ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಅಧಿನಿಯಮ 2025ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ ಬೆನ್ನಲ್ಲೇ ಈ ಕಾಯ್ದೆಯನ್ನು ಅಧಿಕೃತವಾಗಿ ಜಾರಿಗೊಳಿಸಿ ರಾಜ್ಯ ಸರ್ಕಾರ ರಾಜ್ಯಪತ್ರ ಹೊರಡಿಸಿದೆ.ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ರಾಜ್ಯದ ಕೆರೆಗಳ ಬಫರ್ಜೋನ್ ಈ ಮೊದಲಿಗಿಂತ ಕಡಿಮೆಯಾಗಲಿದೆ. ಜೊತೆಗೆ ಹೊಸ ಬಫರ್ಜೋನ್ ವಲಯದಲ್ಲಿ ರಸ್ತೆಗಳು, ಸೇತುವೆಗಳು, ಕೆರೆ ದಂಡೆ ಕೆಳಗೆ ನೀರು ಸರಬರಾಜು ಮಾರ್ಗಗಳು, ವಿದ್ಯುತ್ ಕಂಬಗಳಿಗೆ ಆಧಾರ ಪೀಠಗಳು, ಹೈಟೆನ್ಷನ್ ಗೋಪುರಗಳು, ಕೆರೆ ಭೂಮಿ ಅಥವಾ ಅದರ ಭಾಗವನ್ನೊಳಗೊಂಡು ಕೆರೆ ಪ್ರದೇಶದೊಳಗೆ ದಾರಿಗಳು ಮತ್ತು ಅದಕ್ಕೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳಬಹುದಾಗಿದೆ.
ಆದರೆ, ಈ ಕಾಮಗಾರಿಗಳನ್ನು ಕೈಗೊಳ್ಳುವುದರಿಂದ ಕೆರೆಗಳ ಮೂಲ ಸಾಮರ್ಥ್ಯ ಕಡಿಮೆಯಾಗಬಾರದು. ಕೆರೆಗಳ ನೀರು ಹರಿವಿನ ವಿರುದ್ಧವಾಗಿ, ನೀರು ಹರಿವಿನ ಕಡೆಗೆ ಕರೆಗಳಿಂದ ಅಥವಾ ಕೆರೆಗಳಿಗೆ ನೀರಿನ ಒಳ ಹರಿವು, ಹೊರ ಹರಿವಿನ ಸ್ವಾಭಾವಿಕ ಹರಿವಿಗೆ ಯಾವುದೇ ಅಡ್ಡಿಯುಂಟಾಗುವುದಿಲ್ಲ ಎಂದು ಪ್ರಾಧಿಕಾರ ಖಚಿತಪಡಿಸಿಕೊಂಡು ಕಾಮಗಾರಿ ಕೈಗೊಳ್ಳಬಹುದಾಗಿದೆ.ಕೆರೆಗಳ ಬಫರ್ ವಲಯ:
ಹೊಸದಾಗಿ ನಿರ್ದಿಷ್ಟಪಡಿಸಿರುವಂತೆ ಕೆರೆಯು 0.05ರಿಂದ ಮೇಲ್ಪಟ್ಟು 0.10 ಗುಂಟೆವರೆಗೆ ಇದ್ದರೆ 1 ಮೀಟರ್ ಬಫರ್ ವಲಯ, 0.10 ಗುಂಟೆಯಿಂದ 1 ಎಕರೆವರೆಗೆ 3 ಮೀಟರ್, 1 ರಿಂದ 10 ಎಕರೆವರೆಗೆ 6 ಮೀಟರ್, 10ರಿಂದ 25 ಎಕರೆವರೆಗೆ ಇದ್ದರೆ 12 ಮೀಟರ್, 25ರಿಂದ 100 ಎಕರೆವರೆಗೆ 24 ಮೀಟರ್ ಮತ್ತು 100 ಎಕರೆಗಿಂತ ಮೇಲ್ಪಟ್ಟು 30 ಮೀಟರ್ ಬಫರ್ವಲಯ ಎಂದು ನಿಗದಿಪಡಿಸಲಾಗಿದೆ.
ಈ ಹಿಂದೆ ಕೆರೆ, ರಾಜಕಾಲುವೆ ಒಳಗೊಂಡು ಜಲಮೂಲಗಳ ಬಫರ್ ಜೋನ್ ಅನ್ನು 30 ಮೀಟರ್ಗೆ ಕಡಿತಗೊಳಿಸಿ ಮತ್ತು ಬಫರ್ಜೋನ್ನಲ್ಲಿ ಮೂಲ ಸೌಕರ್ಯ ಒದಗಿಸುವ ಕಾಮಗಾರಿ ಕೈಗೊಳ್ಳಲು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕವನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಿಕೊಡಲಾಗಿತ್ತು. ಆದರೆ, ಕೆಲ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಾಜ್ಯಪಾಲರು ವಿಧೇಯಕಕ್ಕೆ ಸಹಿ ಹಾಕದೆ ಹಿಂತಿರುಗಿಸಿದ್ದರು. ಇದಕ್ಕೆ ಸರ್ಕಾರ ವಿಧೇಯಕದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು, ಅಗತ್ಯ ಸ್ಪಷ್ಟನೆ ನೀಡಿದ್ದರಿಂದ ರಾಜ್ಯಪಾಲರು ವಿಧೇಯಕಕ್ಕೆ ಅನುಮೋದನೆ ನೀಡಿದ್ದಾರೆ.
