ನಾಡಿಗೆ ಗಾಣಿಗ ಸಮಾಜದ ಕೊಡುಗೆ ಅಪಾರ: ಬಸವರಾಜ ರಾಯರಡ್ಡಿ

| Published : Sep 27 2024, 01:20 AM IST

ಸಾರಾಂಶ

ಇವತ್ತಿನ ರಾಜ್ಯ, ರಾಷ್ಟಮಟ್ಟದ ರಾಜಕಾರಣ ಜಾತಿ, ಧರ್ಮ, ಹಣ, ಹೆಂಡದಿಂದ ಕೂಡಿ ಇಡೀ ರಾಜಕೀಯ ವ್ಯವಸ್ಥೆ ಹದಗೆಟ್ಟು ಹೋಗಿದೆ. ಅಭಿವೃದ್ದಿ ಬಗ್ಗೆ ಚಿಂತನೆಯಿಲ್ಲ.

ಗಾಣಿಗ ಸಮಾಜದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ, ಗಣ್ಯರಿಗೆ ಸನ್ಮಾನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಈ ನಾಡಿಗೆ ಗಾಣಿಗ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ,ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದ ಬುದ್ಧ, ಬಸವ, ಅಂಬೇಡ್ಕರ್ ಭವನದಲ್ಲಿ ಗುರುವಾರ ಗಾಣಿಗ ಸಮಾಜ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಮಾಜ ಇತರ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಆದರ್ಶಮಯವಾಗಿದೆ ಎಂದರು.

ಇವತ್ತಿನ ರಾಜ್ಯ, ರಾಷ್ಟಮಟ್ಟದ ರಾಜಕಾರಣ ಜಾತಿ, ಧರ್ಮ, ಹಣ, ಹೆಂಡದಿಂದ ಕೂಡಿ ಇಡೀ ರಾಜಕೀಯ ವ್ಯವಸ್ಥೆ ಹದಗೆಟ್ಟು ಹೋಗಿದೆ. ಅಭಿವೃದ್ದಿ ಬಗ್ಗೆ ಚಿಂತನೆಯಿಲ್ಲ. ಕೇವಲ ದ್ವೇಷ, ಅಸೂಯೆ, ಸ್ವಾರ್ಥಕ್ಕಾಗಿ ಏನೆಲ್ಲ ನಡೆಯುತ್ತಿದೆ. ಇಂತಹ ರಾಜಕಾರಣದಿಂದ ನನಗಂತು ಬೇಸರವಾಗಿದೆ. ನಾನು ಯಾವ ಜಾತಿಗೂ ಸೇರಿದವನಲ್ಲ, ಆದರೆ ಮನುಷ್ಯ ಜಾತಿಗೆ ಸೇರಿದವನು. ಪ್ರತಿಭೆ ಯಾವ ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಜಾತಿಗಳಲ್ಲೂ ಪ್ರತಿಭಾವಂತರಿದ್ದಾರೆ. ಈ ಸಮಾಜದವರು ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದರು.

ಈ ಗಾಣಿಗ ಸಮಾಜದ ಸಮುದಾಯ ಭವನಕ್ಕೆ ೨ ಎಕರೆ ಭೂಮಿ ನೀಡಿದರೆ ವೈಯಕ್ತಿಕವಾಗಿ ₹೫೦ಲಕ್ಷ ದಿಂದ ೧ ಕೋಟಿ ಕೊಡುತ್ತೇನೆ. ಇಲ್ಲ ಸರ್ಕಾರದಿಂದ ನಿರ್ಮಿಸಿ ಕೊಡಿ ಎಂದರೆ ₹ ೮ಕೋಟಿ ನೀಡುತ್ತೇನೆ. ಆದರೆ ಬುದ್ಧ, ಬಸವ, ಅಂಬೇಡ್ಕರ್ ಭವನ ಹೆಸರಿನಲ್ಲಿ ತೆಗೆದುಕೊಂಡು ಅದರ ಕೆಳಗೆ ಗಾಣಿಗ ಸಮುದಾಯ ಭವನ ಅಂತಾ ಮಾಡಿಕೊಳ್ಳಿ. ಇದು ಪಪಂ ಇಲ್ಲವೇ ತಾಪಂ ಇಲಾಖೆಯಡಿ ಇರುತ್ತದೆ ಎಂದು ಹೇಳಿದರು.

