ಹಾರೋಹಳ್ಳಿ: ನಮ್ಮ ಮೇಲೆ ನಂಬಿಕೆ ಇಟ್ಟು ಮತ ನೀಡಿದ ಜನರ ಋಣ ತೀರಿಸಿ ತಾಲೂಕನ್ನು ಅಭಿವೃದ್ಧಿ ಪಡಿಸುವುದೇ ನಮ್ಮ ಮೂಲ ಗುರಿ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು
ಹಾರೋಹಳ್ಳಿ: ನಮ್ಮ ಮೇಲೆ ನಂಬಿಕೆ ಇಟ್ಟು ಮತ ನೀಡಿದ ಜನರ ಋಣ ತೀರಿಸಿ ತಾಲೂಕನ್ನು ಅಭಿವೃದ್ಧಿ ಪಡಿಸುವುದೇ ನಮ್ಮ ಮೂಲ ಗುರಿ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ಕೀರಣಗೆರೆ ಜಗದೀಶ್ಗೆ ಸೇರಿದ ಚಾಕಿ ಸಾಗಾಣಿಕಾ ಕೇಂದ್ರದ ಆವರಣದಲ್ಲಿ ನಡೆದ ಭಾರತ್ ಜೋಡೊ ಯುವ ಸಂಘಟನೆಗಳ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಹಾರೋಹಳ್ಳಿ ಅಭಿವೃದ್ಧಿಗೆ ಪ್ರಸ್ತುತ 550 ಕೊಟಿ ರು.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಮುಖವಾಗಿ ಹಾರೋಹಳ್ಳಿಗೆ ಕುಡಿಯಲು ಕಾವೇರಿ ನೀರು ಒದಗಿಸುವುದು, ಅಲ್ಲದೇ ಜನರ ಆರೋಗ್ಯ, ಮೂಲ ಸೌಲಭ್ಯಗಳನ್ನು ನೀಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.ಯುವ ಜನರಲ್ಲಿ ಕ್ರೀಡೆ, ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಭಾರತ್ ಜೋಡೊ ಯುವ ಸಂಘ ಸ್ಥಾಪಿಸಲು ರಾಜ್ಯ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ. ಈ ಮಹತ್ವಾಂಕ್ಷಿ ಯೋಜನೆಯನ್ನು ಯಶಸ್ವಿಗೊಳಿಸಲು ಹಾರೋಹಳ್ಳಿ-ಮರಳವಾಡಿ ಗ್ರಾಮ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗುವುದು. ಈ ಸಂಬಂಧ ಕಾರ್ಯಕರ್ತರು, ಮುಖಂಡರು, ಒಗ್ಗಟ್ಟಾಗಿ ಯುವ ಸಮುದಾಯವನ್ನು ಸದಸ್ಯರನ್ನಾಗಿ ಮಾಡುವ ಮೂಲಕ ಸಂಘಟಿತರಾಗಬೇಕಿದೆ ಎಂದು ಹೇಳಿದರು.
