ಜೆ.ಯಾದವರೆಡ್ಡಿ ಗುಣಗಾನ ಅಭಿಮತ । ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ರವರ 142ನೇ ಜನ್ಮದಿನ ಆಚರಣೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯದ ಯಾವ ಮುಖ್ಯಮಂತ್ರಿಗಳು ಇದುವರೆವೆಗೂ ಮಾಡದಂತ ಅಪರೂಪದ ಚರಿತ್ರಾರ್ಹ ಕೆಲಸವನ್ನು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಮಾಡಿರುವುದರಿಂದ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ ಎಂದು ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕ ನಿವೃತ್ತ ಪ್ರಾಚಾರ್ಯರಾದ ಜೆ.ಯಾದವರೆಡ್ಡಿ ಗುಣಗಾನ ಮಾಡಿದರು.

ಪ್ರವಾಸಿ ಮಂದಿರದಲ್ಲಿ ನಡೆದ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ರವರ 142ನೇ ಜನ್ಮದಿನದ ಅಂಗವಾಗಿ ಅವರ ಫೋಟೋಗೆ ಪುಷ್ಪರ್ಚಾನೆ ಸಲ್ಲಿಸಿ ಮಾತನಾಡಿದರು.

ಶೇ.72 ಪರ್ಸೆಂಟ್ ಮೀಸಲಾತಿಯನ್ನು ಮೊಟ್ಟಮೊದಲು ಕೊಟ್ಟವರು ಮೈಸೂರು ಮಹಾರಾಜರು. ಸಾಮಾಜಿಕ ಸಮಸ್ಯೆ ಚೆನ್ನಾಗಿ ಅರ್ಥಮಾಡಿಕೊಂಡಿದ್ದರಿಂದ ಮಿಲ್ಲರ್ ಆಯೋಗ ರಚಿಸಿದರು. ಇದರಿಂದ ಭಾರತದಲ್ಲಿ ಸಂಚಲನ ಮೂಡಿಸಿತು. ಎಲ್ಲಾ ಜಾತಿಯವರು ಒಟ್ಟಿಗೆ ಕುಳಿತು ಪಾಠ ಕೇಳುವ ವ್ಯವಸ್ಥೆ ಜಾರಿಗೆ ತಂದರು. ಚಾತುರ್ವಣವನ್ನು ಬುಡ ಸಮೇತ ಕಿತ್ತು ಹಾಕುವ ಸಾಹಸ ಮಾಡಿದವರು ಮೈಸೂರು ಮಹಾರಾಜರು ಎಂದು ಹೇಳಿದರು.

ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ರವರು ಮೀಸಲಾತಿಯನ್ನು ಜಾರಿಗೆ ತಂದ ಪರಿಣಾಮ ಹಿಂದುಳಿದವರು ಸೇರಿದಂತೆ ಎಲ್ಲಾ ಜಾತಿಯವರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಮುಂದೆ ಬರಲು ಸಾಧ್ಯವಾಯಿತು. ಹಿರಿಯೂರಿನಲ್ಲಿರುವ ವಾಣಿವಿಲಾಸಸಾಗರವನ್ನು ಕಟ್ಟಿಸಿದವರು ಮೈಸೂರು ಮಹಾರಾಜರು, ವಿಶ್ವವಿದ್ಯಾನಿಲಯಗಳು, ಮೈಸೂರು ಲ್ಯಾಂಪ್ಸ್, ಡ್ಯಾಂಗಳು ಆಗಿದ್ದು, ಇವರ ಕಾಲದಲ್ಲಿ. ಇಂತಹ ಜನೋಪಕಾರಿ ಕೆಲಸಗಳನ್ನು ಮಾಡಿರುವ ಮೈಸೂರು ಮಹಾರಾಜರನ್ನು ಪ್ರತಿಯೊಬ್ಬರು ನೆನಪು ಮಾಡಿಕೊಳ್ಳಲೇಬೇಕು. ಅವರ ಕಾಲದಲ್ಲಿದ್ದ 13 ಜಿಲ್ಲೆಗಳಲ್ಲಿ ಅನೇಕ ಅಭಿವೃದ್ಯಾಗಿವೆ. ಈಗಿನ ಮುಖ್ಯಮಂತ್ರಿಗಳು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ ಅವರನ್ನು ಅನುಕರಣೆ ಮಾಡಬೇಕೆಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮೈಸೂರು ಮಹಾರಾಜರು ನಾಡಿಗೆ ನೀಡಿರುವ ಕೊಡುಗೆಯನ್ನು ಪರಿಚಯಿಸಬೇಕು. ಸೌಲಭ್ಯಗಳಿಂದ ವಂಚಿತರಾದವರಿಗೆ ಮೊಟ್ಟ ಮೊದಲು ಮೀಸಲಾತಿ ಕೊಡಬೇಕೆಂದು ಆಲೋಚನೆ ಮಾಡಿದವರು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಎನ್ನುವುದನ್ನು ಮರೆಯುವಂತಿಲ್ಲ. ಮಿಲ್ಲರ್ ಆಯೋಗವನ್ನು ವಿಶ್ವೇಶ್ವರಯ್ಯ ವಿರೋಧಿಸಿದಾಗ ಲೆಕ್ಕಿಸದೆ ಜಾರಿಗೆ ತಂದರು. ಚಿತ್ರದುರ್ಗದ ಸರ್‍ಖಾಜಿರವರು ಮೈಸೂರು ಮಹಾರಾಜರ ಆಸ್ಥಾನದಲ್ಲಿದ್ದ ಸಲಹಾ ಸಮಿತಿಯಲ್ಲಿದ್ದರು ಎನ್ನುವುದನ್ನು ನೆನಪಿಸಿಕೊಂಡರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿನಾಯಕ ಮಾತನಾಡಿ, ಸಮಾಜ ಸುಧಾರಣೆ ಬಗ್ಗೆ ಅಪಾರವಾದ ಕಳಕಳಿ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‍ರವರಲ್ಲಿದ್ದ ಕಾರಣಕ್ಕಾಗಿ ಸರ್ವರಿಗೂ ಸಮಪಾಲು, ಸಮಬಾಳು ಸಿಕ್ಕಿದೆ. ಮೂಢನಂಬಿಕೆ, ಅನಿಷ್ಟ ಪದ್ದತಿಗಳ ನಿರ್ಮೂಲನೆಗಾಗಿ ಧೃಢ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಮಹಿಳೆಯರಿಗೂ ಮೊದಲು ಸಮಾನತೆ ಕೊಟ್ಟವರು ಮೈಸೂರು ಮಹಾರಾಜರು ಎನ್ನುವುದನ್ನು ಸ್ಮರಿಸಿದರು.

