ದೇಶ ಬದುಕಿರೋದೇ ಅನ್ನ, ನೀರಿನ ಮೇಲೆ: ಸ್ವಾಮೀಜಿ

| Published : May 24 2025, 12:01 AM IST

ಸಾರಾಂಶ

ದೇಶ ಬದುಕಿರುವುದು ಬಟ್ಟೆಗಳ ಮೇಲಲ್ಲ, ಬಂದೂಕುಗಳ ಮೇಲಲ್ಲ, ವ್ಯಾಪಾರ ಮೇಲೂ ಅಲ್ಲ. ದೇಶ ಬದುಕಿದ್ದು ಅನ್ನ ನೀರಿನ ಮೇಲೆ. ಅನ್ನ ದೇವರ ಮುಂದೆ ಯಾವ ದೇವರಿಲ್ಲ ಎಂದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಸಿದ್ಧಗಿರಿ ಕ್ಷೇತ್ರದ ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮೀಜಿ ನುಡಿದರು.

- ಸಾವಯವ ಕೃಷಿಯಿಂದಲೇ ಸದೃಢ ಭಾರತ ನಿರ್ಮಾಣದ ಜನಜಾಗೃತಿ ಸಮಾರಂಭ

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ದೇಶ ಬದುಕಿರುವುದು ಬಟ್ಟೆಗಳ ಮೇಲಲ್ಲ, ಬಂದೂಕುಗಳ ಮೇಲಲ್ಲ, ವ್ಯಾಪಾರ ಮೇಲೂ ಅಲ್ಲ. ದೇಶ ಬದುಕಿದ್ದು ಅನ್ನ ನೀರಿನ ಮೇಲೆ. ಅನ್ನ ದೇವರ ಮುಂದೆ ಯಾವ ದೇವರಿಲ್ಲ ಎಂದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಸಿದ್ಧಗಿರಿ ಕ್ಷೇತ್ರದ ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮೀಜಿ ನುಡಿದರು.

ಪಟ್ಟಣದ ಶ್ರೀ ಪೇಟೆ ಬಸವೇಶ್ವರ ದೇವಾಲಯ ಟ್ರಸ್ಟ್‌, ಶ್ರೀ ಪೇಟೆ ಬಸವೇಶ್ವರ ವಿನಾಯಕ ಸೇವಾ ಸಮಿತಿ ಮತ್ತು ಶ್ರೀ ಪೇಟೆ ಬಸವೇಶ್ವರ ಮಹಿಳಾ ಘಟಕದ ಆಶ್ರಯದಲ್ಲಿ ಲಿಂಗೈಕ್ಯ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್‌ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರಾಂಪುರ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ಸಾವಯವ ಕೃಷಿಯಿಂದಲೇ ಸದೃಢ ಭಾರತ ನಿರ್ಮಾಣದ ಬೃಹತ್‌ ಜನ ಜಾಗೃತಿ ಸಮಾರಂಭ ಮತ್ತು ಶ್ರೀ ಪೇಟೆ ಬಸವೇಶ್ವರ ಸಮುದಾಯ ಭವನದ ಎರಡನೇ ಹಂತದ ಕಟ್ಟಡ ಕಾರ್ಯಕ್ಕೆ ಜೀವಾಮೃತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅನ್ನ ಸರಿಯಾಗಿ ಇರದಿದ್ದರೆ ದೇಶ ಹಾಳಾಗುತ್ತದೆ. ಹಿಂದಿನ ಕಾಲದ ಜನ ಕಿ.ಮೀ.ಗಳಷ್ಟು ದೂರ ನಡೆಯುತ್ತಿದ್ದರು, ಗುಡ್ಡ- ಬೆಟ್ಟಗಳನ್ನು ಹತ್ತುತ್ತಿದ್ದರು. ಈಗಿನ ಕಾಲದ ಜನರಿಗೆ ನಡೆಯುವುದು ಕಷ್ಟ, ಗುಡ್ಡ- ಬೆಟ್ಟಗಳನ್ನು ಹತ್ತುವುದು ಇನ್ನೂ ಕಷ್ಟವಾಗಿದೆ. ಸಗಣಿಯ ಸಾವಯವ ಗೊಬ್ಬರ ಬಿಟ್ಟು ರಸಾಯನಿಕ ಗೊಬ್ಬರ ಹಾಕಿ ಬೆಳೆದ ಆಹಾರ ಪದಾರ್ಥಗಳನ್ನು ತಿಂದು ನಾವು ಕುಗ್ಗಿದ್ದೇವೆ. ರೈತ ಮನೆಯಿಂದ ಹೊಲಕ್ಕೆ ಹೋಗುತ್ತಿದ್ದಾಗ ಬೀದಿಯಲ್ಲಿ ಜನ ಗಡಗಡ ನಡುಗುತ್ತಿದ್ದರು. ಈಗ ಯಾರೂ ನಡುಗುವುದಿಲ್ಲ. ಪಕ್ಷಿಗಳು ಮರ- ಗಿಡಗಳ ಮೇಲೆ ಹಣ್ಣು, ಚಿಗುರು ಎಲೆ ತಿಂದು ಹಿಕ್ಕೆಯು ಸಹ ಮಣ್ಣಿಗೆ ಗೊಬ್ಬರವಾಗುತ್ತದೆ ಎಂದರು.

