ಯಾದಗಿರಿಯ ಸೀಝ್ ಮಾಡಿದ್ದ ಕೆಮಿಕಲ್‌ ಕಂಪನಿಯ ಬೀಗಮುದ್ರೆ ತೆರವು

| Published : Jul 19 2025, 02:00 AM IST

ಯಾದಗಿರಿಯ ಸೀಝ್ ಮಾಡಿದ್ದ ಕೆಮಿಕಲ್‌ ಕಂಪನಿಯ ಬೀಗಮುದ್ರೆ ತೆರವು
Share this Article
  • FB
  • TW
  • Linkdin
  • Email

ಸಾರಾಂಶ

ಪರಿಸರ ಮಾಲಿನ್ಯ ಮಂಡಳಿ ಷರತ್ತುಗಳ ಉಲ್ಲಂಘಿಸಿದ ಆರೋಪದಡಿ, ಇದೇ ಜೂ. 9 ರಂದು ಇಲ್ಲಿನ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಮೆ. ಶ್ರೀ ಆದಿತ್ಯ ಫಾರ್ಮಾಕೆಮ್‌ ಕಂಪನಿಗೆ ಜಿಲ್ಲಾಡಳಿತ ಜಡಿದಿದ್ದ ಬೀಗಮುದ್ರೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದನ್ವಯ ಶುಕ್ರವಾರ ತೆರವುಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಪರಿಸರ ಮಾಲಿನ್ಯ ಮಂಡಳಿ ಷರತ್ತುಗಳ ಉಲ್ಲಂಘಿಸಿದ ಆರೋಪದಡಿ, ಇದೇ ಜೂ. 9 ರಂದು ಇಲ್ಲಿನ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಮೆ. ಶ್ರೀ ಆದಿತ್ಯ ಫಾರ್ಮಾಕೆಮ್‌ ಕಂಪನಿಗೆ ಜಿಲ್ಲಾಡಳಿತ ಜಡಿದಿದ್ದ ಬೀಗಮುದ್ರೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದನ್ವಯ ಶುಕ್ರವಾರ (ಜು.18) ತೆರವುಗೊಳಿಸಲಾಗಿದೆ.

ಜಲ (ತಡೆಗಟ್ಟುವಿಕೆ ಮತ್ತು ಮಾಲಿನ್ಯ ನಿಯಂತ್ರಣ) ಅಧಿನಿಯಮ, 1974ರ ಸೆಕ್ಷನ್ 33 (ಎ) ಅಡಿಯಲ್ಲಿ ಮತ್ತು ಕರ್ನಾಟಕ ರಾಜ್ಯ ಜಲ ಮಾಲಿನ್ಯ ತಡೆ

ಮತ್ತು ನಿಯಂತ್ರಣ ಮಂಡಳಿ (ವ್ಯವಹಾರದ ಪ್ರಕ್ರಿಯೆ) ನಿಯಮಗಳು ಮತ್ತು ಜಲ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ನಿಯಮಗಳು, 1976ರ ನಿಯಮ 34ರೊಂದಿಗೆ ಮಂಡಳಿಯಿಂದ ಹೊರಡಿಸಲಾದ ಮುಚ್ಚುವಿಕೆ ನಿರ್ದೇಶನಗಳು ಮತ್ತು ಮಿ/ಸ್. ಶ್ರೀ ಆದಿತ್ಯ ಫಾರ್ಮಾಕೆಮ್, ಪ್ಲಾಟ್ ನಂ. 265, ಕಡೇಚೂರ ಕೈಗಾರಿಕಾ ಪ್ರದೇಶ, ಯಾದಗಿರಿ ತಾಲೂಕು ಮತ್ತು ಜಿಲ್ಲೆ ಇವರಿಗೆ ಹೊರಡಿಸಿದ CFO (Consent for Operation) ವಾಪಸ್ ಪಡೆಯುವ ಆದೇಶವನ್ನು ಕೆಳಗಿನ ಷರತ್ತುಗಳೊಂದಿಗೆ ಆರು ತಿಂಗಳ ಕಾಲ ಅಮಲಿನಲ್ಲಿ ಇರಿಸಲಾಗುತ್ತದೆ ಎಂದು ಮಂಡಳಿ ಆದೇಶ ಹೊರಡಿಲಾಗಿದೆ. ಅರ್ಜಿದಾರರು ಶಪಥಪತ್ರದಲ್ಲಿ ನೀಡಿದ ಬದ್ಧತೆಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.

ಜಿಲ್ಲೆಯ ಯಾದಗಿರಿ ತಾಲೂಕಿನ ಕಡೇಚೂರು ಕೈಗಾರಿಕಾ ಪ್ರದೇಶದ ಪ್ಲಾಟ.ನಂ.265ರಲ್ಲಿರುವ M/s. Sri Aditya Pharmachem ರವರ ಕಾರ್ಖಾನೆಯನ್ನು ಸೀಜ್ ಮಾಡಿದ ಉಲ್ಲೇಖ (2) ರ ಆದೇಶವನ್ನು 06 ತಿಂಗಳ ಅವಧಿಗೆ ಷರತ್ತು ಪಾಲಿಸುವ ನಿರ್ದೇಶನದೊಂದಿಗೆ ಕಾರ್ಖಾನೆಯನ್ನು ಪುನಃ ತೆರೆಯಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಗಳ ನಿರ್ದೇಶನ ನೀಡಿದ್ದಾರೆ. ಈ ಪ್ರಯುಕ್ತ, ಅವರ ಆದೇಶದಂತೆ ಯಾದಗಿರಿ ತಾಲೂಕಿನ ಕಡೇಚೂರು ಕೈಗಾರಿಕಾ ಪ್ರದೇಶದ ಪ್ಲಾಟ.ನಂ.265 ರಲ್ಲಿರುವ M/s. Sri Aditya Pharmachem ಕಾರ್ಖಾನೆಯನ್ನು ಪುನಃ ತೆರೆಯಲು ಸಂಬಂಧಪಟ್ಟವರಿಗೆ ನಿರ್ದೇಶಿಸಿದೆ ಎಂದು ಜಿಲ್ಲಾಧಿಕಾರಿ ಕಚೇರಿಯಿಂದ ಸಂಬಂಧಿತ ಅಧಿಕಾರಿಗಳಿಗೆ ಅಧಿಕೃತ ಜ್ಞಾಪನಾ ಪತ್ರದ ಹಿನ್ನೆಲೆಯಲ್ಲಿ, ಶುಕ್ರವಾರ ಅಧಿಕಾರಿಗಳ ತಂಡ ಬೀಗಮುದ್ರೆ ತೆರವಗೊಳಿಸಿದೆ.

