ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲಇನ್ನು ಕೆಲವೇ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆಯು ಮಾನವನ ಬುದ್ಧಿಮತ್ತೆಯನ್ನು ಮೀರಿ ಬೆಳೆಯಲಿದೆ. ಆದರೆ ಅದನ್ನು ಎಚ್ಚರಿಕೆಯಿಂದ ಬಳಸಿಕೊಳ್ಳುವ ಬಹಳ ದೊಡ್ಡ ಸವಾಲು ಮುಂದಿದೆ ಎಂದು ಗಣಕ ಭಾಷಾಶಾಸ್ತ್ರಜ್ಞ ಮತ್ತು ವಿದ್ವಾಂಸ ಪ್ರೊ. ಕೆ. ಪಿ. ರಾವ್ ಎಚ್ಚರಿಸಿದ್ದಾರೆ.ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಆಶ್ರಯದಲ್ಲಿ ನಡೆದ ಡಿಕೋಡಿಂಗ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಷಯದ ಕುರಿತು ಮಾತನಾಡಿದರು.ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯನ್ನು ಎಚ್ಚರಿಕೆಯಿಂದ ಬಳಸಿದರೆ ಹಲವು ಸಾಧ್ಯತೆಗಳನ್ನು ಸಾಧಿಸಬಹುದಾಗಿದೆ. ಭದ್ರತೆ, ಆಟೋ ಮೊಬೈಲ್, ಯಾಂತ್ರಿಕ ಕ್ಷೇತ್ರಗಳಲ್ಲಿಯೂ ಕೃತಕ ಬುದ್ಧಿಮತ್ತೆಯು ನಿರ್ಣಾಯಕ ಪಾತ್ರ ವಹಿಸಬಹುದಾಗಿದೆ. ಸಂಗೀತ, ಕಥನ ಕಲೆ, ವೀಡಿಯೋ ಎಡಿಟಿಂಗ್ ಮತ್ತು ಮಾಧ್ಯಮದಂತಹ ಸೃಜನಶೀಲ ಕ್ಷೇತ್ರಗಳಲ್ಲಿಯೂ ಕೃತಕ ಬುದ್ಧಿಮತ್ತೆಯಿಂದ ಬಹು ಉಪಯೋಗಗಳನ್ನು ಹೊಂದಬಹುದು ಎಂದು ಹೇಳಿದರು.ವಿಜ್ಞಾನ ಮತ್ತು ತಾಂತ್ರಿಕ ಪ್ರಗತಿಯನ್ನು ನಿಲ್ಲಿಸಲು ಸಾಧ್ಯವಿಲ್ಲ, ಆದ್ದರಿಂದ ನಾವು ಕೃತಕ ಬುದ್ಧಿಮತ್ತೆಯನ್ನು ಅಪಾಯಕಾರಿಯಾಗದಂತೆ ಎಚ್ಚರಿಕೆಯಿಂದ ಉಪಯೋಗಿಸಬೇಕು. ಅದು ಮಾನವನಿಗೆ ಸಹಾಯಕನಾಗಿಯೇ ಇರುವಂತೆ ನೋಡಿಕೊಳ್ಳಬೇಕು. ಆದಾಗಿಯೂ, ಕೃತಕ ಬುದ್ಧಿಮತ್ತೆಯನ್ನು ಮಾನವನೇ ಕುಂಡುಹಿಡಿದು ಅಭಿವೃದ್ಧಿಪಡಿಸುವುದರಿಂದ ಅಂತಿಮವಾಗಿ ಅದು ಮಾನವನ ಬುದ್ಧಿವಂತಿಕೆಯ ಮೇಲೆಯೇ ಅವಲಂಬಿತವಾಗಿರುತ್ತದೆ ಎಂದೂ ಅವರು ಹೇಳಿದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಅವರು ದತ್ತಾಂಶ, ಮಾಹಿತಿ ಮತ್ತು ಕೃತಕ ಬುದ್ಧಿಮತ್ತೆಯ ಜ್ಞಾನವನ್ನು ನಿಭಾಯಿಸಲು ಅಗತ್ಯವಾದ ಬುದ್ಧಿವಂತಿಕೆಯ ಕುರಿತು ಮಾತನಾಡಿದರು.ವಿದ್ಯಾರ್ಥಿನಿ ತನಿಷ್ಕಾ ಕೋಟ್ಯಾನ್ ಸಂವಾದವನ್ನು ನಿರ್ವಹಿಸಿದರು. ಡಾ.ರೇಸ್ಮಿ ಭಾಸ್ಕರನ್, ಥಾಮಸ್, ಡಾ.ಜನಾರ್ದನ್ ಹಾವಂಜೆ ಮತ್ತಿತರರು ಉಪಸ್ಥಿತರಿದ್ದರು.