ನಮ್ಮ ಬ್ಯಾಂಕಿನ ಸದಸ್ಯರು, ಗ್ರಾಹಕರೇ ನಮ್ಮ ಮಾಲಕರು. ನಾವು ಕೇವಲ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.
ವಿಕಾಸ ಅರ್ಬನ್ ಬ್ಯಾಂಕಿನ ವಾರ್ಷಿಕ ಸರ್ವಸಾಧಾರಣ ಸಭೆಕನ್ನಡಪ್ರಭ ವಾರ್ತೆ ಯಲ್ಲಾಪುರ
ನಮ್ಮ ಬ್ಯಾಂಕಿನ ಸದಸ್ಯರು, ಗ್ರಾಹಕರೇ ನಮ್ಮ ಮಾಲಕರು. ನಾವು ಕೇವಲ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಇಷ್ಟೊಂದು ಸುದೀರ್ಘ ಅವಧಿಯಿಂದ ಪ್ರಾರಂಭಗೊಂಡ ಬ್ಯಾಂಕು ಸ್ವಂತ ಜಾಗ ಪಡೆಯುವುದಕ್ಕೆ ಸಾಧ್ಯವಾಗಲಿಲ್ಲ ಎಂಬ ನೋವಿದೆ. ಕೆಲವು ಕಾನೂನಿನ ತಾಂತ್ರಿಕ ತೊಂದರೆಗಳಿಂದಾಗಿ ಜಾಗ ಪಡೆಯಲಾಗಲಿಲ್ಲ. ಆದರೆ ಸದ್ಯದಲ್ಲೇ ಜಾಗ ಪಡೆಯುವ ವಿಶ್ವಾಸ ಹೊಂದಿದ್ದೇವೆ ಎಂದು ವಿಕಾಸ ಅರ್ಬನ್ ಕೋ ಅಪ್ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ ಹೇಳಿದರು.ಗುರುವಾರ ಪಟ್ಟಣದ ಅಡಕೆ ಭವನದಲ್ಲಿ ೨೯ನೇ ವಾರ್ಷಿಕ ಸರ್ವಸಾಧಾರಣ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಬ್ಯಾಂಕು ಸಾಕಷ್ಟು ಪ್ರಗತಿ ಸಾಧಿಸಿದೆ. ಹೊರಗಿನಿಂದ ಸಾಲ ತರದೇ ಸಾಲ ನೀಡುವಷ್ಟು ಗಟ್ಟಿಯಾಗಿದೆ. ನಮಗೆ ನಮ್ಮ ಠೇವಣಿದಾರರು ಮತ್ತು ಸಾಲಗಾರರೇ ಆಸ್ತಿಯಾಗಿದ್ದಾರೆ. ಇಂತಹ ಉತ್ತಮ ಬ್ಯಾಂಕಿನಲ್ಲಿ ಕಳೆದ ೧೯ ವರ್ಷಗಳ ಕಾಲ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾಗಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದ ಉಮೇಶ ಗೋಪಾಲ ಭಾಗ್ವತ ತಮ್ಮ ಕುಟುಂಬದ ಅನಿವಾರ್ಯ ಕಾರಣದಿಂದಾಗಿ ನಿವೃತ್ತಿ ಪಡೆದಿದ್ದಾರೆ. ಅವರ ಮುಂದಿನ ಜೀವನ ಯಶಸ್ವಿಯಾಗಲಿ ಎಂದರು.ಸನ್ಮಾನ ಸ್ವೀಕರಿಸಿದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಉಮೇಶ ಭಾಗ್ವತ ಮಾತನಾಡಿ, ಕುಟುಂಬದಲ್ಲಿ ಅನಿವಾರ್ಯ ಸ್ಥಿತಿ ಬಂದ ಪರಿಣಾಮ ಬ್ಯಾಂಕನ್ನು ಬಿಡಬೇಕಾಗಿದೆ. ನನಗೆ ಬ್ಯಾಂಕು ಜೀವನದಲ್ಲಿ ಯಶಸ್ಸು, ಕೀರ್ತಿ ಸಕಲವನ್ನೂ ನೀಡಿದೆ. ಬ್ಯಾಂಕಿನ ಋಣವನ್ನು ನನ್ನ ಜೀವನದಲ್ಲಿ ತೀರಿಸಲಾಗದು ಎಂದರು.
ಯು.ಕೆ. ಸೌಹಾರ್ದ ಸಹಕಾರಿಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಆರ್ಥಿಕ ಸಂಸ್ಥೆಯ ಕಾರ್ಯ ಎಂದರೇ ಇರುವವರಲ್ಲಿಯ ಹಣ ತಂದು ಎಲ್ಲರಿಗೂ ಹಂಚಿ ಎಲ್ಲರ ಪ್ರಗತಿಗೆ ಕಾರಣ ಉಂಟುಮಾಡುವುದು ಎಂದರು.ನಿರ್ದೇಶಕ ಡಿ.ಶಂಕರ ಭಟ್ಟ, ಮಾಜಿ ಅಧ್ಯಕ್ಷ ಪದ್ಮನಾಭ ಉಪಾಧ್ಯ, ಸಹಕಾರಿ ಇಲಾಖೆಯ ನಿವೃತ್ತ ಡೆಪ್ಯುಟಿ ಡೈರೆಕ್ಟರ್ ಜಿ.ಕೆ. ರಾಮಪ್ಪ ಮಾತನಾಡಿದರು. ಉಪಾಧ್ಯಕ್ಷ ನರಸಿಂಹ ಭಟ್ಟ, ನಿರ್ದೇಶಕರಾದ ಸುಬ್ರಾಯ ಭಾಗ್ವತ, ರವಿ ಹುಳ್ಸೆ, ಎಸ್.ಎಂ. ಭಟ್ಟ, ರಾಜೇಂದ್ರ ಬದ್ದಿ, ಲೋಕೇಶ ಗಿಡ್ಡನ್, ಬಸಯ್ಯ ನಡುವಿನಮನಿ, ಲಾರೆನ್ಸ್ ಸಿದ್ದಿ, ವಿಜಯಶ್ರೀ ವೈದ್ಯ, ಪ್ರಿಯಾ ಗಾಂವ್ಕರ ಉಪಸ್ಥಿತರಿದ್ದರು. ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ ರಾಜೇಶ ಬಿಳಗೀಕರ ನಿರ್ವಹಿಸಿದರು. ಶಾಖಾ ವ್ಯವಸ್ಥಾಪಕ ನರಸಿಂಹ ಹೆಬ್ಬಾರ ವರದಿ ವಾಚಿಸಿದರು. ನಿರ್ದೇಶಕ ಸದಾನಂದ ಭಟ್ಟ ಹಳವಳ್ಳಿ ವಂದಿಸಿದರು.