ಸಾರಾಂಶ
ಜನತಾ ದರ್ಶನ ಉದ್ಘಾಟಿಸಿ ಶಾಸಕರ ಮಾತು । ಜನರೊಂದಿಗೆ ಬೆರೆತು ಸಮಸ್ಯೆ ಪರಿಹರಿಸಲು ಸೂಚನೆ
ಕನ್ನಡಪ್ರಭ ವಾರ್ತೆ ಹೊಸದುರ್ಗಆಡಳಿತ ವ್ಯವಸ್ಥೆಗೆ ಚುರುಕು ಮೂಡಿಸಿ ಜನರು ಬಯಸಿದ್ದ ಬದಲಾವಣೆ ತರಲಾಗಿದೆ. ಜನತಾ ದರ್ಶನ ಮಾದರಿಯಲ್ಲಿ, ತಾಲೂಕು ಆಡಳಿತ ವತಿಯಿಂದ ಪ್ರತಿ ಮಂಗಳವಾರ ಗ್ರಾಪಂ ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.
ಪಟ್ಟಣದ ಹೊಳಲ್ಕೆರೆ ರಸ್ತೆ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರ ಮನೆ ಬಾಗಿಲಿಗೆ ಆಡಳಿತ ಕೊಂಡೊಯ್ಯುವ ಹಾಗೂ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವ ಹೊಣೆ ತಾಲೂಕು ಹಾಗೂ ಜಿಲ್ಲಾಡಳಿತದ ಮೇಲಿದೆ. ಜನತಾ ದರ್ಶನ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ಗ್ರಾಮ ಮಟ್ಟದಲ್ಲಿ ಪಿಡಿಓ, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿ, ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸಿದರೆ, ಜನರು ಅಲೆಯುವುದು ತಪ್ಪುತ್ತದೆ. ಜನರ ಸಮಸ್ಯೆಗಳಿಗೆ ಉತ್ತರ ಒದಗಿಸಲು, ಅಧಿಕಾರಿಗಳು ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಮಾಡುವ ಅಗತ್ಯವಿಲ್ಲ. ಜನರನೊಂದಿಗೆ ಬೆರತರೆ ಸಮಸ್ಯೆಗಳನ್ನು ಪರಿಹರಿಸಬಹುದು ಎಂದರು.ಇ-ಆಪೀಸ್ ಉದ್ಘಾಟನೆ :ಆಡಳಿತದಲ್ಲಿ ಪಾರದರ್ಶಕತೆ ತರಲು ಹಾಗೂ ತುರ್ತಾಗಿ ಜನರ ಅರ್ಜಿಗಳನ್ನು ವಿಲೇವಾರಿ ಮಾಡಲು ಹೊಸದುರ್ಗ ತಾಲೂಕು ಕಚೇರಿಯಲ್ಲಿ ಇ-ಆಪೀಸ್ ಉದ್ಘಾಟನೆ ಮಾಡಲಾಗಿದೆ. ಆರಂಭದಲ್ಲಿ ಅರ್ಜಿಗಳನ್ನು ಗಣಕೀಕರಣಗೊಳಿಸಿ, ಆನ್ಲೈನ್ ಮೂಲಕವೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ರವಾನಿಸಲಾಗುವುದು. ತಾಲೂಕಿನಲ್ಲಿ ಬಹಳಷ್ಟು ರೈತರು ಬಗರ್ ಹುಕುಂ ಅಡಿ ಸಾಗುವಳಿ ಜಮೀನು ಒಡೆತನಕ್ಕಾಗಿ ಅರ್ಜಿ ಸಲ್ಲಿಸಿದ್ದೀರಿ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ತಹಸೀಲ್ದಾರ್ಗೆ ನಿರ್ದೇಶನ ನೀಡಿದ್ದೇನೆ. ಕಂದಾಯ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳು ಜಮೀನುಗಳ ಸರ್ವೇ ನಡೆಸಿ ವರದಿ ಸಲ್ಲಿಸುವರು. ಇದನ್ನು