ಟೇಕಲ್: ನಮ್ಮ ಭಾರತದ ಸಂವಿಧಾನವು ಶ್ರೇಷ್ಟ ಮತ್ತು ಬಲಿಷ್ಟವಾದ ಕಾನೂನು ಆಗಿದೆ. ನಮ್ಮ ರಾಷ್ಟ್ರ ಬೃಹತ್ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ನಮ್ಮ ದೇಶವು ಯಾವುದೇ ಕಾರ್ಯ ರೂಪಿಸುವಲ್ಲಿ ಸಂವಿಧಾನ ರಚನೆಕಾರರಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ಹಾದಿಯಲ್ಲಿ ರಚಿಸಲಾಗಿದೆ. ಯಾವುದೇ ತೀರ್ಮಾನ ಕೈಗೊಂಡರು ಸಹ ಕಾನೂನು ಪ್ರಕಾರ ಕಾರ್ಯರೂಪಕ್ಕೆ ತರಲಾಗುತ್ತದೆ ಎಂದು ಮಾಲೂರು ಜೆಎಂಎಫ್ಸಿಯ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಎಸ್.ಜೆ.ಶಿಲ್ಪ ಅಭಿಪ್ರಾಯಪಟ್ಟರು.
ಅವರು ಇಂದು ಟೇಕಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಅರಿವು ನೆರವು ಜಾಗೃತಿ ಅಭಿಯಾನ 2026 ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕು ಭವಿಷ್ಯಕ್ಕೆ ಬೆಳಕು ಇದರಡಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳಿಗೆ ಬಾಲ ಕಾರ್ಮಿಕ ಕಾಯ್ದೆ, ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆ, ಮಕ್ಕಳ ಹಕ್ಕುಗಳನ್ನು ಕುರಿತು ವಿವರಿಸಿ ವಿದ್ಯಾರ್ಥಿಗಳನ್ನು ಯಾವ ರೀತಿ ಸ್ನೇಹದಿಂದ ಮಾತನಾಡಿಸಬೇಕು. ವಿದ್ಯಾರ್ಥಿನಿಯರ ಬಳಿ ಅನುಚಿತವಾಗಿ ವರ್ತಿಸುವ ಬಗ್ಗೆ ಪ್ರಾತ್ಯಕ್ಷಿಕೆ ಕೊಟ್ಟು ಮಾತನಾಡಿ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು.ವಕೀಲ ಶ್ರೀನಿವಾಸಕಿರಣ್ ಮಾತನಾಡಿ, ಪೋಕ್ಸೋ ಕಾಯ್ದೆ ಬಗ್ಗೆ ಮಾತನಾಡಿ, ಮಕ್ಕಳನ್ನು ಲೈಂಗಿಕ ದೌರ್ಜನ್ಯ ಕಿರುಕುಳದಿಂದ ತಪ್ಪಿಸುವ ಕಠಿಣ ಕಾನೂನು ಆಗಿದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದನ್ನು ವಿದ್ಯಾರ್ಥಿಗಳು ಕಾನೂನು ತಿಳುವಳಿಕೆ ಅರಿತು ಕೊಳ್ಳಿ ಎಂದರು.
ವಕೀಲರಾದ ಸುಬ್ರಮಣಿ ಮಾತನಾಡಿ, ಮಾಲೂರು ತಾಲೂಕಿನಲ್ಲಿ ಹಮ್ಮಿಕೊಂಡಿರುವ ಮಕ್ಕಳ ಹಕ್ಕುಗಳ ಅರಿವು ನೆರವು ಜಾಗೃತಿ ಅಭಿಯಾನದಲ್ಲಿ 25 ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು 24 ಶಾಲೆಗಳಲ್ಲೂ ಕಾರ್ಯಕ್ರಮ ನಡೆದಿದೆ. ಉಳಿದ ಶಾಲೆಯಲ್ಲಿ ಕಾರ್ಯಕ್ರಮ ನೀಡಿ ಅಭಿಯಾನಕ್ಕೆ ಮುಕ್ತಾಯಗೊಳಿಸಲಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಎ.ಕೆ.ವೆಂಕಟೇಶ, ಸಹಾಯಕ ಪ್ರಾಧ್ಯಾಪಕ ಅನಂತರಾಜ್, ನಾಗರಾಜ್, ಉಪಪ್ರಾಂಶುಪಾಲರಾದ ಪ್ರಸನ್ನಕುಮಾರ್, ಶಶಿಧರ, ಸಿಆರ್ಪಿ ಸುಬ್ರಮಣಿ, ಮುಖ್ಯಶಿಕ್ಷಕಿ ಅನುಪಮ ಹಾಜರಿದ್ದರು.