ಚಿಕ್ಕಮಗಳೂರುಅರಣ್ಯವನ್ನು ರಕ್ಷಿಸುವುದು, ವನ್ಯಜೀವಿಗಳ ಸಂರಕ್ಷಿಸುವುದು ಮಾತ್ರವಲ್ಲದೆ ವನ್ಯಜೀವಿಗಳಿಂದ ಜನರನ್ನು ಹಾಗೂ ಜನರಿಂದ ವನ್ಯಜೀವಿಗಳನ್ನು ರಕ್ಷಿಸುವ ಬಹುದೊಡ್ಡ ಜವಾಬ್ದಾರಿ ಇಲಾಖೆ ಮೇಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಹೆಗಡೆ ಹೇಳಿದರು.
ಶ್ರೀನಿವಾಸ್ ನಗರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಅರಣ್ಯವನ್ನು ರಕ್ಷಿಸುವುದು, ವನ್ಯಜೀವಿಗಳ ಸಂರಕ್ಷಿಸುವುದು ಮಾತ್ರವಲ್ಲದೆ ವನ್ಯಜೀವಿಗಳಿಂದ ಜನರನ್ನು ಹಾಗೂ ಜನರಿಂದ ವನ್ಯಜೀವಿಗಳನ್ನು ರಕ್ಷಿಸುವ ಬಹುದೊಡ್ಡ ಜವಾಬ್ದಾರಿ ಇಲಾಖೆ ಮೇಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಹೆಗಡೆ ಹೇಳಿದರು.
ಶುಕ್ರವಾರ ಅರಣ್ಯ ಇಲಾಖೆಯಿಂದ ನಗರದ ಶ್ರೀನಿವಾಸ್ ನಗರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿ ಶೇ.50 ರಷ್ಟು ಸಿಬ್ಬಂದಿ ಕೊರತೆಯಿದ್ದರೂ ಅರಣ್ಯ ಸಿಬ್ಬಂದಿ ಸಮಯದ ಹಂಗಿಲ್ಲದೆ ಜವಾಬ್ದಾರಿ ಯಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.ಅರಣ್ಯ ಸಿಬ್ಬಂದಿ ಕಾರ್ಯ ಕೇವಲ ಉದ್ಯೋಗವಲ್ಲ, ಅದು ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಆಮ್ಲಜನಕ ಮತ್ತು ಜೀವ ವೈವಿಧ್ಯತೆಯನ್ನು ಕಾಯ್ದಿಟ್ಟು ಕೊಡುವ ಮಹತ್ತರ ಸೇವೆ. ಕರ್ತವ್ಯ ನಿರತರಾಗಿದ್ದಾಗ ಪ್ರಾಣತ್ಯಾಗ ಮಾಡಿದ ಅಧಿಕಾರಿ ಗಳಾದ ಪಿ.ಶ್ರೀನಿವಾಸ್, ಎಸ್.ಎನ್.ಹನುಮಂತಪ್ಪ, ಕಾಳೇಗೌಡ, ಪುಟ್ಟರಾಜು ಬಿ., ಕಾರ್ತಿಕ್ ಕೆ. ಸೇರಿದಂತೆ ನಾಡಿನ ಎಲ್ಲಾ ಅರಣ್ಯ ಹುತಾತ್ಮರ ಸೇವೆ ಹಾಗೂ ಅವರ ಕುಟುಂಬಸ್ಥರ ತ್ಯಾಗ ಸ್ಮರಿಸಲಾಯಿತು.ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾತನಾಡಿ, ಅರಣ್ಯ ನಮ್ಮ ದೇಶದ ದೊಡ್ಡ ಆಸ್ತಿ. ಇಂತಹ ಅತ್ಯಮೂಲ್ಯ ಅರಣ್ಯ ಹಾಗೂ ವನ್ಯಜೀವಿಗಳನ್ನು ರಕ್ಷಿಸುವ ಕಾಯಕದಲ್ಲಿ ನಿರತರಾಗಿದಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅತ್ಯಂತ ಸವಾಲಿನ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.ಅರಣ್ಯ ಇಲಾಖೆಯಲ್ಲಿ ಕಾನೂನು ಚೌಕಟ್ಟಿನಲ್ಲಿ ಹಾಗೂ ಪ್ರಕೃತಿ ಸವಾಲುಗಳ ನಡುವೆ ಕೆಲಸ ಮಾಡುವುದು ಅತ್ಯಂತ ಕಷ್ಟಕರ. ಇಂತಹ ಸಂದರ್ಭಗಳಲ್ಲೂ ಸಿಬ್ಬಂದಿ ತೋರುವ ಬದ್ಧತೆ ಅಭಿನಂದನೀಯ. ಅಲ್ಲದೆ ೨೦೧೩-೧೪ ರಿಂದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ನಿರಂತರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇದು ಸಿಬ್ಬಂದಿ ಜವಾಬ್ದಾರಿ ಮತ್ತು ಕೊಡುಗೆ ನೆನಪಿಸುವ ಕಾರ್ಯ ಎಂದರು.