* ಏನಾಗಿತ್ತು ?:1974 ರ ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆಯ ನಿಬಂಧನೆಗಳನ್ನು ಪಾಲಿಸದೇ ಇರುವುದರಿಂದ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಗಳು M/s. Sri Aditya Pharmachem, Plot, 265, Kadechur Industrial Area, Yadagir ಕಂಪನಿಯನ್ನು ಮುಚ್ಚಿಸಲು (Sieze) ಆದೇಶಿಸಿದ್ದರು.

ಸರ್ಕಾರದ ಷರತ್ತುಗಳ ಉಲ್ಲಂಘಿಸಿದ ಕೆಮಿಕಲ್ ಕಂಪನಿಗಳ ವಿರುದ್ಧ ಮೊದಲ ಹಂತದ ಭಾಗವಾಗಿ ಅಂದಿನ ಜಿಲ್ಲಾಡಳಿತ 27 ಕಂಪನಿಗಳಿಗೆ ಪರಿಷ್ಕೃತ ನೋಟೀಸ್‌ ನೀಡಿತ್ತು. ಅದರಂತೆ, ಯಾದಗಿರಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಹಾಗೂ ತಹಸೀಲ್ದಾರ ಸುರೇಶ ಅಂಕಲಗಿ ನೇತೃತ್ವದ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡವು ಜೂ.9 ರಂದು ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀ ಆದಿತ್ಯ ಫಾರ್ಮಾಕೆಮ್‌ ಕಂಪನಿಗೆ ಬೀಗ (ಸೀಝ್‌) ಜಡಿದಿದ್ದರು.

ಯಾವ ಪುರುಷಾರ್ಥಕ್ಕೋಸ್ಕರ ಬಂದ್‌ ಮಾಡಿದ್ದರು..!?

ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ರಾಸಾಯನಿಕ ಕಂಪನಿಗಳು ಪರಿಸರದ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯನಿರ್ವಹಿಸುತ್ತಿರುವುದರಿಂದ ಈ ಭಾಗದ ಜನರಿಗೆ ಅನೇಕ ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಈ ಕುರಿತು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಪರಿಶೀಲನೆ ತಂಡ ರಚಿಸಿದ ನಂತರ, ಆ ತಂಡದ ವರದಿಯಂತೆ 27 ಕಂಪನಿಗಳಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಕೆಲವರ ಪ್ರಭಾವದಿಂದ ಕೇವಲ ಒಂದು ಕಂಪನಿಗೆ ಬೀಗ ಹಾಕಿ, ಇನ್ನುಳಿದ ಕಂಪನಿಗಳ ವಿರುದ್ಧ ಯಾವ ಕ್ರಮವೂ ಕೈಗೊಂಡಿರಲಿಲ್ಲ. ತಪ್ಪು ಮಾಡಿದ್ದಾರೆ ಎಂದು ಬೀಗ ಹಾಕಿದ್ದ ಕಂಪನಿಗೆ ಮತ್ತೆ ಇಂದು ಸರಕಾರವೇ ಪುನರಾರಂಭಿಸಲು ಅನುಮತಿ ನೀಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಅಂದರೆ ಇಲ್ಲಿಯವರೆಗೆ ಆ ಕಂಪನಿಗಳು ಎಷ್ಟೋ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿರುವುದಕ್ಕೆ ಯಾವ ಕ್ರಮ ಕೈಗೊಳ್ಳಲಾಯಿತು? ಅಂದರೆ ಅವರು ನಿಯಮಗಳು ಪಾಲಿಸುತ್ತಿದ್ದರೆ ನಮಗೆ ದುರ್ನಾತ, ಮೀನುಗಳ ಮಾರಣಹೋಮ, ಮಕ್ಕಳ, ವಯೋವೃದ್ಧರ ಉಸಿರಾಟ ತೊಂದರೆ ಹೇಗಾಯ್ತು? ಯಾವ ಪುರುಷಾರ್ಥಕ್ಕೋಸ್ಕರ ಕಂಪನಿ ಬಂದ್ ಮಾಡಿ, ಮತ್ತೆ ಪ್ರಾರಂಭಿಸಿದ್ದೀರಿ? ಇದರಿಂದಾಗಿ ಈ ಭಾಗದ ಜನರು ಅಧಿಕಾರಿಗಳ ಮೇಲೆ ಇರುವ ನಂಬಿಕೆಯನ್ನು ಕಳೆದುಕೊಂಡಿದ್ದಾರೆ.

-ಪ್ರಭು ಗೂಗಲ್, ಸೈದಾಪುರ.