ಸರ್ಕಾರ ಅಂಗನವಾಡಿ ಕಾರ್ಯಕರ್ತರಿಗೆ ಸೀರೆ ಕೊಡುವ ಬದಲು ಅವರ ಬೇಡಿಕೆಯಂತೆ ವೇತನ ಹೆಚ್ಚಳ ಮಾಡಿದರೆ ಅವರನ್ನು ಆರ್ಥಿಕವಾಗಿ ಸಬಲೀಕರಣ ಮಾಡಿದಂತಾಗುತ್ತದೆ. ಕೇವಲ ಸೀರೆ ಕೊಡುವುದರಿಂದ ಅವರ ಆರ್ಥಿಕ ಸಬಲೀಕರಣ ಸಾಧ್ಯವಿಲ್ಲ.
ಕನ್ನಡಪ್ರಭ ವಾರ್ತೆ ಮದ್ದೂರು
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ವರ್ಷಕ್ಕೆ ಎರಡು ಸೀರೆ ನೀಡುವ ಬದಲು ಕನಿಷ್ಠ ವೇತನ ಹೆಚ್ಚಳ ಮಾಡಬೇಕು ಎಂಬ ಬೇಡಿಕೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ಬೆಂಬಲ ವ್ಯಕ್ತಪಡಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಅಹಿಂದ ಸಂರಕ್ಷಣಾ ವೇದಿಕೆ ಕಾರ್ಯಕರ್ತರ ವತಿಯಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಅಂಗನವಾಡಿ ಕಾರ್ಯಕರ್ತರಿಗೆ ಸೀರೆ ಕೊಡುವ ಬದಲು ಅವರ ಬೇಡಿಕೆಯಂತೆ ವೇತನ ಹೆಚ್ಚಳ ಮಾಡಿದರೆ ಅವರನ್ನು ಆರ್ಥಿಕವಾಗಿ ಸಬಲೀಕರಣ ಮಾಡಿದಂತಾಗುತ್ತದೆ. ಕೇವಲ ಸೀರೆ ಕೊಡುವುದರಿಂದ ಅವರ ಆರ್ಥಿಕ ಸಬಲೀಕರಣ ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಸರ್ಕಾರದ ಸೀರೆ ವಿತರಣೆಗೆ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಹೀಗಾಗಿ ಸ್ವಲ್ಪಕನಿಷ್ಠ ವೇತನ ಹೆಚ್ಚಳ ಮಾಡಿದರು ಸಹ ಸೀರೆ ಖರೀದಿಸುವ ಹಣಕ್ಕೆ ವೇತನ ನೀಡಬಹುದು. ಇದರಿಂದ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.ಪ್ರಸಕ್ತ ಸಾಲಿನ ಬಜೆಟ್ ತೃಪ್ತಿ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಇದರಿಂದ ದೇಶದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಸರ್ಕಾರ ಈಗಾಗಲೇ ಶೇ.50ರಷ್ಟು ಹಣವನ್ನು ಮಹಿಳೆಯರ ಸಬಲೀಕರಣಕ್ಕೆ ವೆಚ್ಚ ಮಾಡುತ್ತಿದೆ. ಅಲ್ಲದೆ ವಿದ್ಯಾರ್ಥಿನಿಲಯಗಳ ಸಂಖ್ಯೆ ಹೆಚ್ಚಳ, ತಾಯಿ ,ಮಗುವಿನ ಆಸ್ಪತ್ರೆಗಳಿಗೆ ಮೂಲ ಸೌಲಭ್ಯ ಗಳಿಗೆ ಆದ್ಯತೆ ನೀಡಲಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ನೀಡಲಾಗಿದೆ ಎಂದರು.
ಮಹಿಳೆಯರ ಮೇಲಿನ ದೌರ್ಜನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹಿಳೆಯರು ಬೆಂಗಳೂರಿಗೆ ಬಂದು ನೇರವಾಗಿ ಆಯೋಗಕ್ಕೆ ದೂರು ನೀಡುವ ವ್ಯವಸ್ಥೆ ಬದಲಾಗಿ ತಾಂತ್ರಿಕವಾಗಿ ದೂರು ನೀಡುವ ವ್ಯವಸ್ಥೆ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ ಎಂದರು.ರಾಜ್ಯದ ಯಾವುದೇ ಜಿಲ್ಲೆಗಳ ನೊಂದ ಸಂತ್ರಸ್ತರು ಅವರು ಇರುವ ಸ್ಥಳಗಳಿಂದ ಮೊಬೈಲ್ ವಾಟ್ಸಪ್ ಸಹಾಯಕ ವಾಣಿಗೆ ದೂರು ನೀಡಲು ಹೆಚ್ಚಿನ ಅನುಕೂಲವಾಗುತ್ತದೆ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶಂಕರೇಗೌಡ, ತಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮಿ ಚನ್ನರಾಜು, ಅಹಿಂದ ಸಂಘಟನೆ ಮಹಿಳಾ ಮುಖಂಡರಾದ ಚಿಕ್ಕಮ್ಮ, ಬೆಸಗರಹಳ್ಳಿ ಮಂಜುಳಾ ಲೋಕೇಶ್, ಗ್ರಾಪಂ ಮಾಜಿ ಅಧ್ಯಕ್ಷೆ ಶಾಹಿನಾತಾಜ್, ತಾಲೂಕು ಕುರುಬರ ಸಂಘದ ಓಬಿಸಿ ಅಧ್ಯಕ್ಷ ಕೆ.ನಾಗರಾಜು, ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಸಾಲಾರ್, ದಲಿತ ಮುಖಂಡರಾದ ಮಹದೇವಯ್ಯ, ಮರಳಿಗ ಶಿವರಾಜು, ಶಶಿಕುಮಾರ್, ಮಲವರಾಜು ಮತ್ತಿತರರಿದ್ದರು.