ಶೇ.104 ರಷ್ಟು ಕಂದಾಯ ವಸೂಲಾತಿ ಸಾಧನೆ । ₹8.06 ಕೋಟಿಗೂ ಮೀರಿ ₹8.11 ಕೋಟಿ ತೆರಿಗೆ ಸಂಗ್ರಹ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

2025-26ನೇ ಆರ್ಥಿಕ ವರ್ಷದಲ್ಲಿ ಎಲ್ಲಾ 9 ತಾಲೂಕುಗಳಲ್ಲಿ ಶೇ.104 ರಷ್ಟು ಕಂದಾಯ ವಸೂಲಾತಿ ಸಾಧನೆ ಮೂಲಕ ಚಿಕ್ಕಮಗಳೂರು ಜಿಲ್ಲೆ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದೆ.

ಕಂದಾಯ ಅದಾಲತ್ ಆಂದೋಲನಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿ 2024-25ನೇ ಆರ್ಥಿಕ ವರ್ಷದಲ್ಲಿ ಪ್ರಥಮ ಬಾರಿಗೆ ಜಿಲ್ಲೆಯ ಎಲ್ಲ ತಾಲೂಕುಗಳು ಶೇ.100 ರಷ್ಟು ತೆರಿಗೆ ವಸೂಲು ಮಾಡಿದ್ದವು. 2025-26ನೇ ಸಾಲಿನಲ್ಲಿ ₹30 ಕೋಟಿ ಅಥವಾ ಅದಕ್ಕಿಂತ ಹೆಚ್ಚಿಗೆ ಕಂದಾಯ ಬೇಡಿಕೆ ಇರುವ ಜಿಲ್ಲೆಗಳ ಪೈಕಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲಾಗಿದೆ.ಚಿಕ್ಕಮಗಳೂರು ತಾಲೂಕು 2025-26ನೇ ಸಾಲಿನ ಬೇಡಿಕೆ ಮೊತ್ತ ₹8.06 ಕೋಟಿ ಇದ್ದರೂ ಅದಕ್ಕಿಂತ ಹೆಚ್ಚಾಗಿ ₹8.11 ಕೋಟಿ ತೆರಿಗೆ ಸಂಗ್ರಹಿಸಿ ಅತೀ ಹೆಚ್ಚು ಮೊತ್ತದ ಕಂದಾಯ ವಸೂಲಿ ಮಾಡಿ ತಾಲೂಕು ಪ್ರಥಮ ಸ್ಥಾನ ಪಡೆದರೆ, ಶೇ 112.16 ರಷ್ಟು ಕಂದಾಯ ವಸೂಲಾತಿ ಮಾಡುವ ಮೂಲಕ ಕಳಸ ತಾಲೂಕು ಶೇಕಡವಾರು ಕಂದಾಯ ವಸೂಲಾತಿಯಲ್ಲಿ ಸ್ಥಾನ ಒಂದನ್ನು ಅಲಂಕರಿಸಿದೆ.ಎನ್.ಆರ್.ಪುರ ತಾಲೂಕಿನ ಬಿ.ಕಣಬೂರು ಗ್ರಾಮ ಪಂಚಾಯಿತಿ 2025-26ನೇ ಸಾಲಿನ ಬೇಡಿಕೆ ಮೊತ್ತ ₹87.20ಲಕ್ಷ ಇದ್ದರೂ ₹86.18 ಲಕ್ಷ ವಸೂಲು ಮಾಡಿ ಹೆಚ್ಚು ಕಂದಾಯ ವಸೂಲಾತಿಯ ಗ್ರಾಮ ಪಂಚಾಯಿತಿಯಾಗಿ ಅಗ್ರ ಸ್ಥಾನ ಗಳಿಸಿದೆ. ಶೇ.165 ರಷ್ಟು ಕಂದಾಯ ವಸೂಲಿಯಿಂದ ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮ ಪಂಚಾಯಿತಿ ಜಿಲ್ಲೆಯಲ್ಲೇ ಅತೀ ಹೆಚ್ಚು ಶೇಕಡವಾರು ಕಂದಾಯ ವಸೂಲಿಮಾಡಿದ ಗ್ರಾಪಂಗಳಲ್ಲಿ ಮೊದಲ ಸ್ಥಾನ ಪಡೆದಿದೆ.ಜಿಲ್ಲೆಯ 226 ಗ್ರಾಮ ಪಂಚಾಯಿತಿಗಳ ಪೈಕಿ, 2025-26ನೇ ಸಾಲಿನ ಬೇಡಿಕೆಗೆ ಎದುರಾಗಿ ಒಟ್ಟು 195 ಗ್ರಾಮ ಪಂಚಾಯಿತಿಗಳು ಶೇ.100ರಷ್ಟು ಹಾಗೂ 24 ಗ್ರಾಮ ಪಂಚಾಯಿತಿಗಳು ಶೇ.90 ಕ್ಕಿಂತ ಹೆಚ್ಚು ಕಂದಾಯ ವಸೂಲು ಮಾಡಿದ ಗ್ರಾಪಂಗಳೆನಿಸಿವೆ.