ಆಧರಿಸಿ ಬಗರ್ ಹುಕುಂ ಸಭೆಯಲ್ಲಿ ಸಾಗುವಳಿ ಚೀಟಿ ನೀಡಲು ಕ್ರಮಕೈಗೊಳ್ಳಲಾಗುವುದು. ಕಳೆದ ಸರ್ಕಾರದ ಅವಧಿಯಲ್ಲಿ 94 ಸಿ ಹಾಗೂ 94 ಸಿಸಿ ಅಡಿ ಮನೆ ಹಕ್ಕುಪತ್ರ ನೀಡಲು ಅರ್ಜಿ ಸ್ವೀಕರಿಸಲಾಗಿದೆ. ಶೀಘ್ರವಾಗಿ ಇದರ ಅಡಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಹಕ್ಕು ಪತ್ರ ನೀಡಲಾಗುವುದು. ಈ ಕಾರ್ಯಗಳಿಗಾಗಿ ಜನರು ಜಿಲ್ಲಾಧಿಕಾರಿಗಳ ಕಚೇರಿ ಸುತ್ತುವ ಅಥವಾ ಮಧ್ಯವರ್ತಿ ಹಿಡಿಯುವ ಅಗತ್ಯವಿಲ್ಲ. ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಿದರೆ ಸಾಕು ಎಂದರು . ಕುಡಿಯುವ ನೀರಿನ ಬಗ್ಗೆ ಕ್ರಮ ವಹಿಸಿ: ಪಿಡಿಒಗಳು ನಿತ್ಯ ಕಚೇರಿಯಲ್ಲಿ ಇದ್ದು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಅನಗತ್ಯವಾಗಿ ಕೊಳೆ ಬಾವಿ ಕೊರೆಸದೆ, ಹಿಂದಿನ ಕೊಳೆಬಾವಿಗಳಲ್ಲಿಯೇ ಪೈಪ್ಗಳನ್ನು ಆಳಕ್ಕೆ ಇಳಿಸಿ ನೀರು ತೆಗೆಯುವ ಕೆಲಸ ಮಾಡಬೇಕು. ಭದ್ರಾ ಮೇಲ್ದಂಡೆ ಯೋಜನೆ ಭರದಿಂದ ಸಾಗಿದೆ. ಯೋಜನೆಗೆ ಹಣ ಕೊರತೆ ಇಲ್ಲ. ಯೋಜನೆಗೆ ಅಗತ್ಯವಾದ ಭೂ ಸ್ವಾಧೀನಕ್ಕೆ ಕ್ರಮ ವಹಿಸಲಾಗಿದೆ. ಯೋಜನೆ ಅನುಷ್ಠಾನದಿಂದ ಹೊಸದುರ್ಗ ತಾಲೂಕಿನ 1.33 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಉಣಿಸಲಾಗುವುದು. ₹ 350 ಕೋಟಿ ವೆಚ್ಚದಲ್ಲಿ ಭದ್ರಾ ನದಿಯಿಂದ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆ ತ್ವರಿತವಾಗಿ ನಡೆಯುತ್ತಿದೆ. ಮಾರ್ಚ್ ವೇಳೆಗೆ ತಾಲೂಕಿನ 350 ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರು ನೀಡಲಾಗುವುದು. ತಾಲೂಕಿನ 101 ಕೆರೆಗಳಿಗೆ ತುಂಗಾ ನದಿಯಿಂದ ನೀರು ಲಿಫ್ಟ್ ಮಾಡುವ ಕೆಲಸ ಆಗಬೇಕಿದ್ದು, ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದರು. ಜಿಲ್ಲಾಧಿಕಾರಿ ದಿವ್ಯಾಪ್ರಭು ಮಾತನಾಡಿ, ಪ್ರತಿ ತಿಂಗಳು ಸಚಿವರ ನೇತೃತ್ವದಲ್ಲಿ ಒಂದು ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎರಡು ಕಾರ್ಯಕ್ರಮ ನಡೆಸಲಾಗುವುದು. ಸಾರ್ವಜನಿಕರ ಸಮಸ್ಯೆಗಳನ್ನು ಗ್ರಾಮದಲ್ಲಿಯೇ ಪರಿಹರಿಸುವುದು ಇದರ ಉದ್ದೇಶ. ಇಲಾಖೆವಾರು ಅರ್ಜಿ ಸ್ವೀಕರಿಸಿ ಸ್ವೀಕೃತಿ ನೀಡಿ, ಅವುಗಳ ಸ್ಥಿತಿಗತಿಗಳ ಮೇಲೆ ನಿಗಾ ಇರಿಸಲಾಗುವುದು. ಇ-ಆಪೀಸ್ ಮೂಲಕ ಸಾರ್ವಜನಿಕರು ಅರ್ಜಿ ಸಂಖ್ಯೆ ನಮೂದಿಸಿ ಅರ್ಜಿಯ ಸ್ಥಿತಿಗತಿ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಅನಗತ್ಯವಾಗಿ ಜನರ ಅಲೆದಾಟ ತಪ್ಪಿಸಲು, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಇ- ಆಪೀಸ್ ಅನುಷ್ಠಾನಕ್ಕೆ ತರಲಾಗಿದೆ ಎಂದರು. ಜಿಪಂ ಸಿಇಓ ಎಸ್.ಜೆ.ಸೋಮಶೇಖರ್ ಮಾತನಾಡಿ, ಕಳೆದ ಎರಡು ಜನತಾ ದರ್ಶನ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಸಂಬಂಧಿಸಿದ 52 ಅರ್ಜಿಗಳು ಸ್ವೀಕೃತವಾಗಿದ್ದವು. ಇವುಗಳ ಸಂಬಂದಪಟ್ಟ ಅಧಿಕಾರಿಗಳ ಮೂಲಕ ಇತ್ಯರ್ಥ ಮಾಡಲಾಗಿದೆ. ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಅರ್ಜಿ ಇತ್ಯರ್ಥ ಪಡಿಸುವಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯಡಿ ಪಾಸ್ ಬುಕ್ ವಿತರಿಸಲಾಯಿತು. ರೈತ ಆತ್ಮಹತ್ಯೆ ಪ್ರಕರಣದಲ್ಲಿ ರೈತನ ಪತ್ನಿಗೆ ಪಿಂಚಣಿ ಮಂಜೂರಾತಿ ಪತ್ರ ನೀಡಲಾಯಿತು. ವಿಕಲಚೇತನರ ಕಲ್ಯಾಣ ಇಲಾಖೆಯಿಂದ ಜಿಪಂ ಅನುದಾನದಡಿ 03, ಡಿಎಂಎಫ್ ಅನುದಾನದಡಿ 04 ಸೇರಿದಂತೆ ಒಟ್ಟು 07 ಫಲಾನುಭವಿಗಳಿಗೆ ತ್ರಿ ಚಕ್ರವಾಹನಗಳನ್ನು ವಿತರಿಸಲಾಯಿತು.ಉಪವಿಭಾಗಧಿಕಾರಿ ಆರ್.ಕಾರ್ತೀಕ್ , ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ,ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಓ.ಪರಮೇಶ್ವರಪ್ಪ, ಬೆಸ್ಕಾಂ ಎಇಇ ನಿರಂಜನ್ ಮೂರ್ತಿ, ತಹಸೀಲ್ದಾರ್ ತಿರುಪತಿ ಪಾಟೀಲ್, ಸೇರಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.-------------------
ವೇದಾವತಿ ನದಿಗೆ ಭದ್ರಾ ನೀರು ಹರಿಸಬೇಕು ಎಂದು ಕಡೂರು, ತರಿಕೇರೆ ಹಾಗೂ ಹೊಸದುರ್ಗ ತಾಲೂಕು ಜನರು ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜರುಗುವ ವಿಶ್ವೇಶ್ವರಯ್ಯ ಜಲ ನಿಗಮದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗುವುದು - ಬಿಜಿ ಗೋವಿಂದಪ್ಪ ಶಾಸಕರು. ಹೊಸದುರ್ಗ-------------------