ಸಾರಾಂಶ
ಧಾರವಾಡ:
ಭಾರತದ ಸ್ವಾತಂತ್ರ್ಯ ಚಳವಳಿಗೆ, ಹೋರಾಟಗಳಿಗೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರ. ಅನೇಕ ಹೋರಾಟಗಾರರು ತಮ್ಮ ಆಸ್ತಿ, ಜೀವ ಹಾನಿ ಮಾಡಿಕೊಂಡಿದ್ದಾರೆ. ಈ ಕುರಿತು ಇತಿಹಾಸದಲ್ಲಿ ದಾಖಲಾಗಿದ್ದರೂ ಮಕ್ಕಳಿಗೆ, ಜಿಲ್ಲೆಯ ಜನರಿಗೆ ಇದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಆದ್ದರಿಂದ ಆ. 15ರ ಸ್ವಾತಂತ್ರೋತ್ಸವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸಲು, ಸ್ವಾತಂತ್ರ್ಯ ಚಳವಳಿಗೆ ಧಾರವಾಡ ಜಿಲ್ಲೆಯ ಕೊಡುಗೆ ಕುರಿತು ಒಂದು ದಿನದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.ನಗರದ ಜಕಣಿ ಬಾವಿ ಬಳಿ ಇರುವ ಖಿಲಾಫತ್ ಹೋರಾಟಗಾರರ ಗೌರವಾರ್ಥ ಸ್ಥಾಪಿಸಿರುವ ಹುತಾತ್ಮರ ಸ್ಮಾರಕಕ್ಕೆ ಸೋಮವಾರ ಪುಷ್ಪ ನಮನ ಸಲ್ಲಿಸಿದ ಅವರು, ಇತಿಹಾಸದ ಅರಿವಿಲ್ಲದೆ, ಉತ್ತಮ ಭವಿಷ್ಯ ಕಟ್ಟವುದು ಕಷ್ಟಸಾಧ್ಯ ಎಂದರು.
ವಿಶೇಷವಾಗಿ ಯುವ ಸಮೂಹ ಮತ್ತು ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರು, ರಾಷ್ಟ್ರ ನಾಯಕರ ಬಗ್ಗೆ ಅರಿವು ಮೂಡಿಸಬೇಕಿದೆ ಎಂದ ಅವರು, ಜಿಲ್ಲೆಯ ಅನೇಕ ಗ್ರಾಮ ಮತ್ತು ಪಟ್ಟಣಗಳಲ್ಲಿ ಸ್ವಾತಂತ್ರ್ಯದ ಹೋರಾಟಗಳು ನಡೆದಿವೆ. ಅನೇಕರು ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ. ಈ ಕುರಿತು ಬೆಳಕು ಚಲ್ಲುವ ಒಂದು ದಿನದ ಅರ್ಥಪೂರ್ಣ ಕಾರ್ಯಕ್ರಮವನ್ನು ಜಿಲ್ಲಾಡಳಿತದಿಂದ ಆಯೋಜಿಸಲಾಗುವುದು ಎಂದು ಹೇಳಿದರು.ಥ್ಯಾಕರೆ ಸಮಾಧಿ, ಗಾನವಿಧೂಷಿ ಗಂಗೂಬಾಯಿ ಹಾನಗಲ್ಲ ಹುಟ್ಟಿದ ಮನೆ, ದ.ರಾ. ಬೇಂದ್ರೆ ಅವರ ಕುರಿತ ವಿಷಯಗಳು ಧಾರವಾಡದ ಹೆಮ್ಮೆಯ ಸಂಗತಿಗಳು. ಇವುಗಳನ್ನು ರಕ್ಷಿಸಿ, ನಮ್ಮವರಿಗೆ ಪ್ರಚುರಪಡಿಸಿ ಹೆಮ್ಮೆ, ಅಭಿಮಾನ ಮೂಡಿಸುವುದು ನಮ್ಮ ಕರ್ತವ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಖಿಲಾಫತ್ ಚಳವಳಿಯಲ್ಲಿ ಭಾಗವಹಿಸಿ, ಅಸಹಕಾರ ಚಳವಳಿ ಯಶಸ್ವಿಗೊಳಿಸುವಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ್ದ ಮೂವರು ಹೋರಾಟಗಾರರ ಸ್ಮರಣಾರ್ಥ ಜಕಣಿಬಾವಿ ಹತ್ತಿರ ಸ್ಮಾರಕ ನಿರ್ಮಿಸಲಾಗಿದೆ. ಇವು ನಮ್ಮ ಇತಿಹಾಸದ ದ್ಯೋತಕವಾಗಿವೆ ಎಂದ ಅವರು, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧಾರವಾಡ ಜಿಲ್ಲೆಯ ಕೊಡುಗೆ ಕುರಿತು ಶಾಲಾ-ಕಾಲೇಜು ಮಕ್ಕಳಿಗೆ ವಿವಿಧ ಸ್ಪರ್ಧೆ, ಕಿರುನಾಟಕ, ತಜ್ಞರಿಂದ ವಿಶೇಷ ಉಪನ್ಯಾಸ ಹಾಗೂ ಒಂದು ದಿನದ ವಿಚಾರ ಸಂಕಿರಣವನ್ನು ಸ್ವಾತಂತ್ರೋತ್ಸವದ ಹಿನ್ನಲೆ ಜಿಲ್ಲಾಡಳಿದಿಂದ ಆಯೋಜಿಸಲಾಗುವುದು ಎಂದರು.ಸಂಯೋಜಕ ಉದಯ ಯಂಡಿಗೇರಿ ಸ್ವಾಗತಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ವರ್ತಕ ರವೀಂದ್ರ ಆಕಳವಾಡಿ, ಶಂಕರ ಕುಂಬಿ, ಚಂದ್ರಶೇಖರ ಅಮ್ಮಿನಬಾವಿ, ಪೊಲೀಸ್ ಇನ್ಸ್ಪೆಕ್ಟರ್ ಎನ್.ಸಿ. ಕಾಡದೇವರಮಠ, ಮಹಾಂತೇಶ ಪಟ್ಟಣಶೆಟ್ಟಿ, ಕಿರಣ ತೂಗ್ಗಿ, ವಿದೇಶಿ ಕೆಲಗೇರಿ, ಶಿಕ್ಷಕರಾದ ಭೀಮಣ್ಣ ಮಲ್ಲಿಗೆ, ಶಾಂತಾ ಹಂಚಿನಮನಿ, ಶಾಮರಾವ ಕುಲಕರ್ಣಿ ಮತ್ತು ಆದರ್ಶ ಬಾಲಿಕಾ ಹಾಗೂ ನಿವೇದಿತಾ ಶಾಲೆಯ ಮಕ್ಕಳು, ಸಾರ್ವಜನಿಕರು ಇದ್ದರು.