ಮಾಜಿ ಸಚಿವರಾದ ಹರತಾಳು ಹಾಲಪ್ಪ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಬರುವ ಹಂಬಲದಲ್ಲಿದ್ದಾರೆ. ಆದರೆ, ಕಾಂಗ್ರೆಸ್‌ ಪಕ್ಷ ಬಾಗಿಲು ತೆರೆದು ಅವರ ಸ್ವಾಗತಕ್ಕೆ ನಿಂತಿಲ್ಲ ಎಂದು ಹೊಸನಗರ-ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಸನಗರ

ಮಾಜಿ ಸಚಿವರಾದ ಹರತಾಳು ಹಾಲಪ್ಪ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಬರುವ ಹಂಬಲದಲ್ಲಿದ್ದಾರೆ. ಆದರೆ, ಕಾಂಗ್ರೆಸ್‌ ಪಕ್ಷ ಬಾಗಿಲು ತೆರೆದು ಅವರ ಸ್ವಾಗತಕ್ಕೆ ನಿಂತಿಲ್ಲ ಎಂದು ಹೊಸನಗರ-ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿ ಗಾಂಧಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಇತ್ತೀಚೆಗೆ ಮಾಡಿದ ಆರೋಪಕ್ಕೆ ಉತ್ತರಿಸಿದ ಅವರು, ಹಾಲಪ್ಪ ಅವರಿಗೆ, ಹೇಗಾದರೂ ಮಾಡಿ ಬೇಳೂರು ಗೋಪಾಲಕೃಷ್ಣನನ್ನು ಬಿಜೆಪಿಗೆ ಕಳುಹಿಸಿದರೆ ತಮಗೆ ಕಾಂಗ್ರೆಸ್ ಸೇರಲು ಅವಕಾಶ ದೊರೆಯುತ್ತದೆ ಎನ್ನುವ ಇರಾದೆಯಿಂದ ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಹರತಾಳು ಹಾಲಪ್ಪ ಅವರ ಕೀಳು ರಾಜಕೀಯ ಮನಸ್ಥಿತಿಯನ್ನು ತೋರುತ್ತಿದೆ ಎಂದು ದೂರಿದರು.

ನಾನೇನೋ ಸಚಿವನಾಗುವ ಉದ್ದೇಶದಿಂದ ದೆಹಲಿ-ಬೆಂಗಳೂರು ಪ್ರವಾಸದಲ್ಲಿದ್ದೆ. ಮಾಜಿ ಸಚಿವರಿಗೆ ಹೊಸನಗರ-ಸಾಗರ ಕ್ಷೇತ್ರದ ಜನರ ಬೆಂಬಲ ಮತ್ತು ಆಶೀರ್ವಾದದಿಂದ ಸಚಿವ ಸ್ಥಾನ ನೀಡಿದರೂ ಉಳಿಸಿಕೊಳ್ಳಲಿಲ್ಲ, ಹರತಾಳು ಹಾಲಪ್ಪ ಅಧಿಕಾರದಲ್ಲಿದ್ದಾಗ ಎಲ್ಲಿ ಹೋಗಿದ್ದರು ಎನ್ನುವುದನ್ನು ಮೊದಲು ತಿಳಿಸಲಿ. ಹಿರಿಯ ರಾಜಕಾರಣಿ ಆರಗ ಜ್ಞಾನೇಂದ್ರ ಸಹ ಹಾಲಪ್ಪ ಅವರ ಸುಳ್ಳು ಆರೋಪಗಳಿಗೆ ಸಮರ್ಥನೆ ನೀಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿರುವುದು ಸದೃಢ ಕಾಂಗ್ರೆಸ್ ಸರ್ಕಾರ, ಶಾಸಕನಾಗಿರುವ ನಾನು ಪಕ್ಷವನ್ನೇಕೆ ತ್ಯಜಿಸಲಿ? ಎಂದು ಹರಿಹಾಯ್ದರು.

ಗುಟ್ಕಾ ನಿಷೇಧ ಅಡಕೆ ಮಾರುಕಟ್ಟೆ ಮೇಲೆ ಪರಿಣಾಮ ಬೀರದು: ಗುಟ್ಕಾ ನಿಷೇಧದಿಂದ ಅಡಕೆ ಬೆಳೆಗಾರರಿಗೆ ಯಾವುದೇ ತರಹದ ತೊಂದರೆ ಆಗದು. ಇದು ಅಡಕೆ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಬೀರದು, ಗುಟ್ಕಾ ನಿಷೇಧ 2013 ರಿಂದಲೇ ಜಾರಿಯಲ್ಲಿದೆ. ನಿಕೋಟಿನ್ ಅಂಶ ಇರುವ ಕಾರಣ ಈ ಹಿಂದೆಯೇ ಸರ್ಕಾರ ನಿಷೇಧಿಸಿದೆ. ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿಯೂ ಗುಟ್ಕಾ ನಿಷೇಧ ಇದ್ದು, ಅಡಕೆ ದರದ ಮೇಲೆ ಈವರೆಗೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ. ಅಡಕೆ ಬೆಳೆಗಾರರು ಆತಂಕಕ್ಕೆ ಈಡಾಗುವ ಅಗತ್ಯವಿಲ್ಲ. ಅಲ್ಲದೇ ತಾವೂ ಸೇರಿದಂತೆ ಅಡಕೆ ಬೆಳೆಯುವ ಕ್ಷೇತ್ರಗಳ ಎಲ್ಲಾ ಶಾಸಕರು ಬೆಳೆಗಾರರ ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಿದರು.