ಕನ್ನಡ ಪ್ರಭ ವಾರ್ತೆ ಶಿರಸಿ

ಮನುಷ್ಯತ್ವದ ಉಳಿವು, ನೆಮ್ಮದಿಯ ಜೀವನ ಹಾಗೂ ಬದುಕಿನ ಸಾರ್ಥಕತೆಗೆ ಧರ್ಮ ಅತ್ಯಗತ್ಯ. ಧರ್ಮದ ನೈಜ ಅರ್ಥವನ್ನು ಅರಿತು ಆಧ್ಯಾತ್ಮಿಕ ಬದುಕು ಕಟ್ಟಿಕೊಳ್ಳಲು ಭಗವದ್ಗೀತೆ ಮಾರ್ಗದರ್ಶಕ ಗ್ರಂಥವಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ‌ ಮಹಾ‌ಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಭಾನುವಾರ ತಾಲೂಕಿನ ಸೋಂದಾ ಸ್ವರ್ಣವಲ್ಲಿ ಮಠದ ಸುಧರ್ಮಾ ಸಭಾಭವನದಲ್ಲಿ ಆಯೋಜಿಸಿದ್ದ ಭಗವದ್ಗೀತೆ ಅಭಿಯಾನದ ಅಂತರ್ಜಾಲ ತರಗತಿಯ ಮೊದಲನೇ ಹಂತದ ಸಮರ್ಪಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನುಡಿದರು.

ಭಗವದ್ಗೀತೆ ಕೇವಲ ಧಾರ್ಮಿಕ ಗ್ರಂಥವಲ್ಲ. ಬದುಕಿನ ದಾರಿ ದೀಪವಾಗಿದೆ. ಜೀವನದಲ್ಲಿ ಧರ್ಮ ಇರಬೇಕು, ಧರ್ಮಕ್ಕೆ ಆಧ್ಯಾತ್ಮಿಕತೆ ಅಗತ್ಯ, ಆ ಆಧ್ಯಾತ್ಮಿಕತೆಯ ಮೂಲವೇ ಭಗವದ್ಗೀತೆ ಎಂದರು.

ಧರ್ಮವಿಲ್ಲದ ಮನುಷ್ಯ ಪಶುತ್ವದ ಮಟ್ಟಕ್ಕೆ ಇಳಿಯುತ್ತಾನೆ. ಆಹಾರ, ನಿದ್ರೆ ಮತ್ತು ಭಯ ಎಂಬ ಪ್ರವೃತ್ತಿಗಳು ಪ್ರಾಣಿಗಳಿಗೂ ಮನುಷ್ಯರಿಗೂ ಸಮಾನವಾಗಿದ್ದರೂ, ಧರ್ಮಾಚರಣೆಯೇ ಮನುಷ್ಯನನ್ನು ಶ್ರೇಷ್ಠನನ್ನಾಗಿಸುತ್ತದೆ ಎಂದು ಹೇಳಿದರು.


ಇಂದಿನ ಸಮಾಜದಲ್ಲಿ ಕುಟುಂಬ ವ್ಯವಸ್ಥೆ ಛಿದ್ರವಾಗುತ್ತಿದ್ದು, ವಿವಾಹ ವಿಚ್ಛೇದನ, ಮತಾಂತರ, ಉಗ್ರವಾದ ಹೆಚ್ಚಾಗುತ್ತಿರುವುದು ಕಳವಳಕಾರಿ ಬೆಳವಣಿಗೆ. ಇಂತಹ ಸಂದರ್ಭದಲ್ಲಿ ಭಗವದ್ಗೀತೆಯ ಕುರಿತು ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿದ್ವಾನ್ ಶಂಕರ ಭಟ್ಟ ಬಾಲಿಗದ್ದೆ, ಪ್ರಸ್ತುತ 71 ತರಗತಿಗಳಲ್ಲಿ 1,697 ವಿದ್ಯಾರ್ಥಿಗಳಿಗೆ 140 ಪ್ರಶಿಕ್ಷಕರ ಮೂಲಕ ಅಂತರ್ಜಾಲದ ಮೂಲಕ ಭಗವದ್ಗೀತೆ ಬೋಧಿಸಲಾಗುತ್ತಿದೆ. ಇದುವರೆಗೆ 13 ಬ್ಯಾಚ್‌ಗಳ 348 ವಿದ್ಯಾರ್ಥಿಗಳು ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇನ್ನುಳಿದ ಆಸಕ್ತರ ತರಗತಿ ಮುಂದುವರೆಯಲಿದೆ ಎಂದರು.

ಶ್ರೀಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ವಿದೂಷಿ ರಾಧಾ ದೇಸಾಯಿ, ಸವಿತಾ ಜೋಶಿ, ಸರಸ್ವತಿ ಮಾರಿಗೋಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೇಂದ್ರ ಮಾತೃಮಂಡಳಿಯ ವೇದಾ ಹೆಗಡೆ ನೀರ್ನಳ್ಳಿ ನಿರೂಪಿಸಿದರು. ಸವಿತಾ ಜೋಶಿ ವಂದಿಸಿದರು.

ಭಗವದ್ಗೀತೆ ತರಗತಿಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಪ್ರಶಿಕ್ಷಕರನ್ನು ಶ್ರೀಗಳು ಫಲ-ಮಂತ್ರಾಕ್ಷತೆ ನೀಡಿ ಗೌರವಿಸಿದರು. ಅಂತರ್ಜಾಲ ಅಧ್ಯಯನದ ಅನುಭವ ಕುರಿತು ಚಿನ್ಮಯ ಕೆರೆಗದ್ದೆ, ಭಾಗೀರಥಿ ಜೋಶಿ, ರೇಖಾ ಲಕ್ಷ್ಮಣ, ನೇತ್ರಾವತಿ ಹೆಗಡೆ ಕೆಂಚಗದ್ದೆ ಮತ್ತಿತರರು ಅಭಿಪ್ರಾಯ ಹಂಚಿಕೊಂಡರು.