ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರನೀವು ಯಾವ ರೀತಿ ಆಟ ಆಡುತ್ತಿದ್ದೀರಾ ಅಂತ ಗೊತ್ತಿದೆ. ಎಲ್ಲದಕ್ಕೂ ದೇವರು ತಕ್ಕ ಉತ್ತರ ಕೊಟ್ಟೆ ಕೊಡುತ್ತಾನೆ. ನೀವು ಮುಂದೆ ಜೈಲಿಗೆ ಹೋಗುವ ದಿನ ಬಂದೇ ಬರುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.ಬಿಡದಿ ಹೋಬಳಿ ಬೈರಮಂಗಲ ವೃತ್ತದಲ್ಲಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಭೂ ಸ್ವಾಧೀನ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ವರ್ಚ್ಯುವಲ್ ಸಭೆ ಮೂಲಕ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.ಬಿಡದಿ ಟೌನ್ಶಿಪ್ ವಿಚಾರವಾಗಿ ಡಿ.ಕೆ.ಶಿವಕುಮಾರ್ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರು ಬಿಲ್ಲುಕೆಂಪನಹಳ್ಳಿಯಲ್ಲಿ ಒಬ್ಬ ವ್ಯಕ್ತಿಯ ಭೂಮಿ ಲಪಟಾಯಿಸಿ ಬಿಲ್ಡಿಂಗ್ ಕಟ್ಟಿಕೊಂಡರು. ನಿವೃತ್ತ ಯೋಧನ ಜಮೀನು ಕಬಳಿಸಿದರು. ಅವರಿಗೆ ದೇವೇಗೌಡರು ಹಾಗೂ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
ಬೆಂಗಳೂರು - ಮೈಸೂರು ರಸ್ತೆ ಅಗಲೀಕರಣಕ್ಕೆ ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ನಿರ್ಧಾರ ಮಾಡಿದರು. ಬಳಿಕ ದೇವೇಗೌಡರು ದೆಹಲಿಗೆ ಹೋದರು. ಆಗ ಇದೇ ಡಿ.ಕೆ.ಶಿವಕುಮಾರ್ ಒಂದು ಪ್ರಾಧಿಕಾರ ಮಾಡಿ ಅಧ್ಯಕ್ಷರಾದರು. ಈಗಲೂ ಆ ರೈತರಿಗೆ ಡಿ.ಕೆ.ಶಿವಕುಮಾರ್ ಪರಿಹಾರ ಕೊಡಿಸಿಲ್ಲ. ಈಗ ನಮ್ಮ ಬಗ್ಗೆ ಮಾತನಾಡುತ್ತಾರೆ. ನಾನು ಯಾವುದೇ ಭೂಸ್ವಾಧೀನ ಪ್ರಕ್ರಿಯೆ ಮಾಡಿರಲಿಲ್ಲ. ಆಗ ರೈತರು ಬೇಡ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ನಾನು ಯಾವ ರೈತರಿಗೂ ಅನ್ಯಾಯ ಮಾಡಿಲ್ಲ.ಇದೇ ಕಾಂಗ್ರೆಸ್ ಸದ್ಯಶೋಧನಾ ಸಮಿತಿ ಮಾಡಿಕೊಂಡಿದ್ದರು. ನಾನು ಹಾಸನದಲ್ಲಿ ಹುಟ್ಟಿದ್ದರು ಋಣಾನುಬಂಧ ರಾಮನಗರದ ಸಂಬಂಧ ಬೆಳೆದಿದೆ. ಇಲ್ಲಿ ಜಮೀನು ಖರೀದಿಸಿ ಇಲ್ಲೇ ಉಳಿದು ಕೊಂಡಿದ್ದೇನೆ. ಈಗ 9 ಸಾವಿರ ಎಕರೆ ಭೂಸ್ವಾಧೀನ ಮಾಡಿ ಅದರಲ್ಲಿ ಇರುವ ಸರ್ಕಾರಿ ಭೂಮಿ ಲೂಟಿ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.ನನಗೆ ಆರೋಗ್ಯ ಸಮಸ್ಯೆ ಇರುವ ಕಾರಣ ಬರಲು ಸಾಧ್ಯವಾಗಿಲ್ಲ. ನಿಮ್ಮ ಪರವಾಗಿ ಧ್ವನಿ ಎತ್ತಲು ನಿಖಿಲ್ ಬಂದಿದ್ದಾರೆ. ಯಾವುದೇ ಕಾರಣಕ್ಕೂ ಒಂದು ಇಂಚು ಭೂಮಿ ಸ್ವಾಧೀನ ಮಾಡಲು ಬಿಡಲ್ಲ. ಪಾದಯಾತ್ರೆಗೆ ಅನಿವಾರ್ಯವಾದರೆ ನಾನೇ ಬರುತ್ತೇನೆ. ರೈತರ ಜೊತೆ ನಾವು ನಿಲ್ಲುತ್ತೇವೆ ಎಂದು ಹೇಳಿದರು.
ಇದು ರಾಜಕೀಯ ಪ್ರಶ್ನೆ ಅಲ್ಲ, ಜನರ ಬದುಕಿನ ಪ್ರಶ್ನೆ. ಅಭಿವೃದ್ಧಿ ಹೆಸರಲ್ಲಿ ರೈತರ ಜಮೀನು ಲೂಟಿ ಮಾಡಲು ಬಿಡುವುದಿಲ್ಲ. ನಿಮ್ಮ ಹೋರಾಟಕ್ಕೆ ನಾನು ಜೊತೆಯಲ್ಲಿ ಇರುತ್ತೇನೆ. ಅಧಿಕಾರಿಗಳು, ಪೊಲೀಸರು ರೈತರ ಮೇಲೆ ದಬ್ಬಾಳಿಕೆ ಮಾಡಿ ಸರ್ವೆ ಕಾರ್ಯ ಮಾಡಿದರೆ ಮುಂದೆ ಪ್ರಾಯಶ್ಚಿತ ಪಡೆಬೇಕಾಗುತ್ತದೆ ಎಂದು ಎಚ್ಚರಿಸಿದರು.ನಾನು ನೋಡದೇ ಇರುವ ಅಧಿಕಾರಿಗಳು ನೀವಲ್ಲ. ರೈತರಿಗೆ ಏನಾದರು ತೊಂದರೆ ಕೊಟ್ಟರೇ ನಾನು ಬರಬೇಕಾಗುತ್ತದೆ. ಮುಂದೆ ಏನಾಗುತ್ತದೆ ಅಂತ ಕಾದುನೋಡಿ. ಜನತಾದಳ ಮುಗಿದುಹೋಗುತ್ತೆ ಅಂದು ಕೊಂಡಿದ್ದಾರೆ. ಮುಂದೆ ರೈತಪರ ಸರ್ಕಾರ ಬಂದೇ ಬರುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು.28ಕೆಆರ್ ಎಂಎನ್ 3,4.ಜೆಪಿಜಿಬಿಡದಿ ಹೋಬಳಿ ಬೈರಮಂಗಲ ವೃತ್ತದಲ್ಲಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಭೂ ಸ್ವಾಧೀನ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ವರ್ಚ್ಯುವಲ್ ಸಭೆ ಮೂಲಕ ರೈತರನ್ನು ಉದ್ದೇಶಿಸಿ ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಿದರು.---------------------------