ಅರಣ್ಯ ಸಂರಕ್ಷಣಾಧಿಕಾರಿ ಯಶ್ಪಾಲ್ ಕ್ಷೀರಸಾಗರ್ ಮಾತನಾಡಿ 1730ರಲ್ಲಿ ರಾಜಸ್ಥಾನದ ಜೋಧ್ಪುರದ ಖೇಜರ್ಲಿ ಯಲ್ಲಿ ಬಿಷ್ಣೋಯಿ ಸಮುದಾಯದ ಅಮೃತಾದೇವಿ ಹಾಗೂ ೩೬೩ಕ್ಕೂ ಹೆಚ್ಚು ಜನರು ಮರಗಳನ್ನು ಉಳಿಸಲು ತಮ್ಮ ಪ್ರಾಣ ವನ್ನೇ ಅರ್ಪಿಸಿದರು. ಬಿಷ್ಣೋಯಿ ಸಮುದಾಯದ 29 ನಿಯಮಗಳಲ್ಲಿ ಮರಗಳನ್ನು ಕತ್ತರಿಸದಿರುವುದು ಮತ್ತು ಪ್ರಾಣಿಗಳಿಗೆ ಹಿಂಸೆ ನೀಡದಿರುವುದು ಪ್ರಮುಖ ತತ್ವಗಳಾಗಿವೆ. ಒಂದು ಮರ ಉಳಿಸಲು ಶಿರಚ್ಛೇದವಾದರೂ ಅದು ಅಗ್ಗದ ತೆರವು ಎಂಬುದು ಅವರ ನಿಲುವಾಗಿತ್ತು ಎಂದು ನೆನಪಿಸಿಕೊಂಡರು.ಅಲ್ಲದೆ, ೧೯೮೩ರಲ್ಲಿ ಉತ್ತರ ಕನ್ನಡದಲ್ಲಿ ನಡೆದ ಐತಿಹಾಸಿಕ ‘ಅಪ್ಪಿಕೋ ಚಳುವಳಿ’ಯನ್ನು ಉಲ್ಲೇಖಿಸಿ, ಅರಣ್ಯ ರಕ್ಷಣೆಗೆ ಭಾರತದಲ್ಲಿ ಸುದೀರ್ಘ ಇತಿಹಾಸವಿದೆ. ಕೇಂದ್ರ ಸರ್ಕಾರ ೨೦೧೩ರಿಂದ ಸೆ. ೧೧ನ್ನು ‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ’ವಾಗಿ ಘೋಷಿಸಿದೆ ಎಂದರು.ಸರ್ಕಾರದ ೩೨-೩೩ ಇಲಾಖೆಗಳು ಪ್ರಸ್ತುತ ಪೀಳಿಗೆಗೆ ಕೆಲಸ ಮಾಡಿದರೆ, ಅರಣ್ಯ ಇಲಾಖೆ ಒಂದೇ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತದೆ ಎಂದರು. ಸುಮಾರು ಶೇ.೫೦ ರಷ್ಟು ಸಿಬ್ಬಂದಿ ಕೊರತೆಯಿದ್ದರೂ, ನಮ್ಮ ಅಧಿಕಾರಿ ಮತ್ತು ಸಿಬ್ಬಂದಿ ೨೪*೭ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾನವ-ಪ್ರಾಣಿ ಸಂಘರ್ಷ, ಹವಾಮಾನ ವೈಪರೀತ್ಯ ಹಾಗೂ ತಂತ್ರಜ್ಞಾನದ ಬಳಕೆ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ. ಸಿಬ್ಬಂದಿ ಜೀವ ಮತ್ತು ಆರೋಗ್ಯ ರಕ್ಷಣೆ ಅತ್ಯಂತ ಮುಖ್ಯವಾಗಿದ್ದು, ಗಸ್ತು ತಿರುಗುವಾಗ ಮತ್ತು ಕಾಡುಪ್ರಾಣಿಗಳ ಎದುರು ಕರ್ತವ್ಯ ನಿರ್ವಹಿಸುವಾಗ ಅಗತ್ಯ ಶಸ್ತ್ರಾಸ್ತ್ರ ಹಾಗೂ ಜಾಗರೂಕತೆಯೊಂದಿಗೆ ತಮ್ಮ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪುಲ್ಕೀತ್ ಮೀನಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಕರ್ಷ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್ ಮೊದಲಾದವರಿದ್ದರು.---ಕೋಟ್---
ಅರಣ್ಯ ಇಲಾಖೆ ಕೇವಲ ಇಂದಿನ ಪೀಳಿಗೆಗಷ್ಟೇ ಅಲ್ಲದೆ ಮುಂದಿನ ಪೀಳಿಗೆ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುವ ವಿಶಿಷ್ಟ ಇಲಾಖೆಯಾಗಿದೆ.- ಯಶ್ಪಾಲ್ ಕ್ಷೀರಸಾಗರ್,ಅರಣ್ಯ ಸಂರಕ್ಷಣಾಧಿಕಾರಿ ಚಿಕ್ಕಮಗಳೂರು