ಮರಕ್ಕೆ ಕಾರು ಡಿಕ್ಕಿ, ಕಾರಿನಲ್ಲಿದ್ದ ಪ್ರಯಾಣಿಕರು ಪಾರು

| Published : Feb 26 2024, 01:38 AM IST

ಸಾರಾಂಶ

ಈ ರಸ್ತೆಯ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಅತಿ ಹೆಚ್ಚಾಗಿ ಧೂಳು ಆವರಿಸುತ್ತಿದೆ. ಇದರಿಂದ ತಿರುಗಾಡಲು ತುಂಬಾ ಕಷ್ಟಕರವಾಗುತ್ತಿದೆ. ಧೂಳು ಆವರಿಸಿಕೊಂಡು ಸರಿಯಾಗಿ ರಸ್ತೆ ಕಾಣದೆ ಇಂತಹ ಅಪಘಾತಗಳು ಸಂಭವಿಸುತ್ತಿವೆ.

ಕನ್ನಡಪ್ರಭ ವಾರ್ತೆ ಹನೂರು

ಪಟ್ಟಣದ ಸಮೀಪ ಬೆಂಗಳೂರು ಮೂಲದ ಕಾರೊಂದು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಗಾಯಗೊಂಡಿದ್ದ ಪ್ರಯಾಣಿಕರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಮುಗಿಸಿಕೊಂಡು ತಮ್ಮ ಸ್ವಗ್ರಾಮಕ್ಕೆ ಮರಳುತ್ತಿದ್ದಾಗ ಭಾನುವಾರ ಅವಘಡ ಸಂಭವಿಸಿದೆ.

ಅಪಘಾತಕ್ಕೆ ಕಾರಣ:

ಈ ರಸ್ತೆಯ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಅತಿ ಹೆಚ್ಚಾಗಿ ಧೂಳು ಆವರಿಸುತ್ತಿದೆ. ಇದರಿಂದ ತಿರುಗಾಡಲು ತುಂಬಾ ಕಷ್ಟಕರವಾಗುತ್ತಿದೆ. ಧೂಳು ಆವರಿಸಿಕೊಂಡು ಸರಿಯಾಗಿ ರಸ್ತೆ ಕಾಣದೆ ಇಂತಹ ಅಪಘಾತಗಳು ಸಂಭವಿಸುತ್ತಿವೆ. ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕೆಂದರೆ ಈ ರಸ್ತೆಯ ಕಾಮಗಾರಿ ಬೇಗ ಪೂರ್ಣಗೊಳಿಸಿ ಎಂದು ಛಲವಾದಿ ಮಹಾಸಭಾ ತಾಲೂಕು ಸಮಿತಿಯು ಪಟ್ಟಣದ ತಹಿಸೀಲ್ದಾರ್ ಗೆ ದೂರು ಸಲ್ಲಿಸಿ ಆಗ್ರಹಿಸಿದ್ದಾರೆ.

ಕಳೆದ ಎಂಟು ತಿಂಗಳಿನಿಂದ ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿದೆ, ರಸ್ತೆಯನ್ನು ಅಗೆದು ಜಲ್ಲಿಕಲ್ಲು ಹಾಕಿರುವುದರಿಂದ ಧೂಳು ಆವರಿಸಿದೆ. ಸಂಬಂಧಪಟ್ಟ ಜನ ಪ್ರತಿನಿಧಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಛಲವಾದಿ ಮಹಾಸಭಾ ತಾಲೂಕು ಸಮಿತಿ ಅಧ್ಯಕ್ಷ ಬಸವರಾಜ್ ಒತ್ತಾಯಿಸಿದ್ದಾರೆ.