ಕೋಟ: ಕೃಷಿ ಕಾಯಕ ಉಳಿಸುವಲ್ಲಿ ನಮ್ಮ ಹಿರಿಯ ತಲೆಮಾರಿನ ಕೊಡುಗೆ ಅನನ್ಯವಾದುದು, ಅದನ್ನು ಇಂದಿನ ತಲೆಮಾರು ಉಳಿಸಿಕೊಂಡು ಹೋಗಬೇಕು ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಮಣೂರು ಭಾಸ್ಕರ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.ಇಲ್ಲಿನ ಪಂಚವರ್ಣ ಯುವಕ ಮಂಡಲ ಮತ್ತು ಮಹಿಳಾ ಮಂಡಲದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ನಡೆದ 52ನೇ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಹಿರಿಯ ಕೃಷಿಕ ದಾರೋಜ್ಜಿಮನೆ ಆನಂದ ಕಾಂಚನ್ ಅವರನ್ನು ಅಭಿನಂದಿಸಿ ಮಾತನಾಡಿದರು.
ಈ ಭಾಗದ ಕೃಷಿ ಕ್ಷೇತ್ರದಲ್ಲಿ ದಾರೋಜ್ಜಿಮನೆ ಕುಟುಂಬಿಕರ ಪಾತ್ರ ಅತ್ಯಂತ ಗಣನೀಯ ಪಾತ್ರ ವಹಿಸಿದೆ. ಅದರಲ್ಲೂ ಆನಂದ ಕಾಂಚನ್ ಅವರಂತಹ ಹಿರಿಯ ಕೃಷಿಕರನ್ನು ಗುರುತಿಸಿದ್ದು ಅತ್ಯಂತ ಅರ್ಥಪೂರ್ಣವಾಗಿದೆ ಎಂದರು.ನಂತರ ತೆಕ್ಕಟ್ಟೆ ಪಂಚಾಯಿತಿ ಮಾಜಿ ಅಧ್ಯಕ್ಷ ಶೇಖರ್ ಕಾಂಚನ್ ಕೊಮೆ ಅವರು ಕೃಷಿಕ ಆನಂದ ಕಾಂಚನ್ ಅವರನ್ನು ಕೃಷಿ ಪರಿಕರವನ್ನಿತ್ತು ಕೃಷಿ ಪುರಸ್ಕಾರ ನೀಡಿ ಶುಭ ಹಾರೈಸಿದರು.ಕೋಟತಟ್ಟು ಪಡುಕರೆಯ ಪ್ರಗತಿಪರ ಕೃಷಿಕ ದಿವಾಕರ್ ಐತಾಳ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ ವಹಿಸಿದ್ದರು. ಅಭ್ಯಾಗತರಾಗಿ ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ರಾಘವೇಂದ್ರ ಹರಪ್ಪನಕೆರೆ, ರೈತಧ್ವನಿ ಸಂಘದ ಅಧ್ಯಕ್ಷ ಎಂ ಜಯರಾಮ ಶೆಟ್ಟಿ, ಪಂಚವರ್ಣ ಮಹಿಳಾ ಮಂಡಲದ ಉಪಾಧ್ಯಕ್ಷೆ ಸುಜಾತ ಕುಮಾರ್ ಪೂಜಾರಿ ಉಪಸ್ಥಿತರಿದ್ದರು. ಮಹಿಳಾ ಮಂಡಲದ ಶಾಲಿನಿ ನರಸಿಂಹ ಸನ್ಮಾನ ಪತ್ರ ವಾಚಿಸಿದರು.ರವೀಂದ್ರ ಕೋಟ ಸ್ವಾಗತಿಸಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಪ್ರಾಸ್ತಾವಿಕ ನುಡಿಗಳನ್ನಾಡಿ ನಿರೂಪಿಸಿದರು. ಮಾಜಿ ಅಧ್ಯಕ್ಷ ಅಜಿತ್ ಆಚಾರ್ ವಂದಿಸಿದರು. ಪ್ರಾರಂಭದಲ್ಲಿ ಗೋಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.