ್ಯ ಭಂತೇಜಿ ತಿಳಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಮಾತೆ ಸಾವಿತ್ರಿ ಬಾಯಿ ಫುಲೆ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 19ನೇ ಶತಮಾನದಲ್ಲಿ ಸಮಾಜದ ಅಂಧಶ್ರದ್ಧೆ, ಅಸ್ಪೃಶ್ಯತೆ, ಮನು ವಾದ ತೊಡೆದು, ಶೋಷಿತ ಮಹಿಳೆಯರ ಮತ್ತು ಅನಾಥರ ಬಾಳಲ್ಲಿ ಅಕ್ಷರ ಜ್ಯೋತಿ ಬೆಳಗಿದ ಕೀರ್ತಿ ಸಾವಿತ್ರಿ ಬಾಯಿ ಫುಲೆಗೆ ಸಲ್ಲುತ್ತದೆ. ಬುದ್ಧ, ಬಸವ, ಅಂಬೇಡ್ಕರರಂತೆ ಫುಲೆ ದಂಪತಿ ಸಹ ಸಮಾಜಕ್ಕಾಗಿ ಜೀವನ ತ್ಯಾಗ ಮಾಡಿದವರು. ಇವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ಓದುವಂತೆ ಸಲಹೆ ನೀಡಿದರು.ಸಾವಿತ್ರಿ ಬಾಯಿ ಫುಲೆ ಹೋರಾಟದ ಫಲವಾಗಿ ಮಹಿಳೆ ಮನೆಯಿಂದ ಹೊರ ಬಂದು ಶಿಕ್ಷಣ ಪಡೆದು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ವಾವಲಂಬಿಯಾಗಿ ಜೀವನ ಕಟ್ಟಿಕೊಳ್ಳಲು ಅವಕಾಶ ಸಿಕ್ಕಿದೆ. ಸೌಹಾರ್ದತೆ, ಸಹಿಷ್ಣುತೆ ಹಾಗೂ ಸಹಬಾಳ್ವೆಯನ್ನು ಪ್ರತಿಯೊಬ್ಬರೂ ಚಾಚೂ ತಪ್ಪದೆ ಪಾಲಿಸಬೇಕು ಎಂದರು.
ಬೀದರ್ ನ ಭಂತೆಜೀ ಮಾತನಾಡಿ, 19ನೇ ಶತಮಾನದಲ್ಲಿ ದೇಶದಲ್ಲಿ ಮಹಿಳಾ ಶಿಕ್ಷಣ ಮತ್ತು ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಶಿಕ್ಷಣ ಸಮಾಜ ಸುಧಾರಕಿ ಮಾತೆ ಸಾವಿತ್ರ ಬಾಯಿ ಫುಲೆ ಎಂದರು.ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ದೇಶದ ಹೊಸ ಇತಿಹಾಸ ನಿರ್ಮಾಣಕ್ಕೆ ನಾಂದಿ ಹಾಡಿದ ಹಾಗೂ ಶೈಕ್ಷಣಿಕ ಕ್ರಾಂತಿ ಮೂಲಕ ಸಾಮಾಜಿಕ ಕಳಕಳಿಯ ಬದ್ಧತೆ ತೋರಿದ ಫುಲೆ ದಂಪತಿಗೆ ಕೇಂದ್ರ ಸರ್ಕಾರ ಆದಷ್ಟೂ ಬೇಗ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡುವಂತೆ ಒತ್ತಾಯಿಸಿದರು,
ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಸನ ರಘು, ಎಸ್ಸಿ ಇಂಟರ್ನ್ಯಾಷನಲ್ ಸಂಸ್ಥೆಯ ಸುದೀಪ್, ಮೈಸೂರು ಧಮ್ಮದೀಪ ಸಂಸ್ಥಾನದ ಡಾ.ಚಿಂ.ಬ.ಬಸವರಾಜು, ಚನ್ನಪಟ್ಟಣದ ಭರತ್ ಕುಮಾರ್, ಮಲ್ಕುಂಡಿ ಮಹದೇವಸ್ವಾಮಿ, ಸುನೀಲ್ ಹಾಗೂ ಶಿಕ್ಷಕಿ ಸರಿತಾಕುಮಾರಿ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ವಿವಿಧ ಜಾನಪದ ಕಲಾತಂಡಗಳ ಜೊತೆಯಲ್ಲಿ ಬುದ್ಧ ಹಾಗೂ ಅಂಬೇಡ್ಕರ್ ಮೂರ್ತಿಗಳ ಭವ್ಯ ಮೆರವಣಿಗೆಗೆ ದೇಗುಲಮಠದ ಶ್ರೀ ಚನ್ನಬಸವ ಸ್ವಾಮೀಜಿ ನಗಾರಿ ಭಾರಿಸುವ ಮೂಲಕ ಚಾಲನೆ ನೀಡಿದರು. ಟ್ರಸ್ಟ್ ನಿರ್ದೇಶಕಿ ಖಯಾದು, ಡಾ.ಬೊಮ್ಮಯ್ಯ, ಮುಖಂಡರಾದ ಚಿಕ್ಕಸ್ವಾಮಿ ಜೆ.ಎಂ.ಶಿವಲಿಂಗಯ್ಯ, ನವೀನ್ಕುಮಾರ್, ಸತೀಶ್, ಮರಸಪ್ಪ ರವಿ, ಕಾಳಯ್ಯ ಬಾಣಂದೂರು ಶಿವಕುಮಾರ್, ಡಾ.ತೇಜೋವತಿ ಇತರರಿದ್ದರು.