ಧಮನಿತರು ಕೂಡ ಸ್ವಾವಲಂಭಿಯಾಗಿ ಬದುಕಲು ಭೂಮಿಯನ್ನು ಹಂಚಿಕೆ ಮಾಡಿದರು. ಕೆರೆ ಕಟ್ಟೆ ಡ್ಯಾಂಗಳನ್ನು ಕಟ್ಟಿ ಸಕಲ ಜೀವರಾಶಿಗಳಿಗೂ ನೀರಿನ ದಾಹ ಇಂಗಿಸಿದರು. ಮೈಸೂರು ದಸರಾದಲ್ಲಿ ಮಹಾರಾಜರ ಸತ್ಕಾರ್ಯಗಳನ್ನು ನೋಡಬಹುದು ಎಂದರು.

ದಲಿತ ಮುಖಂಡ ಬಿ.ರಾಜಣ್ಣ ಮಾತನಾಡಿ ಮೈಸೂರು ಮಹಾರಾಜರು ಒಡವೆಗಳನ್ನು ಮಾರಿ ಡ್ಯಾಂಗಳನ್ನು ಕಟ್ಟಿಸಿ ಜನರಿಗೆ ಕುಡಿಯಲು ನೀರು ಕೊಟ್ಟಿದ್ದಾರೆ. ಮೇಲ್ಜಾತಿಯಿಂದ ಹಿಡಿದು ಕೆಳಸ್ಥರದ ಎಲ್ಲಾ ಜಾತಿಯವರಿಗೆ ಸಮಾನತೆ ಕೊಡಬೇಕೆಂಬ ದೂರದೃಷ್ಟಿ ಮೈಸೂರು ಮಹಾರಾಜರವರಲ್ಲಿತ್ತು ಎಂದು ಹೇಳಿದರು.

ಲೇಖಕ ಎಚ್.ಆನಂದ್‍ಕುಮಾರ್, ಎಸ್.ಲಕ್ಷ್ಮಿಕಾಂತ್, ಗ್ರಂಥಾಲಯಾಧಿಕಾರಿ ಬಸವರಾಜ್‍ಕೊಳ್ಳಿ ಇವರುಗಳು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‍ರವರ ಸಮಾಜಮುಖಿ ಕಾರ್ಯಗಳ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಆಕಾಶವಾಣಿಯ ನವೀನ್ ಮಸ್ಕಲ್, ಹನುಮಂತಪ್ಪ ಗೋನೂರು, ಪಾಂಡುರಂಗಪ್ಪ, ರಘು, ರಾಮಣ್ಣ, ರಾಜೇಂದ್ರಪ್ರಸಾದ್ ಇನ್ನು ಅನೇಕರು ಇದ್ದರು.