ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶರಾವತಿ ಮುಳುಗಡೆ ಸಂತ್ರಸ್ತ ರೈತರ ಸಮಸ್ಯೆಗೆ ತಾರ್ಕಿಕ ಅಂತ್ಯಕ್ಕೆ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೌಹಾರ್ದಯುತವಾಗಿ ಬಗೆಹರಿಸಲು ಸಾಧ್ಯವೇ ಎಂದು ಸಲಹೆ ನೀಡಿದೆ. ಆದ್ದರಿಂದ, ಮಲೆನಾಡಿನ ಪರಿಸರವಾದಿಗಳು ಈ ಸಮಸ್ಯೆ ಪರಿಹಾರಗೊಳ್ಳುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ರೈತರ ಪರವಾಗಿದೆ. ಸುಮಾರು 75 ವರ್ಷಗಳ ಶರಾವತಿ ಜಲವಿದ್ಯುತ್ ಯೋಜನೆಯಡಿ ಪುನರ್ವಸತಿ ಭೂಮಿಯನ್ನು ಡಿ-ರಿಸರ್ವ್ ಮಾಡುವ ವಿಚಾರದಲ್ಲಿ ಕಳೆದ 50 ರಿಂದ 60 ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಆದ್ದರಿಂದ, ಕೇಂದ್ರ ಅರಣ್ಯ ಸಚಿವರನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲಾಗಿದ್ದು, ಸಚಿವರು ಸಕಾರಾತ್ಮಕವಾಗಿ ಪ್ರತಿಕಿಯಿಸಿದ್ದಾರೆ ಎಂದು ಹೇಳಿದರು.
ಶರಾವತಿ ಸಂತ್ರಸ್ತರ ಸಮಸ್ಯೆಗೆ ಬಗೆಹರಿಸುವ ಬಗ್ಗೆ ನ್ಯಾಯಯುತವಾಗಿ ಈ ಹಿಂದೆ ಯಾರು ಪ್ರಯತ್ನ ಮಾಡಿರಲಿಲ್ಲ. ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪನವರ ನೇತೃತ್ವದಲ್ಲಿ ನಮ್ಮ ನಾಯಕರ ನಿಯೋಗ ಅರಣ್ಯ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಅದಾದ ನಂತರ ಬಿಜೆಪಿ ಸರ್ಕಾರದ ಅಧಿಕಾರಾವಧಿ ಮುಗಿಯಿತು. ಪ್ರಸ್ತುತ ವಿಶ್ವಾಸಗಳೇ ಕಳೆದುಕೊಳ್ಳುವ ಸಂದರ್ಭದಲ್ಲಿ ಸಂತಸದ ದಿನಗಳು ಬರುತ್ತಿವೆ ಎಂದರು.ಸಂಸತ್ತಿನಲ್ಲಿ ಸಹ ಶರಾವತಿ ಸಂತ್ರಸ್ತರ ಪರವಾಗಿ ಮಾತಾಡಿದ್ದೇನೆ. ರೈತರಿಗೆ ಆದಷ್ಟು ಬೇಗ ನ್ಯಾಯ ಒದಗಿಸಲು ನಮ್ಮ ನಿಯೋಗದೊಂದಿಗೆ ಸಚಿವರನ್ನು ಭೇಟಿ ಮಾಡಿ ಬಂದಿದ್ದೇವೆ. ಕೇಂದ್ರದ ಸೂಚನೆ ಮೆರೆಗೆ ರಾಜ್ಯ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿದೆ. ರಾಜ್ಯ ಸರ್ಕಾರ ನಮ್ಮ ಕರ್ತವ್ಯ ಮುಗಿತು ಅಂತ ಸುಮ್ಮನೆ ಕೂರಬಾರದು. ಶರಾವತಿ ಸಂತ್ರಸ್ತರಿಗೆ ಭೂಮಿ ಕೊಡುವ ಕೆಲಸ ಐತಿಹಾಸಿಕವಾಗಲಿದೆ. ಕೇಂದ್ರ ಅರಣ್ಯ ಸಚಿವರಿಗೆ ನಾವು ಅಭಿನಂಧನೆ ಸಲ್ಲಿಸುತ್ತೇನೆ. ಶರಾವತಿ ಸಂತ್ರಸ್ತರ ಸಮಸ್ಯೆ ಬಗ್ಗೆ ನಮಗೆ ಸಮಯ ಕೊಟ್ಟು ಆಲಿಸಿದ್ದಾರೆ. ಇಲ್ಲಿ ಕೇಂದ್ರ ಸರ್ಕಾರ ಸಂತ್ರಸ್ತರ ಪರವಾಗಿದೆ ಎಂದರು.
ವಕ್ಪ್ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ 150 ಕೋಟಿ ಆಫರ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದರು, ಕಾಂಗ್ರೆಸ್ ನಾಯಕರು ನನ್ನನ್ನು ಬುಕ್ ಮಾಡಲು ಬಂದಿದ್ದರು ಅಂತಾ ಮಾಣಿಪ್ಪಾಡಿ ಅವರೇ ಹೇಳಿದ್ದಾರೆ. ಕಾಂಗ್ರೆಸ್ ನವರು ಅವರ ತಪ್ಪನ್ನು ಮುಚ್ಚಿಕೊಳ್ಳಲು ಈ ರೀತಿ ಪ್ರಯತ್ನ ಮಾಡುತ್ತಿದ್ದಾರೆ. ಈ ವಿಷಯವನ್ನು ಡೈವರ್ಟ್ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಮಾಜಿ ಶಾಸಕ ಅಶೋಕ್ ನಾಯ್ಕ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಪ್ರಮುಖರಾದ ಎಂ.ಬಿ.ಹರಿ ಕೃಷ್ಣ, ಶಿವರಾಜ್ ಇದ್ದರು.