ಬಿಡದಿಯನ್ನು ಹಸಿರು ಪಟ್ಟಣವನ್ನಾಗಿಸುವ ಉದ್ದೇಶ

| Published : Jun 06 2025, 01:50 AM IST

ಸಾರಾಂಶ

ಗಿಡ ನೆಡುವ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗಬಾರದು. ಅದು ನಿರಂತರ ಪ್ರಕ್ರಿಯೆ ಆಗಿರಬೇಕು ಎಂದರು.

ಕನ್ನಡಪ್ರಭ ವಾರ್ತೆ ರಾಮನಗರ

ಬಿಡದಿಯನ್ನು ಹಸಿರು ಪಟ್ಟಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪುರಸಭೆ ವತಿಯಿಂದ 1 ಲಕ್ಷ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಲು ಉದ್ದೇಶಿಸಲಾಗಿದೆ ಎಂದು ಬಿಡದಿ ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್ ಹೇಳಿದರು.ಬಿಡದಿ ಪಟ್ಟಣದ ಸಿಲ್ಕ್ ಫಾರಂ ಬಳಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಪುರಸಭೆ ವತಿಯಿಂದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಿಡ ನೆಡುವ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗಬಾರದು. ಅದು ನಿರಂತರ ಪ್ರಕ್ರಿಯೆ ಆಗಿರಬೇಕು ಎಂದರು.ಜಾಗತೀಕರಣದ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಹೆಚ್ಚಾಗಿದ್ದು, ಅವುಗಳು ಹೊರಸೂಸುವ ಹೊಗೆಯಿಂದ ಪರಿಸರ ಮಾತ್ರವಲ್ಲ ಮನುಷ್ಯರ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಇದನ್ನು ತಡೆಗಟ್ಟಲು ಪರಿಸರ ಸಂರಕ್ಷಣೆ ಮಾಡಿಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕು. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಲು ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.ಪುರಸಭೆ ಅಧ್ಯಕ್ಷ ಹರಿಪ್ರಸಾದ್ ಮಾತನಾಡಿ, ಪುರಸಭೆ ವತಿಯಿಂದ ಪಟ್ಟಣದ ಎಲ್ಲ ವಾರ್ಡಿನ ಪ್ರತಿ ಮನೆಯ ಮುಂದೆ ಗಿಡ ನೆಡಲಾಗುವುದು. ಆ ಮೂಲಕ ಪರಿಸರ ಉಳಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಈ ವರ್ಷದ ತಾಪಮಾನ ನಮಗೂ ಹಾಗೂ ಪರಿಸರದ ಮೇಲೆ ಉಂಟಾಗಿರುವ ದುಷ್ಪರಿಣಾಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ಈಗಲಾದರು ಪರಿಸರವನ್ನು ಉಳಿಸಿಕೊಳ್ಳಬೇಕಿದೆ. ಪರಿಸರ ಸ್ವಚ್ಛತೆ, ಪ್ಲಾಸ್ಟಿಕ್ ನಿರ್ಮೂಲನೆ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಸದಸ್ಯ ರಾಮಚಂದ್ರಯ್ಯ ಮಾತನಾಡಿ, ಗಿಡ ನೆಡುವ ಕಾರ್ಯಕ್ರಮದಲ್ಲಿ 1 ಲಕ್ಷ ಗಿಡ ನೆಡುವುದು ಮುಖ್ಯವಲ್ಲ, ಅದಕ್ಕೆ ನೀರು ಹಾಕಿ ಸಂರಕ್ಷಣೆ ಮಾಡುವ ಕೆಲಸ ಆಗಬೇಕು. ಜೊತೆಗೆ ಜನರಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಎಂದರು.

ಪುರಸಭೆ ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಲೋಹಿತ್ ಕುಮಾರ್ , ಮುಖ್ಯಾಧಿಕಾರಿ ರಮೇಶ್ , ಸದಸ್ಯರಾದ ಹೊಂಬಯ್ಯ, ಕೆ.ಎನ್.ರಮೇಶ್ , ಸೋಮಶೇಖರ್ , ಶ್ರೀನಿವಾಸ್ , ಎಂಜಿನಿಯರ್ ಗಳಾದ ರೂಪಾ, ಶಿಲ್ಪಾ, ಶ್ಯಾಮ್ , ಶೃತಿ, ಅಧಿಕಾರಿ ಸುಮಾ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಛಲಪತಿ ಮತ್ತಿತರರು ಹಾಜರಿದ್ದರು.

------

5ಕೆಆರ್ ಎಂಎನ್ 2.ಜೆಪಿಜಿ

ಬಿಡದಿ ಪಟ್ಟಣದ ಸಿಲ್ಕ್ ಫಾರಂ ಬಳಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷ ಹರಿಪ್ರಸಾದ್ ಹಾಗೂ ವಿಪಕ್ಷ ನಾಯಕ ಸಿ.ಉಮೇಶ್ ಗಿಡ ನೆಡುವ ಮೂಲಕ ಚಾಲನೆ ನೀಡಿದರು.