ಅಡವಿ ಸಿದ್ದರಾಮ ಶ್ರೀ ವಿರುದ್ಧದ ಆಪಾದನೆ ಸುಳ್ಳು

| Published : Jun 28 2025, 12:27 AM IST

ಸಾರಾಂಶ

ಶಿವಾಪುರದ ಶ್ರೀಗಳ ವಿರುದ್ಧ ಬಂದಿರುವ ಆರೋಪಗಳು ಸುಳ್ಳು ಎಂದು ನಾವು ಪೊಲೀಸರಿಗೆ ತಿಳಿಸಿದ್ದೇವೆ

ಕನ್ನಡಪ್ರಭ ವಾರ್ತೆ ಗೋಕಾಕ

ಅಡವಿ ಸಿದ್ದೇಶ್ವರ ಮಠದ ಅಡವಿ ಸಿದ್ದರಾಮ ಸ್ವಾಮೀಜಿ ವಿರುದ್ಧ ಬಂದಿರುವ ಆಪಾದನೆ ಸುಳ್ಳಾಗಿದೆ. ಶ್ರೀಗಳು ಮತ್ತು ಮೂಡಲಗಿ ತಾಲೂಕಿನ ಶಿವಾಪುರ (ಹ) ಗ್ರಾಮದ ಹಿರಿಯರು- ಗ್ರಾಮಸ್ಥರು ಎಲ್ಲರೂ ಸೇರಿ ವಿವಾದವನ್ನು ಬಗೆಹರಿಸಲು ಸಹಕಾರ ನೀಡಿದ್ದಾರೆ. ಶ್ರೀಗಳ ಜೊತೆಗೆ ಶಿವಾಪುರ ಗ್ರಾಮಕ್ಕೆ ಇದರಿಂದ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಘಟನೆಯನ್ನು ಇಲ್ಲಿಗೆ ಅಂತ್ಯಗೊಳಿಸಲು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ನಗರದ ಶೂನ್ಯ ಸಂಪಾದನ ಮಠದಲ್ಲಿ ಗುರುವಾರ ಸಂಜೆ ನಾನಾ ಶ್ರೀಗಳೊಂದಿಗೆ ತಮ್ಮ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ತಮಗೆ ಗೊತ್ತಿದ್ದಂತೆ ಶಿವಾಪುರ (ಹ) ಗ್ರಾಮದಲ್ಲಿರುವ ಅಡವಿ ಸಿದ್ದೇಶ್ವರ ಮಠದ ಶ್ರೀಗಳ ವಿರುದ್ಧವಾಗಿ ಬಂದಿರುವ ಆಪಾದನೆ ಮಾಧ್ಯಮ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚಿತವಾಗಿತ್ತು. ಹೀಗಾಗಿ ಶ್ರೀಗಳ ಕುರಿತಾಗಿ ಬಂದಿರುವ ಆಪಾದನೆಗಳ ಬಗ್ಗೆ ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ನಾವೆಲ್ಲ ಪೊಲೀಸ್ ಅಧಿಕಾರಿಗಳಲ್ಲಿ ತಿಳಿಸಿದ್ದೆವು. ಅದರಂತೆ ಇಂಟಲಿಜೆನ್ಸಿ ಮತ್ತು ಪೊಲೀಸ್ ಅಧಿಕಾರಿಗಳ ತನಿಖಾ ವರದಿ ಆಧಾರದ ಮೇಲೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಈ ವರದಿಯಲ್ಲಿ ಅಡವಿ ಸಿದ್ದರಾಮ ಸ್ವಾಮೀಜಿ ಕುರಿತು ಬಂದಿರುವ ಆಪಾದನೆ ಸುಳ್ಳು ಎಂದು ತಿಳಿದುಬಂದಿದೆ ಎಂದು ಹೇಳಿದರು.

ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಆಪಾದನೆಗಳ ಬಗ್ಗೆ ಶ್ರೀಗಳು ಕೂಡ ಬಹಳ ಬೇಸರಗೊಂಡಿದ್ದರು. ಶಿವಾಪುರದ ಶ್ರೀಗಳ ವಿರುದ್ಧ ಬಂದಿರುವ ಆರೋಪಗಳು ಸುಳ್ಳು ಎಂದು ನಾವು ಪೊಲೀಸರಿಗೆ ತಿಳಿಸಿದ್ದೇವೆ ಜೊತೆಗೆ ಘಟನೆಯ ವೇಳೆ ಯಾರು ಬಂದು ಗಲಾಟೆ ಮಾಡಿದ್ದಾರೋ? ಅಂತಹ ತಪ್ಪಿತಸ್ಥರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ಕೊಟ್ಟಿದ್ದೇವೆ ಎಂದರು.

