ಎಲ್ಲ ಧರ್ಮ, ಜಾತಿ, ಸಮುದಾಯದವರನ್ನು ಪ್ರೀತಿ ವಿಶ್ವಾಸದಿಂದ ತೆಗೆದುಕೊಂಡು ಹೋಗುವ ಶಕ್ತಿ ಹಾಗೂ ಗೌರವಿಸುವ ವಿಶಾಲ ಹೃದಯವು ಕೇವಲ ಕಾಂಗ್ರೆಸ್ ಪಕ್ಷಕ್ಕಿದೆ.
ಕನ್ನಡಪ್ರಭ ವಾರ್ತೆ ಹಳಿಯಾಳ
ಎಲ್ಲ ಧರ್ಮ, ಜಾತಿ, ಸಮುದಾಯದವರನ್ನು ಪ್ರೀತಿ ವಿಶ್ವಾಸದಿಂದ ತೆಗೆದುಕೊಂಡು ಹೋಗುವ ಶಕ್ತಿ ಹಾಗೂ ಗೌರವಿಸುವ ವಿಶಾಲ ಹೃದಯವು ಕೇವಲ ಕಾಂಗ್ರೆಸ್ ಪಕ್ಷಕ್ಕಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ಶನಿವಾರ ಸಂಜೆ ಶಾಸಕರ ಕಾರ್ಯಾಲಯದಲ್ಲಿ ಆಯೋಜಿಸಿದ ಭಾರತ ಜೋಡೋ ಯುವಸಂಘಗಳ ಸ್ಥಾಪನೆ ಮತ್ತು ವಾರ್ಡ್ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ರಚನೆಯ ಕುರಿತು ಚರ್ಚಿಸಲು ಆಯೋಜಿಸಿದ ಪಕ್ಷದ ಕಾರ್ಯಕರ್ತರ ಮತ್ತು ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಅವಶ್ಯಕತೆಯು ದೇಶಕ್ಕಿದೆ. ಪಕ್ಷ ಬೆಳೆದರೇ ಎಲ್ಲರಿಗೂ ಭವಿಷ್ಯವಿರಲಿದೆ. ಅದಕ್ಕಾಗಿ ಪಕ್ಷವನ್ನು ಬೂತ ಮಟ್ಟದಲ್ಲಿ ಸಂಘಟಿಸಿ, ರಾಜ್ಯ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು, ಜನಪರ ಕಾರ್ಯಕ್ರಮಗಳ ಕುರಿತು ಜನರಿಗೆ ಮತದಾರರಿಗೆ ಮನವರಿಕೆ ಮಾಡಿರಿ. ಪಕ್ಷವು ಕೈಗೊಂಡಿರುವ ಭಾರತ ಜೋಡೋ ಯುವಸಂಘದ ರಚನೆಯಲ್ಲಿ ಸರ್ವರೂ ಕ್ರಿಯಾಶೀಲರಾಗಿ ಭಾಗವಹಿಸಬೇಕು ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ಮಾತನಾಡಿ, ಇನ್ನೂ ಕೆಲವೇ ದಿನಗಳಲ್ಲಿ ಗ್ರಾಪಂ ಚುನಾವಣೆಗಳು ಘೋಷಣೆಯಾಗಲಿದ್ದು, ಅದಕ್ಕಾಗಿ ಚುನಾವಣೆಗೆ ಸ್ಪರ್ಧಿಸಲು ಬಯಸುವ ಉಮೇದುವಾರ ಅಭ್ಯರ್ಥಿಗಳನ್ನು ಗುರುತಿಸಿ ಚುನಾವಣಾ ಸಿದ್ಧತೆ ಆರಂಭಿಸಿ. ಪಕ್ಷದ ಸಂಘಟನಾ ಸಭೆ ನಡೆಸಿ, ಯಾವುದೇ ಭಿನ್ನಾಭಿಪ್ರಾಯ ಭಿನ್ನಮತಗಳಿದ್ದರೇ ಶಾಸಕರು ಅಥವಾ ನಮ್ಮ ಗಮನಕ್ಕೆ ತನ್ನಿ ಎಂದರು.
ಯುವಮುಖಂಡ ರವಿ ತೋರಣಗಟ್ಟಿ ಮಾತನಾಡಿದರು.ಪುರಸಭಾ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ, ಮುಖಂಡರಾದ ಬಿ.ಡಿ.ಚೌಗಲೆ, ಶಂಕರ ಬೆಳಗಾಂವಕರ, ಉಮೇಶ ಬೊಳಶೆಟ್ಟಿ, ಫಯಾಜ್ ಶೇಖ್, ಸುವರ್ಣ ಮಾದರ, ರೋಬರ್ಟ ಕೆರವಾಡಕರ, ಎಚ್.ಬಿ. ಪರಶುರಾಮ, ದೇಮಾಣಿ ಶಿರೋಜಿ, ವಿಷ್ಣು ಮಿಶಾಳೆ, ಸಂಜು ಮಿಶಾಳೆ, ಅಶೋಕ ಮೇಟಿ, ಪ್ರಮೋದ ಪಾಟೀಲ, ರಾಜು ಮೇತ್ರಿ, ಸಿಕಂದರ ಮುಜಾವರ ಇತರರಿದ್ದರು. ಯುವಮುಖಂಡ ವೆಂಕಟೇಶ ಸಾಳುಂಕೆ ಕಾರ್ಯಕ್ರಮ ನಿರ್ವಹಿಸಿದರು.