ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಪಟ್ಟಣದ ಹೊರವಲಯದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಹೋಗಲು ರಸ್ತೆಯೇ ಇಲ್ಲದೆ ರೈಲ್ವೆ ಹಳಿಗಳನ್ನು ದಾಟಿಕೊಂಡು ಹೋಗುವಂತಹ ಸ್ಥಿತಿಯನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಅವರು, ಕೂಡಲೇ ಪರಿಹಾರ ಕೇಂದ್ರಕ್ಕೆ ರಸ್ತೆ ಕಲ್ಪಿಸಲು ಕ್ರಮ ವಹಿಸುವಂತೆ ತಹಸೀಲ್ದಾರ್ಗೆ ಸೂಚನೆ ನೀಡಿದರು.ತಾಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಪಂ ವ್ಯಾಪ್ತಿಯ ಬೀರಂಡಹಳ್ಳಿ ಗ್ರಾಮದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಬುಧವಾರ ಜಿಲ್ಲಾಧಿಕಾರಿ ಡಾ.ರವಿ ದಿಢೀರನೆ ಭೇಟಿ ನೀಡಿದಾಗ ಕೇಂದ್ರಕ್ಕೆ ಹೋಗಲು ರಸ್ತೆ ಇಲ್ಲದಿರುವುದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದರಲ್ಲದೆ, ಕೊನೆಗೆ ಹಳಿಗಳನ್ನು ದಾಟಿಕೊಂಡೇ ಕೇಂದ್ರ ತಲುಪಿದರು.ನಿರಾಶ್ರಿತರ ಬಳಿ ಆಧಾರ್ ಇಲ್ಲ
ಅಲ್ಲಿ ಸುಮಾರು ೧೨೦ಕ್ಕೂ ಹೆಚ್ಚಿನ ನಿರಾಶ್ರಿತ ಫಲಾನುಭವಿಗಳಿದ್ದು ಅವರಿಂದ ಹಗ್ಗ ನೇಯ್ಗೆ ಕೆಲಸ ಮಾಡಿಸಿಸುತ್ತಿರುವುದನ್ನು ವೀಕ್ಷಿಸಿದರು.,ಹಗ್ಗ ನೇಯ್ದ ಬಳಿಕ ಅದರಿಂದ ಬರುವ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾಯಿಸಲು ಬಹುತೇಕರ ಬಳಿ ಆಧಾರ್ ಕಾರ್ಡ್ ಇಲ್ಲದೆ ಇರುವುದರಿಂದ ಅವರ ಖಾತೆಗೆ ಹಣ ನಗದು ಆಗುತ್ತಿಲ್ಲವೆಂದು ತಿಳಿದು ಆಶ್ಚರ್ಯ ವ್ಯಕ್ತಪಿಡಿಸಿದರು. ಇಷ್ಟುದಿನ ಯಾಕೆ ಅವರಿಗೆ ಆಧಾರ್ ಕಾರ್ಡ್ ಮಾಡಿಸಿಲ್ಲ ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.ಅಲ್ಲದೆ ನಿರಾಶ್ರಿತರಿಂದ ಹಗ್ಗ ತಯಾರಿಸುವ ಕಾಯಕ ಹಮ್ಮಿಕೊಂಡಿದ್ದರೂ ಇದರ ಬಗ್ಗೆ ತಮಗೆ ಯಾವುದೇ ಮಾಹಿತಿ ನೀಡಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಪ್ರತಿ ತಿಂಗಳು ಕಡತಗಳಿಗೆ ಸಹಿ ಮಾತ್ರ ಮಾಡಿಸಿಕೊಳ್ಳುವಿರಿ ಇಂತಹ ಉತ್ತಮ ಕೆಲಸದ ಬಗ್ಗೆ ಮಾಹಿತಿ ನೀಡಿಲ್ಲವೆಂದರೆ ಅದು ನಿಮ್ಮ ನಿರ್ಲಕ್ಷ್ಯತನ ತೋರುತ್ತದೆ ಎಂದರು.
ವರ್ಕ್ಶಾಪ್ ಆದ ವಸತಿ ಕಟ್ಟಡಅಲ್ಲದೆ ಹೊಸ ಕಟ್ಟಡದಲ್ಲಿ ಹಗ್ಗ ತಯಾರಿಸುವ ಕೆಲಸ ಮಾಡುತ್ತಿದ್ದನ್ನೂ ಕಂಡು ಸಿಡಿಮಿಡಿಕೊಂಡರು ಸುಜ್ಜಿತ ಕಟ್ಟಡದಲ್ಲಿ ನಿರಾಶ್ರಿತರಿಗೆ ಆಶ್ರಯ ಕಲ್ಪಿಸದೆ ವರ್ಕ್ ಶಾಪ್ ಆಗಿ ಬದಲಾಯಿಸುವುದು ಸರಿಯಿಲ್ಲ ನಾಳೆಯೇ ಬೇರೆ ಕಡೆ ಸ್ಥಳಾಂತರಿಸಲು ಸೂಚಿಸಿದರು. ನಿರಾಶ್ರಿತರಿಂದಲೂ ಕೇಂದ್ರದಲ್ಲಿ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ಹಾಗೂ ಅನಾನುಕೂಲಗಳ ಬಗ್ಗೆ ಮಾಹಿತಿ ಕಲೆ ಹಾಕಿದರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು, ನಿರಾಶ್ರಿತರಿಗೆ ಹಗ್ಗ ಸಿದ್ದಪಡಿಸುವ ಕೌಶಲ ತರಬೇತಿ ನೀಡಿ ಅದರಿಂದ ಬರುವ ಹಣವನ್ನು ಅವರಿಗೆ ನೀಡುವ ಕೆಲಸ ಸಹ ಶ್ಲಾಘನೀಯ ಎಂದರು.ಈ ವೇಳೆ ತಹಸೀಲ್ದಾರ್ ಎಸ್.ವೆಂಕಟೇಶಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್, ತಾಲೂಕು ಅಧಿಕಾರಿ ಅಂಜಲಿ, ವಾರ್ಡ್ನ್ ಸುನಿತಾ ಇತರರು ಇದ್ದರು.