ವಿಜಯಪುರ ವನಶ್ರೀ ಸಂಸ್ಥಾನ ಗಾಣಿಗ ಗುರುಪೀಠದ ಡಾ.ಜಯಬಸವಕುಮಾರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಮಾಜಿ ಶಾಸಕ ಶಿವಶರಣಪ್ಪಗೌಡ ಪಾಟೀಲರ ಪುತ್ರ ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ ೨ ಎಕರೆ ಭೂಮಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಶಾಸಕ ರಾಯರಡ್ಡಿಯವರು ಒಂದು ತಿಂಗಳೊಳಗಾಗಿ ಸಮುದಾಯ ಭವನ ಇಲ್ಲವೇ ವಸತಿ ನಿಲಯವನ್ನಾದರೂ ನಿರ್ಮಿಸಿಕೊಡುವ ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಬೇಕೆಂದರು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಬಾಗಲಕೋಟ ಸಂಸದ ಪಿ.ಸಿ. ಗದ್ದಿಗೌಡ್ರ, ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ, ಮಾಜಿ ಸಂಸದ ಸಂಗಣ್ಣ ಕರಡಿ, ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾಧ್ಯಕ್ಷ ತೋಟಪ್ಪ ಕಾಮನೂರು ಮಾತನಾಡಿದರು. ತಾಲೂಕಾ ಗಾಣಿಗ ಸಮಾಜ ಅಧ್ಯಕ್ಷ ಸುಧಾಕರ ದೇಸಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯಡ್ಡೋಣಿ ಸಂಸ್ಥಾನ ಮಟದ ಶ್ರೀ ಕೇಶವಾನಂದ ಮಹಾಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಅತಿಥಿಗಳಾಗಿ ವಿಪಂ ಸದಸ್ಯೆ ಹೇಮಲತಾ ನಾಯಕ, ಪ್ರಮುಖರಾದ ರುದ್ರಮುನಿ ಗಾಳಿ, ಎಸ್.ಕೆ. ಬೆಳ್ಳುಬ್ಬಿ, ಕೆ.ಶರಣಪ್ಪ, ಹಸನಸಾಬ ದೋಟಿಹಾಳ, ಶಿವರಾಜ ಸಜ್ಜನ್, ಅಮರಗುಂಡಪ್ಪ ಮೇಟಿ, ಮಲ್ಲಿಕಾರ್ಜುನ ಲೋಣಿ, ಗುರಣ್ಣ ಗೋಡಿ, ಆನಂದ ನ್ಯಾಮಗೌಡ, ನವೀನಕುಮಾರ ಗುಳಗಣ್ಣನವರ್, ಬಸವರಾಜ ಉಳ್ಳಾಗಡ್ಡಿ, ವೀರನಗೌಡ ಬಳೂಟಗಿ, ಬಸವಲಿಂಗಪ್ಪ ಭೂತೆ, ಅರವಿಂದಗೌಡ ಪಾಟೀಲ, ಮಹೇಶ ಹಳ್ಳಿ, ಮಲ್ಲನಗೌಡ ಪಾಟೀಲ, ಹನುಮಂತರಾವ್ ಪಾಟೀಲ್ ಮತ್ತಿತರರು ಇದ್ದರು.

೨೬ವೈಎಲ್‌ಬಿ೧: ಯಲಬುರ್ಗಾದ ಬುದ್ಧ, ಬಸವ, ಅಂಬೇಡ್ಕರ್ ಭವನದಲ್ಲಿ ಗಾಣಿಗ ಸಮಾಜದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಶಾಸಕ ಬಸವರಾಜ ರಾಯರಡ್ಡಿ ಉದ್ಘಾಟಿಸಿದರು.