ಸಾರಾಂಶ
ಜಾನಪದ ಸಿರಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ
ಕನ್ನಡಪ್ರಭ ವಾರ್ತೆ ಹರಪನಹಳ್ಳಿಕಲೆಗೆ ಯಾವುದೇ ಜಾತಿ ಭೇದವಿಲ್ಲ, ನಾಡಿನ ಜಾನಪದ ಸಂಸ್ಕೃತಿಯು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿ ಸ್ವಾಮಿಗಳು ತಿಳಿಸಿದರು.
ನಗರದ ಸರ್ಕಾರಿ ಮಾದರಿ ಹಿರಿಯ ಪ್ರಥಮಿಕ ಶಾಲೆ ಮೇಗಳಪೇಟೆಯಲ್ಲಿ ಜಾನಪದ ಜಾಣರ ಸಾಂಸ್ಕೃತಿಕ ಕಲಾ ವೇದಿಕೆ ಹಾಗೂ ಗುರು ಚೇತನ ಕಲಾ ಬಳಗದ ಸಹಯೋಗದಲ್ಲಿ ಪದಗ್ರಹಣ ಹಾಗೂ ಜಾನಪದ ಸಿರಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.ಕೇವಲ ಸಂಘಗಳನ್ನು ಮಾಡಿಕೊಂಡರೆ ಸಾಲದು. ಅದರಲ್ಲಿ ವಿವಿದ ರೀತಿಯ ಕಾರ್ಯಕ್ರಮಗಳನ್ನು ಸದಾ ನಡೆಸುತ್ತಾ ಕ್ರಿಯಾಶೀಲವಾಗಿರಬೇಕು. ಹಾಗಿದ್ದಾಗ ಮಾತ್ರ ಸಂಘಗಳಿಗೆ ಮೌಲ್ಯ ಹೆಚ್ಚುತ್ತವೆ ಎಂದರು, ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆದು ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದರು.
ಸಾಹಿತಿ ಇಸ್ಮಾಯಿಲ್ ಎಲಿಗಾರ್ ಮಾತನಾಡಿ, ಜಾನಪದ ಕಲೆ, ಸಾಹಿತ್ಯ ಇಂದಿಗೂ ಜೀವಂತವಾಗಿರಲು ಶಿಕ್ಷಕರ ಕೊಡುಗೆ ಅಪಾರ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಶಿಕ್ಷಕ ಅರ್ಜುನ್ ಪರುಸಪ್ಪ, ಕೋಟ್ಯಾಂತರ ವರ್ಷಗಳಿಂದ ಮನುಷ್ಯನ ಜೀವನ ಶೈಲಿ ಸಾಕಷ್ಟು ಪರಿವರ್ತನೆ ಹೊಂದುತ್ತಾ ಬಂದಿದೆ. ಹಲವಾರು ದಶಕಗಳ ಹಿಂದೆ ತಂತ್ರಜ್ಞಾನದ ಅಭಿವೃದ್ಧಿ ಹೊಂದಿದ್ದಲ್ಲ. ಅಂದು ಹಳ್ಳಿಗಳಲ್ಲಿ ಡೊಳ್ಳಿನ ಪದ, ಕೋಲಾಟ, ಬೀಸುವ ಪದ, ಹಾಗೂ ಸೋಬಾನ ಪದಗಳನ್ನು ಜನಗಳು ಹಾಡುತ್ತಾ ತಮ್ಮ ಬದುಕನ್ನು ನಡೆಸುತ್ತಾ ಜಾನಪದದ ಮೆರಗನ್ನು ಹೆಚ್ಚಿಸಿದ್ದರು.
ಆದರೆ ತಂತ್ರಜ್ಞಾನ ಬೆಳೆದಂತೆ ಸಾಕಷ್ಟು ಜನಪದ ಕಲೆಗಳು ಕಣ್ಮರೆಯಾಗುತ್ತಿರುವುದು ಬೇಸರದ ಸಂಗತಿ, ಮೊಬೈಲ್ ಗೀಳು ಹೆಚ್ಚಾಗಿದ್ದು ಜಾನಪದ ಕುಂಠಿತವಾಗಲು ಪ್ರಮುಖ ಕಾರಣವಾಗಿದೆ ಎಂದರು.ಜಾನಪದ ಜಾಣರ ವೇದಿಕೆಯ ರಾಜ್ಯಾಧ್ಯಕ್ಷ ಮೂರ್ತಿ ಎಲ್., ಪ್ರಧಾನ ಕಾರ್ಯದರ್ಶಿ ಜಯಂತಿ ಹುದಾರ್, ಖಜಾಂಚಿ ರಮೇಶ್ ಎಂ., ಪದಾದಿಕಾರಿಗಳಾದ ಅಶೋಕ್ ಬಾಬು, ವನಶ್ರೀ ಶಿಂಧೆ, ಬಸಮ್ಮ ಕಂಠಿ, ರಾಮಾಂಜನೇಯ, ರಾಜು ರಾಮಾನಾಯ್ಕ, ಖಾದರ್ ಭಾಷಾ, ಬಿ. ಕೊಟ್ರಪ್ಪ, ಪದ್ಮರಾಜ್ ಜೈನ್, ಬಿ. ರಾಜಶೇಖರ, ಬಿ. ಚಂದ್ರಮೌಳಿ, ಹನುಮಂತಪ್ಪ, ಅಂಜಿನಪ್ಪ, ಕೆ. ಈಶ್ವರಪ್ಪ, ಎ. ಸಲಾಂ ಸಹೇಬ್, ಕೆ. ರಾಮಮೂರ್ತಿ, ಬಿ. ಈಶಾಚಾರಿ ಹಾಗೂ ಇತರರಿದ್ದರು.