ಚಿಕ್ಕಮಗಳೂರುಸಂವಿಧಾನ ಶೋಷಿತರಿಗೆ ಸಮಾನ ಅವಕಾಶಕ್ಕೆ ಭದ್ರಬುನಾದಿ ಹಾಕುವ ಮೂಲಕ ನಾಗರಿಕ ಹಕ್ಕನ್ನು ಎತ್ತಿಹಿಡಿದಿದೆ ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ್ ಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಸಂವಿಧಾನ ಶೋಷಿತರಿಗೆ ಸಮಾನ ಅವಕಾಶಕ್ಕೆ ಭದ್ರಬುನಾದಿ ಹಾಕುವ ಮೂಲಕ ನಾಗರಿಕ ಹಕ್ಕನ್ನು ಎತ್ತಿಹಿಡಿದಿದೆ ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ್ ಗೌಡ ಹೇಳಿದರು.ನಗರದ ಜಿಲ್ಲಾ ಜಾತ್ಯಾತೀತ ಜನತಾದಳದ ಕಚೇರಿಯಲ್ಲಿ ಮಂಗಳವಾರ ನಡೆದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ 135ನೇ ಜನ್ಮದಿನದ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ರಾಷ್ಟ್ರದ ಹಿತಕ್ಕೆ ಗಾಂಧೀಜಿ ಯಂತೆ, ಅಂಬೇಡ್ಕರ್ ಕೊಡುಗೆಯೂ ಅಪಾರ. ಸ್ವಾತಂತ್ರ್ಯ ಪೂರ್ವದಲ್ಲಿ ಶೋಷಿತರು ಅಸೃಶ್ಯತೆ, ಅಸಮಾನತೆ, ಮೂಲ ಹಕ್ಕಿನಿಂದ ವಂಚಿತರಾಗಿದ್ದರು. ಇದನ್ನು ಮನಗಂಡು, ದೇಶದ ಕಟ್ಟಕಡೆ ವ್ಯಕ್ತಿಗೂ ದಾರಿಯಾಗಲು ಅನೇಕ ಅಧ್ಯಯನ ನಡೆಸಿ ಸಂವಿಧಾನವನ್ನು ದೇಶಕ್ಕೆ ಅರ್ಪಿಸಿದರು.
ಕೇವಲ ಉಳ್ಳವರ ಪಾಲಾಗಿದ್ಧ ಮತದಾನ ಹಕ್ಕನ್ನು ದೇಶದ ಪ್ರತಿ ಪ್ರಜೆಗಳಿಗೆ ವಿಸ್ತರಿಸುವ ಮೂಲಕ ನಾಗರಿಕರು ಚುನಾಯಿತ ಪ್ರತಿನಿಧಿಗಳ ಆಯ್ಕೆ ಮಾಡಲು ಅವಕಾಶ ಕೊಟ್ಟವರು. ಅಲ್ಲದೇ ಸಂವಿಧಾನದಡಿ ಪ್ರತಿ ವ್ಯಕ್ತಿ ಜನಪ್ರತಿನಿಧಿ, ಸರ್ಕಾರಿ ಹುದ್ದೆ ಹಾಗೂ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದರು.ಜೆಡಿಎಸ್ ನಗರ ಮಹಾಪ್ರಧಾನ ಕಾರ್ಯದರ್ಶಿ ಸಿ.ಕೆ.ಮೂರ್ತಿ ಮಾತನಾಡಿ, ಸಮಾಜದಲ್ಲಿ ಸಾಮರಸ್ಯ, ಸಮಾನತೆ, ಸಮಾಜವಾದಿ ಹಕ್ಕನ್ನು ಕರುಣಿಸಿದ ವ್ಯಕ್ತಿ ಬಿ.ಆರ್.ಅಂಬೇಡ್ಕರ್. ಶೋಷಣೆಗೆ ಒಳಗಾದ ಅನೇಕ ಕುಟುಂಬವನ್ನು ಸಂವಿಧಾನ ದಡಿ ಮುನ್ನೆಲೆಗೆ ತಂದು ನಾಗರಿಕ ಪ್ರಜೆಗಳಾಗಿಸಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ದೇವಿಪ್ರಸಾದ್ ಮಾತನಾಡಿ, ಸಂವಿಧಾನದ ಆಶಯದಲ್ಲಿ ದೇಶದ ಆರ್ಥಿಕತೆ ಹೆಚ್ಚಿಸಿದ ವ್ಯಕ್ತಿ ಅಂಬೇಡ್ಕರ್. ಈ ವ್ಯಕ್ತಿಯನ್ನು ಇಡೀ ಪ್ರಪಂಚವೇ ಕೊಂಡಾಡುತ್ತಿದೆ. ಶೋಷಿತರ ಏಳಿಗೆಗೆ ಹಗಲಿರುಳು ಎನ್ನದೇ ಅಧ್ಯಯನ ನಡೆಸಿ, ಎಲ್ಲಾ ಜಾತಿ ಯವರಿಗೆ ಸಂವಿಧಾನದ ಮೂಲಕ ಜ್ಞಾನೋದಯ ನೀಡಿದವರು ಎಂದರು.ಈ ವೇಳೆ ನಗರಸಭೆ ಸದಸ್ಯ ಗೋಪಿ, ಮುಖಂಡರಾದ ಆನಂದೇಗೌಡ, ಮಾನುಮಿರಾಂ ಡ, ಶ್ರೀನಿವಾಸ್, ಶಿವು, ದೇವರಾಜ್ಅರಸ್, ಚಿದಾನಂದ್, ಅಣ್ಣಪ್ಪಶೆಟ್ಟಿ, ಜಯಂತಿ ಇದ್ದರು.