ನೀರು, ವಿದ್ಯುತ್‌ ದೀಪ, ಸಿಬ್ಬಂದಿ ವೇತನಕ್ಕೆ ಬಳಕೆ


ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮದಡಿ ಜಿಪಂ, ತಾಪಂ ಇಲ್ಲದ ಅಧಿಕಾರವನ್ನು ಗ್ರಾಪಂ ನೀಡಿದ್ದು ಗ್ರಾಪಂ ಗಳು ತಮ್ಮ ವ್ಯಾಪ್ತಿ ಕಟ್ಟಡ, ನಿವೇಶನಗಳು ಹಾಗೂ ಇನ್ನಿತರ ತೆರಿಗೆಯನ್ನು ವೈಜ್ಞಾನಿಕ ವಾಗಿ ವಿಧಿಸಿ, ವಸೂಲು ಮಾಡಿ, ತೆರಿಗೆ ಬಳಕೆ ಮಾಡುವ ಅಧಿಕಾರ ಹೊಂದಿವೆ. ಈ ರೀತಿ ಸ್ವಂತ ಸಂಪನ್ಮೂಲದ ಆದಾಯ, ಅನುದಾನದಿಂದ ಗ್ರಾಪಂ, ಪಂಚಾಯಿತಿ ಸಿಬ್ಬಂದಿ ವೇತನ, ಕುಡಿಯುವ ನೀರು ಮತ್ತು ನೈರ್ಮಲ್ಯ ಬೀದಿ ದೀಪ ಹಾಗೂ ಕಚೇರಿ ನಿರ್ವಹಣೆಗೆ ಬಳಕೆ ಮಾಡುತ್ತಿವೆ.

ನೋಡಲ್‌ ಅಧಿಕಾರಿಗಳ ನೇಮಕ:

ಕಳೆದ 2024-25, 2025-26ನೇ ಆರ್ಥಿಕ ವರ್ಷದಲ್ಲಿ ಕಂದಾಯ ವಸೂಲಿ ವೇಗ ಹೆಚ್ಚಿಸಿ, ಗ್ರಾಪಂಗಳಲ್ಲಿ ಸ್ವಂತ ಆದಾಯ, ಸಂಪನ್ಮೂಲ ಹೆಚ್ಚಿಸಿಕೊಂಡು ಈ ವ್ಯಾಪ್ತಿಯಲ್ಲಿ ಅಗತ್ಯ ಮೂಲ ಸೌಕರ್ಯ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ 2025-26ನೇ ಆರ್ಥಿಕ ವರ್ಷದಲ್ಲಿ ಎರಡು ಬಾರಿ ಕಂದಾಯ ಅದಾಲತ್ ಆಯೋಜಿಸಲಾಗಿತ್ತು. ಇದರ ಮೇಲುಸ್ತುವಾರಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪ್ರತಿ ತಾಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ಜಿಪಂನಿಂದ ನಿಯೋಜಿಸಲಾಗಿತ್ತು.

ಗ್ರಾಪಂ ವ್ಯಾಪ್ತಿಯ ಕೈಗಾರಿಕೆಗೆ, ವಾಣಿಜ್ಯ ತೆರಿಗೆ ವ್ಯಾಪ್ತಿಯ ಮಧ್ಯಮ, ಸಣ್ಣ ಕೈಗಾರಿಕೆ, ಹೋಟೆಲ್, ಅಂಗಡಿ, ಹೋಂ ಸ್ಟೇ. ರೆಸಾರ್ಟ್ ಹಾಗೂ ಮೊಬೈಲ್ ಟವರ್‌ಗಳನ್ನು ಗುರುತಿಸಿ ತ್ವರಿತ ಕಂದಾಯ, ತೆರಿಗೆ ಪಾವತಿ ಮಾಡುವಂತೆ ಗ್ರಾಪಂ ಸೂಚನೆ ನೀಡಲಾಯಿತು. ಹೆಚ್ಚಿನ ಮನೆ, ನಿವೇಶನ ಕಂದಾಯ ಬಾಕಿದಾರರಿಗೆ ಕಂದಾಯ ಬಾಕಿ ಪಾವತಿ ಮಾಡುವ ಕುರಿತು ತಗಾದೆ ನೋಟಿಸ್ ಜಾರಿ ಮಾಡಲಾಗಿತ್ತು.---- ಕೋಟ್‌----