ಹೊಲದಲ್ಲಿ ಬೆಳೆದ ಪೈರು, ತರಕಾರಿ, ಹಣ್ಣುಗಳಿಗೆ ಹುಳುಗಳ ಬಾಧೆ ತಪ್ಪಿಸಲು ಕ್ರಿಮಿನಾಶಕ ಔಷಧಿ ಹೊಡೆಯುತ್ತೇವೆ. ಪಕ್ಷಿಗಳು ಕಾಳುಗಳ ತಿಂದು ಸಾಯುತ್ತವೆ. ಮನುಷ್ಯನು ಅದೇ ಕಾಳುಗಳನ್ನೇ ಉಪಯೋಗಿಸುತ್ತಾನೆ. ಇದರಿಂದ 27 ಗ್ರಾಂಷ್ಟು ವಿಷ ದೇಹದಲ್ಲಿ ಸೇರ್ಪಡೆಯಾಗುತ್ತದೆ. ಈಗ ಎಷ್ಟು ವರ್ಷ ಬದುಕುತ್ತಾನೆ? ಹಿಂದಿನ ಕಾಲದ ಜನ ನೂರಾರು ವರ್ಷ ಬದುಕಿದ್ದಾರೆ. ರೈತ ತಾನು ಬೆಳೆದ ಬೆಳೆಗಳಿಂದ ನೆಮ್ಮದಿಯಿಂದ ಜೀವನ ನಡೆಸಿ ಸಂತೋಷಪಡುತ್ತಿದ್ದ ಕಾಲವಿತ್ತು. ಈಗ ರೈತ ತುಂಬಾ ಕಷ್ಟಪಡುತ್ತಿದ್ದಾನೆ. ದನ-ಕರುಗಳು ಬೇಡ, ಧನ ಬೇಕಾಗಿದೆ. ತರಕಾರಿ ಅಂಗಡಿಗಳು ಪುಟ್‌ಬಾತ್‌ ಮೇಲಿವೆ. ಆದರೆ ನಾವು ಪಾದಕ್ಕೆ ಹಾಕಿಕೊಳ್ಳುವ ಚಪ್ಪಲಿ ಅಂಗಡಿಗಳು ಎಸಿ ರೂಮ್‌ನಲ್ಲಿವೆ. ಹಂದಿಮುಖದ ಹಸುಗಳನ್ನು ಬಿಡಿ, ನಮ್ಮ ದೇಶಿಯ ಹಸುಗಳನ್ನು ಸಾಕಿ. ಸಗಣಿ, ಗೋಮೂತ್ರದಿಂದ ಉಪಯೋಗ ಪಡೆದು ಹಾಲು ಮೊಸರು ಮಜ್ಜಿಗೆಯಿಂದ ಆರೋಗ್ಯ ಕಾಪಾಡಿಕೊಳ್ಳಿರಿ ಎಂದು ಸ್ವಾಮೀಜಿ ಆಶೀರ್ವಚನ ನೀಡಿದರು.

ಹೊನ್ನಾಳಿ ಮತ್ತು ನ್ಯಾಮತಿ ಕ್ಷೇತ್ರದ ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಜಿ.ಪಂ. ಸದಸ್ಯ ಡಿ.ಜಿ. ವಿಶ್ವನಾಥ ಮಾತನಾಡಿದರು. ಶ್ರೀ ಪೇ.ಬ.ದೇ. ಟ್ರಸ್ಟ್‌ ಅಧ್ಯಕ್ಷ ಯಲಬುರ್ಗಿ ಸಂತೋಷಕುಮಾರ್‌ ಅಧ್ಯಕ್ಷತೆ ವಹಿಸಿದ್ದರು.

ಮಲೇಬೆನ್ನೂರು ಶ್ರೀ ವೀ.ದೇ. ಧರ್ಮದರ್ಶಿ ಬಿ.ಚಿದಾನಂದಪ್ಪ, ಎಪಿಎಂಸಿ. ಮಾಜಿ ಅಧ್ಯಕ್ಷ ಎನ್‌.ಜೆ.ವಾಗೀಶ್‌, ತಾ.ಪಂ. ಮಾಜಿ ಅಧ್ಯಕ್ಷ ಎಸ್‌.ಪಿ. ರವಿಕುಮಾರ್‌, ನ್ಯಾ.ಸಾ.ವೀ.ಸಮಾಜದ ಅಧ್ಯಕ್ಷ ಜಿ.ಶಿವಪ್ಪ, ಬಣಗಾರ್‌ ಮಲ್ಲಿಕಾರ್ಜುನ, ಶೆಟ್ರು ವೀರಣ್ಣ, ಡಾ.ಬಸವರಾಜಪ್ಪ, ಮಾಸ್ಟಿ ಮೀನಾಕ್ಷಮ್ಮ, ಬಾರೆ ಮರದ ಚನ್ನೇಶ್‌ ಮತ್ತಿತರರಿದ್ದರು.

ಕಾರ್ಯಕ್ರಮದಲ್ಲಿ ಬೆಳೆಗಾರ್‌ ಕವಿತಾ ನಿರೂಪಿಸಿದರು, ಮಹಿಳಾ ಘಟಕದವರು ಪ್ರಾರ್ಥಿಸಿದರು. ಚಿಟ್ಟೂರು ಸಂಜುಕುಮಾರ್‌ ಸ್ವಾಗತಿಸಿ, ಚನ್ನಗಿರಿ ಶಶಿ ವಂದಿಸಿದರು.

- - -

(-ಫೋಟೋ ಇದೆ.)

-ಸಮಾರಂಭವನ್ನು ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮೀಜಿ ಉದ್ಘಾಟಿಸಿದರು. ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಚಿವ ರೇಣುಕಾಚಾರ್ಯ, ಡಿ.ಜಿ. ವಿಶ್ವನಾಥ ಇತರರು ಇದ್ದರು.