ಸಾರಾಂಶ
ಉಚಿತ ಬೇಸಿಗೆ ಕರಾಟೆ ಶಿಬಿರಕ್ಕೆ ಚಾಲನೆ । ಕರಾಟೆ ಕಲಿತ ವಿದ್ಯಾರ್ಥಿಗಳಿಗೆ ಬೆಲ್ಟ್ ವಿತರಣಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಬಳ್ಳಾರಿಇಲ್ಲಿನ ಬಾಲ ಭಾರತಿ ಶಾಲೆಯಲ್ಲಿ ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆರ್ಟ್ಸ್ ಟ್ರಸ್ಟ್ ವತಿಯಿಂದ ಉಚಿತ ಬೇಸಿಗೆ ಕರಾಟೆ ಶಿಬಿರದ ಉದ್ಘಾಟನೆ ಹಾಗೂ ಕರಾಟೆ ಕಲಿತ ವಿದ್ಯಾರ್ಥಿಗಳಿಗೆ ಬೆಲ್ಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಉದ್ಘಾಟಿಸಿ ಮಾತನಾಡಿದ ಉದ್ಯಮಿ ಮೋಹನ್ ರೆಡ್ಡಿ ಅವರು, ಆತ್ಮರಕ್ಷಣೆಯ ಕಲೆಯನ್ನು ಪ್ರತಿಯೊಬ್ಬರೂ ಕಲಿಯಬೇಕು. ಇದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯವು ಸಹ ವೃದ್ಧಿಸಲಿದೆ. ಜೊತೆಗೆ ಜೀವನದಲ್ಲಿ ಯಾವುದೇ ಸಂಕಷ್ಟದ ಸಂದರ್ಭವನ್ನು ಧೈರ್ಯವಾಗಿ ಎದುರಿಸುವ ಸಾಮರ್ಥ್ಯ ಬರಲಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಇಂಜಿನಿಯರ್ ಎಂ.ಆರ್. ಪಂಪನಗೌಡ ಮಾತನಾಡಿ, ಕರಾಟೆಯಂತಹ ಆತ್ಮರಕ್ಷಣೆಯ ಕಲೆಯನ್ನು ಮಹಿಳೆಯರು ಕಡ್ಡಾಯವಾಗಿ ಕಲಿಯಬೇಕಾಗಿದೆ. ಇದರಿಂದ ಮಾನ ಹಾಗೂ ಪ್ರಾಣ ಉಳಿಸಿಕೊಳ್ಳಲು ಕರಾಟೆ ಸಹಾಯಕವಾಗಲಿದೆ. ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆರ್ಟ್ಸ್ ಟ್ರಸ್ಟ್ ನ ಬಂಡ್ರಾಳು ಮೃತ್ಯುಂಜಯ ಸ್ವಾಮಿ ಅವರು ಅನೇಕ ವರ್ಷಗಳಿಂದ ಮಹಿಳೆಯರಿಗೆ ಉಚಿತವಾಗಿ ಕರಾಟೆ ಕಲಿಸಿಕೊಡುತ್ತಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಸವರಾಜಪ್ಪ, ಆನಂದರೆಡ್ಡಿ, ಹುಬ್ಬಳಗಂಡಿ ಬಸವರಾಜ ಹಾಗೂ ಉಪನ್ಯಾಸಕ ಸೂಗೂರೇಶ್ವರ ಭಾಗವಹಿಸಿದ್ದರು.ಪ್ರಾಸ್ತಾವಿಕ ಮಾತನಾಡಿದ ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆರ್ಟ್ಸ್ ಟ್ರಸ್ಟ್ ಅಧ್ಯಕ್ಷ ಬಂಡ್ರಾಳು ಮೃತ್ಯುಂಜಯಸ್ವಾಮಿ, ಟ್ರಸ್ಟ್ ವತಿಯಿಂದ ಆಯೋಜಿಸಲಾಗಿರುವ ಉಚಿತ ಬೇಸಿಗೆ ಕರಾಟೆ ಶಿಬಿರವು ಪ್ರತಿದಿನ ಬೆಳಗ್ಗೆ 6ರಿಂದ 7.30ರವರೆಗೆ ಹಾಗೂ ಸಂಜೆ 5.30 ರಿಂದ 7 ಗಂಟೆವರೆಗೆ ನಡೆಯಲಿದೆ. ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕರಾಟೆ ಶಿಕ್ಷಕ ವಾಸುದೇವರಾಜಲು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕರಾಟೆ ಪ್ರದರ್ಶನ ಜರುಗಿತು. ಗಣ್ಯರು ಮಕ್ಕಳಿಗೆ ಕರಾಟೆ ಪ್ರಮಾಣ ಪತ್ರ ವಿತರಿಸಿ, ಶುಭ ಹಾರೈಸಿದರು.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 620 ಅಂಕ ಪಡೆದಿರುವ ನಗರದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಓದುತ್ತಿರುವ ಟ್ರಸ್ಟ್ನ ಬ್ಲ್ಯಾಕ್ಬೆಲ್ಟ್ ವಿದ್ಯಾರ್ಥಿನಿ ಜಿ. ದೇವಿಕಾ ಅವರನ್ನು ಸನ್ಮಾನಿಸಲಾಯಿತು.