ಜಿಲ್ಲೆಯಲ್ಲಿ ಒಟ್ಟು 226 ಗ್ರಾಮ ಪಂಚಾಯತಿಗಳಿದ್ದು, 2025-26ನೇ ಆರ್ಥಿಕ ವರ್ಷದಲ್ಲಿ ₹30 ಕೋಟಿ ಗಿಂತ ಹೆಚ್ಚಿನ ಬೇಡಿಕೆ ಇರುವ ಜಿಲ್ಲೆಗಳಲ್ಲಿ ನಮ್ಮ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇದರಿಂದ ಗ್ರಾಪಂ ಸಿಬ್ಬಂದಿ ವೇತನ ಪಾವತಿ, ಗ್ರಾಪಂ ಮೂಲಸೌಲಭ್ಯ ಒದಗಿಸುವುದು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗಿದೆ.-ಎಚ್.ಎಸ್.ಕೀರ್ತನಾಮುಖ್ಯ ಕಾರ್ಯ ನಿರ್ವಹಣಾಧಿಕಾರಿ,ಜಿಪಂ, ಚಿಕ್ಕಮಗಳೂರು

---

ಕಳೆದ ಎರಡು ಆರ್ಥಿಕ ವರ್ಷಗಳಲ್ಲಿ ಶೇ.100ಕ್ಕೆ 100ರಷ್ಟು ಕಂದಾಯ ವಸೂಲು ಮಾಡಿರುವುದು ಗಮರ್ನಾಹ ಸಾಧನೆ. ಇದು ಜಿಲ್ಲೆಯ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಪಂ ಸಿಬ್ಬಂದಿಯ ಅವಿರತ ಶ್ರಮವಾಗಿದೆ. ಇದರಿಂದ 2026-27ನೇ ಆರ್ಥಿಕ ವರ್ಷದಲ್ಲಿ ಒಟ್ಟು ಬೇಡಿಕೆಗೆ ಶೇ.100 ರಷ್ಟು ಕಂದಾಯ ವಸೂಲಿಗೆ ಕ್ರಮವಹಿಸಿ ಗ್ರಾ.ಪಂ ಗಳನ್ನು ಆರ್ಥಿಕವಾಗಿ ಬಲಪಡಿಸಲಾಗುವುದು.- ಗೌರವ್ ಕುಮಾರ್ ಶೆಟ್ಟಿ, ಉಪ ಕಾರ್ಯದರ್ಶಿ (ಅಭಿವೃದ್ಧಿ)

ಜಿಪಂ, ಚಿಕ್ಕಮಗಳೂರು----

ಮಲೆನಾಡು ಹಾಗೂ ಬಯಲು ಸೀಮೆ ಒಳಗೊಂಡಿರುವ ಚಿಕ್ಕಮಗಳೂರು ತಾಪಂ ವ್ಯಾಪ್ತಿಗೆ ಒಳಪಡುವ 47 ಗ್ರಾಪಂಗಳಲ್ಲಿ 46 ಗ್ರಾಪಂಗಳು ಶೇ.100ಕ್ಕಿಂತ ಹೆಚ್ಚು ತೆರಿಗೆ ವಸೂಲಿ ಮಾಡಿ ವಿಶೇಷ ಸಾಧನೆ ಮಾಡಿವೆ. ತಾಲೂಕುಗಳಲ್ಲಿ ಚಿಕ್ಕಮಗಳೂರು ತಾಲೂಕು ಒಟ್ಟು ಬೇಡಿಕೆಗೆ ಅನುಗುಣವಾಗಿ ₹8.11 ಕೋಟಿ ಕಂದಾಯ ವಸೂಲಿ ಮಾಡಿ ಅತೀ ಹೆಚ್ಚು ಕಂದಾಯ ವಸೂಲು ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದರಲ್ಲೂ ಅಲ್ಲಂಪುರ ಗ್ರಾಪಂ ₹62.63 ಲಕ್ಷ ಒಂದೇ ಆರ್ಥಿಕ ವರ್ಷದಲ್ಲಿ ವಸೂಲು ಮಾಡಿರುವುದು ವಿಶೇಷ. ಈ ಸಾಧನೆ ಹಿಂದೆ ಎಲ್ಲ ಅಧಿಕಾರಿ, ಸಿಬ್ಬಂದಿ ವಿಶೇಷ ಪರಿಶ್ರಮವಿದೆ.

- ವಿಜಯಕುಮಾರ್‌, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ, ಚಿಕ್ಕಮಗಳೂರು