ದರ್ಗಾ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾ

| Published : Jun 22 2024, 12:48 AM IST

ಸಾರಾಂಶ

ಇಳಕಲ್ಲ ಪಟ್ಟಣದ ಹಜರತ್ ಸೈಯ್ಯದ ಮುರ್ತುಜಾ ಷಾ ಖಾದ್ರಿ ದರ್ಗಾದ ಆಡಳಿತಾಧಿಕಾರಿಯನ್ನಾಗಿ ತಹಸೀಲ್ದಾರ್‌ ಸತೀಶ ಕೂಡಲಗಿ ಅವರ ನೇಮಕವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಧಾರವಾಡ ಹೈಕೋರ್ಟನ ಏಕ ಸದಸ್ಯ ಪೀಠ ವಜಾಗೊಳಿಸಿದೆ.

ಕನ್ನಡಪ್ರಭ ವಾರ್ತೆ ಇಳಕಲ್ಲ

ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠ ೨೦೨೪ರ ಫೆಬ್ರವರಿ ೧೩ ಇಳಕಲ್ಲ ಪಟ್ಟಣದ ಹಜರತ್ ಸೈಯ್ಯದ್‌ ಮುರ್ತುಜಾ ಷಾ ಖಾದ್ರಿ ದರ್ಗಾದ ಆಡಳಿತಾಧಿಕಾರಿಯನ್ನಾಗಿ ತಹಸೀಲ್ದಾರ್‌ ಸತೀಶ ಕೂಡಲಗಿ ಅವರನ್ನು ನೇಮಿಸಿ ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಸೂರಜ ಗೋವಿಂದರಾಜ ಅವರು ತೀರ್ಪು ನೀಡಿದ್ದರು.

ಇದನ್ನು ಪ್ರಶ್ನಿಸಿ ತೀರ್ಪು ನ್ಯಾಯಸಮ್ಮತವಲ್ಲ ಆಡಳಿತಾಧಿಕಾರಿ ನೇಮಕ ರದ್ದು ಮಾಡಬೇಕೆಂದು ಇಳಕಲ್ಲ ಪಟ್ಟಣದ ಉಸ್ಮಾನಗನಿ ಹುಮನಾಬಾದ್‌ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂತಿ ಜಿ.ಬಸವರಾಜ ಹಾಗೂ ಎಸ್.ಜಿ. ಪಂಡಿತ ಅವರ ವಿಭಾಗಿಯ ಪೀಠ ಏಕಸದಸ್ಯ ಪೀಠ ತೀರ್ಪುನ್ನು ಎತ್ತಿ ಹಿಡಿದು ಉಸ್ಮಾನಗನಿ ಸಲ್ಲಿಸಿದ್ದ ರಿಟ್‌ ಪೆಟಿಷನ್ ವಜಾಗೊಳಿಸಿ ಬುಧವಾರ ಆದೇಶಿಸಿದೆ ಎಂದು ವಕೀಲ ಸಿ.ಎಸ್. ಇನಾಮದಾರ ತಿಳಿಸಿದ್ದಾರೆ.

ಇದರಿಂದ ದರ್ಗಾ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತಿರುವ ತಂಡಕ್ಕೆ ಜಯಸಿಕ್ಕಿದ್ದು, ಉಸ್ಮಾನಗನಿ ಹುಮನಾಬಾದರಿಗೆ ಹಿನ್ನಡೆ ಉಂಟಾಗಿದೆ ಎಂದೆ ವಿಶ್ಲೇಷಿಸಲಾಗುತ್ತಿದೆ. ಉಚ್ಚನ್ಯಾಯಾಲಯದ ಆದೇಶವನ್ನು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಮೆಹಬೂಬ ಸರಕಾವಸ ಸ್ವಾಗತಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಗೆ ಬಲ ಸಾಬೀತು: ರಿಯಾಜ್

ಈ ಹಿಂದೆ ಭ್ರಷ್ಟಾಚಾರಿಗಳನ್ನು ವಿರೋಧ ಮಾಡುವುದೆಂದರೆ ಕೈ ಕಾಲು ನಡಗುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ, ಜನಸಾಮಾನ್ಯರಿಗೆ ಮಾಹಿತಿ ಹಕ್ಕಿನ ಬಲ ಸಿಕ್ಕಿದೆ. ಈ ಕಾಯ್ದೆಯ ಬಲದಿಂದಲೇ ಹಜರತ್ ಮುರ್ತುಜಾ ಷಾ ಖಾದ್ರಿ ದರ್ಗಾದಲ್ಲಾಗಿರುವ ಭ್ರಷ್ಟಾಚಾರ ಹೊರಬಂದಿದೆ. ಈ ಕಾಯ್ದೆಯಿಂದ ಹೋರಾಟಗಾರರಿಗೆ ಶಕ್ತಿ ಸಿಕ್ಕಿದ್ದು, ಸಂವಿಧಾನಾತ್ಮಕ ನಾಗರಿಕ ಹಕ್ಕಿಗೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ಹಿಂದಿನ ಆಡಳಿತ ಮಂಡಳಿಯವರು ಕೋರಿದ್ದ ರಿಟ್ ಅರ್ಜಿ ವಜಾ ಗೊಳಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಹೋರಾಟಗಾರ ರಿಯಾಜ್‌ ಭನ್ನು ಪ್ರತಿಕ್ರಿಯಿಸಿದ್ದಾರೆ.