ನೋಂದಣಿಗೆ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗುವುದು, 16ರಿಂದ 35 ವರ್ಷಗಳ ವಯೋಮಿತಿ ಇರುವ ಯುವ ಸಮುದಾಯವನ್ನು ನೋಂದಣಿ ಮಾಡುವ ಮೂಲಕ ಯುವ ಸಂಘಗಳ ಯಶಸ್ಸಿಗೆ ಎಲ್ಲರೂ ಒಗಟ್ಟಿನಿಂದ ಕಟುಬದ್ದರಾಗಿ ಕೆಲಸ ಮಾಡಬೇಕಿದೆ. ರಾಜ್ಯಾದ್ಯಂತ 10 ಸಾವಿರ ಸಂಘಗಳನ್ನು ಸ್ಥಾಪಿಸಲು ಸರ್ಕಾರ ಗುರಿ ಹೊಂದಿದೆ. ಪ್ರತಿ ತಾಲೂಕಿಗೂ 2500 ಕೋಟಿ ಹಣ ಬರುತ್ತದೆ. ಇದನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಯುವ ಸಮೂಹವನ್ನು ಒಗ್ಗೂಡಿಸಬೇಕು ಎಂದು ಹೇಳಿದರು.ದೇವರ ದುಡ್ಡು ತಿಂದವರಿಗೆ ಬಿಜೆಪಿ ಶ್ರೀರಕ್ಷೆ:
ರಾಜ್ಯದಲ್ಲಿ ವಾಲ್ಮೀಕಿ ನಿಗಮದ ಹಣ ದುರುಪಯೋಗದ ಹೆಸರಿನಲ್ಲಿ ವಿರೋಧ ಪಕ್ಷಗಳು ಚಿಲ್ಲರೆ ರಾಜಕೀಯ ಮಾಡುತ್ತಿದ್ದಾರೆ. ಈಗಾಗಲೇ ಇದರ ಹಣವನ್ನು ಅಧಿಕಾರಿಗಳಿಂದ ವಸೂಲಿ ಸಹ ಮಾಡಲಾಗಿದೆ. ನಾಗೇಂದ್ರ ಅವರನ್ನು ರಾಜಕೀಯ ದ್ವೇಷ, ಅಸೂಯೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದಾರೆ ಎಂದು ಟೀಕಿಸಿದರು.ದೇಶವನ್ನು ಜಾತಿ, ಮತದಿಂದ ಇಬ್ಬಾಗ ಮಾಡಲು ಹೊರಟಿರುವ ಬಿಜೆಪಿಯವರು ಅಯೋಧ್ಯೆಯ ಶ್ರೀರಾಮ ಮಂದಿರ ದೇಣಿಗೆಯ ಕೋಟ್ಯಾಂತರ ರೂಪಾಯಿ ಹಣವನ್ನು ಉರುಪಯೋಗ ಮಾಡಿಕೊಂಡಿದ್ದಾರೆ. ಭಕ್ತರು ಭಕ್ತಿ ಮತ್ತು ಶ್ರದ್ಧೆಯಿಂದ ನೀಡಿದ ಕಾಣಿಕೆ ಹಣವನ್ನು ಲೂಟಿ ಮಾಡಿದ ಬಿಜೆಪಿಯವರು ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುತ್ತ ಕಾಂಗ್ರೆಸ್ ಪಕ್ಷವೇ ಮಹಾ ಪಾಪ ಮಾಡಿದೆ ಎನ್ನುವಂತೆ ನಿತ್ಯ ಬೊಬ್ಬೆ ಹೊಡೆಯುತ್ತಿದ್ದಾರೆ. ಮುಂದೆ ಶ್ರೀರಾಮ ಚಂದ್ರನೇ ಇವರಿಗೆ ಬುದ್ದಿ ಕಲಿಸಬೇಕಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ಈ ವೇಳೆ ಬಮೂಲ್ ನಿರ್ದೇಶಕ ಹರೀಶ್, ಮುಖಂಡರಾದ ಮೋಹನ್ ಹೊಳ್ಳ, ಕೀರಣಗೆರೆ ಜಗದೀಶ್, ಗಬ್ಬಾಡಿ ಜಗದೀಶ್ವರ್ ಗೌಡ, ಪರಮೇಶ್, ಈಶ್ವರ್, ಕಣಿವೆ ಮಾದಾಪುರ ಶಂಕರ್, ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಜೆ.ಸಿ.ಬಿ ಅಶೋಕ್ ಉಪಸ್ಥಿತರಿದ್ದರು.31ಕೆಆರ್ ಎಂಎನ್ 5.ಜೆಪಿಜಿ
ಹಾರೋಹಳ್ಳಿ ತಾಲೂಕು ಕೀರಣಗೆರೆ ಜಗದೀಶ್ರವರ ಚಾಕಿ ಸಾಕಾಣಿಕಾ ಕೇಂದ್ರದಲ್ಲಿ ಭಾರತ್ ಜೋಡೊ ಯುವ ಸಂಘಗಳ ಜಾಗೃತಿ ಸಭೆಯಲ್ಲಿ ಇಕ್ಬಾಲ್ ಹುಸೇನ್ ಮಾತನಾಡಿದರು.