ವಿವಾದ ಅಂತ್ಯವಾಗಿದ್ದರಿಂದ ಶ್ರೀಗಳು ಮತ್ತೆ ಮಠಕ್ಕೆ ತೆರಳಿ ಅಲ್ಲಿಯೇ ತಮ್ಮ ಕಾಯಕ, ಪೂಜೆ ನಿಷ್ಠೆಯನ್ನು ಮತ್ತೆ ಮುಂದುವರಿಸಲಿದ್ದಾರೆ. ಅದರಂತೆ ಶಿವಾಪುರ (ಹ) ಗ್ರಾಮದ ಎಲ್ಲ ಜನರು ಸೌಹಾರ್ದತೆಯಿಂದ ಈ ವಿವಾದವನ್ನು ಇಲ್ಲಿಗೆ ಅಂತ್ಯಗೊಳಿಸುವ ಮೂಲಕ ಶ್ರೀಗಳಿಗೆ ಮೊದಲಿನಂತೆ ತಮ್ಮ ಸಹಕಾರ ನೀಡಲಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಶ್ರೀಗಳ ವಿರುದ್ಧ ಅಪಾದನೆ ಬಂದಾಗ ಅವರು ಅಲ್ಲಿಯೇ ಇರಲು ಇಚ್ಚಿಸಿದ್ದರು. ಆದರೆ ಕಾನೂನು ಮತ್ತು ಸುವ್ಯವಸ್ಥೆ, ಹದಗೆಡುತ್ತದೆ ಎಂಬ ಕಾರಣಕ್ಕಾಗಿ ಶ್ರೀಗಳು ಗೋಕಾಕದ ಶೂನ್ಯ ಸಂಪಾದನ ಮಠಕ್ಕೆ ತೆರಳಿದರು. ಈಗ ವಿವಾದ ಸುಖಾಂತ್ಯವಾಗಿದೆ. ಎಲ್ಲರೂ ಮೊದಲಿನಂತೆ ಸಹಕರಿಸಬೇಕು ಎಂದರು.

ಸಭೆಯಲ್ಲಿ ಗೋಕಾಕ ಶೂನ್ಯ ಸಂಪಾದನ ಮಠದ ಮುರಾಘರಾಜೇಂದ್ರ ಮಹಾಸ್ವಾಮೀಜಿ, ಅಂಕಲಗಿ ಅಡವಿ ಸಿದ್ಧೇಶ್ವರ ಮಠದ ಅಮರೇಶ್ವರ ಮಹಾಸ್ವಾಮೀಜಿ, ಹುಣಶ್ಯಾಳ ಪಿಜಿ ಕೈವಲ್ಯ ಆಶ್ರಮ ಸಿದ್ಧಲಿಂಗ ಮಹಾಸ್ವಾಮೀಜಿ, ಹಂದಿಗುಂದದ ಶಿವಾನಂದ ಮಹಾಸ್ವಾಮೀಜಿ, ರಂಗಾಪೂರದ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ, ಘಟಪ್ರಭಾ ಗುಬ್ಬಲಗುಡ್ಡ ಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಜಡಿ ಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮೀಜಿ, ಪ್ರಭುದೇವ ಮಠ ಚಿಮ್ಮುಡದ ಪ್ರಭು ಮಹಾಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು, ಮಠದ ಭಕ್ತರು ವೇಳೆ ಪಾಲ್ಗೊಂಡಿದ್ದರು.

ಶಿವಾಪೂರ (ಹ) ಮುಖಂಡರಾದ ಮಲ್ಲಗೌಡ ಪಾಟೀಲ, ಕೆಂಪಣ್ಣ ಮುಧೋಳ, ಬಸವರಾಜ ಸಾಯನ್ನವರ, ಶಿವಬಸು ಜುಂಜರವಾಡ, ಮಹಾಂತೇಶ ಕುಡಚಿ, ಪರಗೌಡ ಪಾಟೀಲ, ಸತೀಶ ಜುಂಜರವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನನ್ನ ಮೇಲೆ ಬಂದಿರುವ ಆರೋಪ ಮತ್ತು ಕಳಂಕ ಎಂದು ತಿಳಿದು ಬಂದಿದ್ದು ಇದನ್ನು ತೊಳೆದು ಹಾಕಿದ್ದಕ್ಕೆ ಎಲ್ಲ ಶ್ರೀಗಳಿಗೆ ಮತ್ತು ಕ್ಷೇತ್ರದ ಶಾಸಕರಿಗೆ, ಜನರಿಗೆ ನಾನು ಅನಂತ ಕೃತಜ್ಞತೆ ಅರ್ಪಿಸುವೆ.

ಅಡವಿಸಿದ್ದರಾಮ ಸ್ವಾಮೀಜಿ ಅಡವಿ ಸಿದ್ದೇಶ್ವರ ಮಠ ಶಿವಾಪೂರ(ಹ)

ಒಂದು ಕೆಟ್ಟ ಘಟನೆ, ಇಂತಹ ಘಟನೆ ಮತ್ತೆ ಮರುಕಳಿಸದಿರಲಿ. ಯಾರೇ ತಪ್ಪು ಮಾಡಿದರು ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ಯಾರು ಕಾನೂನನ್ನು ಕೈಗೆ ಎತ್ತಿಕೊಳ್ಳುವ ಕಾರ್ಯಕ್ಕೆ ಮುಂದಾಗಬಾರದು. ಪೂಜ್ಯರ ವಿರುದ್ಧ ಬಂದಿರುವ ಕಳಂಕ ಸುಳೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ವಿವಾದವನ್ನು ಇಲ್ಲಿಗೆ ಅಂತ್ಯಗೊಳಿಸಬೇಕು.

ಶಿವಾನಂದ ಮಹಾಸ್ವಾಮೀಜಿ ಹಂದಿಗುಂದ