ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಮಾಧ್ಯಮ ರಂಗ ನಾಲ್ಕನೇಯ ಅಂಗವಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ. ಆದರೆ, ಪತ್ರಕರ್ತರ ಜೀವನ ಮಾತ್ರ ಕಷ್ಟಕರವಾಗಿದೆ. ಹಗಲು ರಾತ್ರಿ ಎನ್ನದೇ ದುಡಿಯುವ ಪತ್ರಕರ್ತರು ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸುವಂತಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು. ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಮುಂಭಾಗದ ಪೊಲೀಸ್ ಸಮುದಾಯ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಸರ್ಕಾರಗಳು ತಪ್ಪಿದಾಗ ಎಚ್ಚರಿಸುವ ಕೆಲಸವನ್ನು ಮಾಡುವ ಪತ್ರಕರ್ತರ ಜೀವನ ಮಾತ್ರ ಕಷ್ಟಕರವಾಗಿದೆ, ಹಗಲು ರಾತ್ರಿ ಎನ್ನದೇ ದುಡಿಯುವ ಪತ್ರಕರ್ತರು ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸುವಂತಾಗಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಮಾಧ್ಯಮ ರಂಗ ನಾಲ್ಕನೇಯ ಅಂಗವಾಗಿ ತನ್ನ ಜವಾಬ್ದಾರಿ ನಿಭಾಯಿಸುತ್ತಿದೆ. ಪತ್ರಕರ್ತರಿಗೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಪತ್ರಕರ್ತರಿಗಾಗಿ ಬಿಎಲ್ಡಿಇ ಸಂಸ್ಥೆಯ ವತಿಯಿಂದ ಆರೋಗ್ಯ ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಬಸವಾದಿ ಶರಣರ ವಿಚಾರಗಳನ್ನು ಬೆಳಕಿಗೆ ತಂದ ಶ್ರೇಯಸ್ಸು ಡಾ.ಹಳಕಟ್ಟಿ ಅವರಿಗೆ ಸಲ್ಲುತ್ತದೆ, ಇಂತಹ ಶ್ರೇಷ್ಠ ವ್ಯಕ್ತಿ ಡಾ.ಹಳಕಟ್ಟಿ ಪತ್ರಕರ್ತರ ಬಳಗಕ್ಕೆ ಸೇರಿದವರು ಎಂಬುದು ಸಹ ಪತ್ರಕರ್ತರಿಗೆ ಹಮ್ಮೆಯ ಸಂಗತಿ ಎಂದರು.ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಪತ್ರಿಕೆಯ ಹೆಸರಿನಲ್ಲಿ ಬ್ಲಾಕ್ಮೇಲ್ ಮಾಡುವವರು ಕಾರ್ಯನಿರತ ಪತ್ರಕರ್ತರಲ್ಲ, ಅವರು ಕಿಸೆ ಕತ್ತರಿಸುವ ಪತ್ರಕರ್ತರು. ನಾನು ಸತ್ಯವನ್ನೇ ಮಾತನಾಡುತ್ತೇನೆ, ಯಾರೊಂದಿಗೂ ನಾನು ಅಡ್ಜೆಸ್ಟಮೆಂಟ್ ರಾಜಕಾರಣ ಮಾಡುವುದಿಲ್ಲ, ಒಳ್ಳೆಯದು ಮಾಡಿದರೆ ಅದನ್ನು ಹೊಗಳುತ್ತೇನೆ, ಕೆಟ್ಟದ್ದು ಮಾಡಿದರೆ ಅದನ್ನು ಟೀಕಿಸುತ್ತೇನೆ. ನಮ್ಮವರೇ ಇರಲಿ ಯಾರೇ ಇರಲಿ, ನಾನು ಎಂದಿಗೂ ಮುಖ್ಯಮಂತ್ರಿಗಳ ಕಚೇರಿಗೆ ಹೋಗಿ ನಿಲ್ಲುವುದಿಲ್ಲ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕಾನಿಪ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ಜಿಲ್ಲಾಧಿಕಾರಿ ಟಿ. ಭೂಬಾಲನ್, ವಿಡಿಎ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಕಾನಿಪ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಕಾನಿಪ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವನೆ, ಚಾಣಕ್ಯ ಕೆರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಎನ್.ಎಂ.ಬಿರಾದಾರ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಕಾನಿಪ ರಾಜ್ಯ ಪದಾಧಿಕಾರಿ ದೇವರಾಜ್, ಡಾ.ಎಂ.ಎಸ್. ಮದಭಾವಿ ಮುಂತಾದವರು ಇದ್ದರು.
--------------------------------------------ಬಾಕ್ಸ್
ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ಅವರು ಮಾತನಾಡಿ, ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಹಾಗೂ ಪತ್ರಕರ್ತರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಗೃಹ ಮಂಡಳಿಯಲ್ಲಿ ಶೇ.೫ ರಷ್ಟು ನಿವೇಶನಗಳನ್ನು ಪತ್ರಕರ್ತರಿಗೆ ಮೀಸಲಿರಿಸಲಾಗುತ್ತದೆ. ಈ ಸೌಲಭ್ಯವನ್ನು ಎಲ್ಲ ಭಾಗದ ಪತ್ರಕರ್ತರು ಪಡೆದುಕೊಳ್ಳಬೇಕು. ವ್ಯಕ್ತಿ ಕೇಂದ್ರಿತ ಸುದ್ದಿಗಳೇ ಇಂದು ಮಾಧ್ಯಮಗಳಲ್ಲಿ ರಾರಾಜಿಸುತ್ತಿವೆ. ಶ್ರೀಮಂತ ಕುಟುಂಬಗಳ ಮದುವೆಗಳು ಗಂಟೆಗಟ್ಟಲೇ ಬಿತ್ತರವಾಗುತ್ತಿವೆ. ಈ ಎಲ್ಲದರ ಮಧ್ಯೆ ಮಾಧ್ಯಮಗಳ ಮೇಲೆ ವಿಶ್ವಾಸಾರ್ಹತೆಯೂ ಕಡಿಮೆಯಾಗುತ್ತಾ ಸಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ರೈತರ, ಜನಸಾಮಾನ್ಯರ ಸಮಸ್ಯೆಗಳು ಮಾಧ್ಯಮಗಳಲ್ಲಿ ಬೆಳಕು ಚೆಲ್ಲುವ ಕೆಲಸ ನಡೆಯುತ್ತಿಲ್ಲ, ಒಂದು ರೀತಿ ಮಾಧ್ಯಮಕ್ಕೂ ಕಾರ್ಪೋರೇಟ್ ಸಂಸ್ಕೃತಿ ಕಾಲಿಟ್ಟಿದೆ. ವ್ಯಕ್ತಿ ಕೇಂದ್ರಿತ ಸುದ್ದಿಗಳು, ಬ್ರೇಕಿಂಗ್ ನ್ಯೂಸ್ ಅಬ್ಬರದಲ್ಲಿ ವಿಶ್ವಾಸಾರ್ಹತೆ ಕೊರತೆಯಾಗುತ್ತಿದೆ. ಹೀಗಾಗಿ ವಿಶ್ವಾಸಾರ್ಹತೆಯನ್ನು ಪುನರ್ ಸ್ಥಾಪಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಮಾದ್ಯಮ ಲೋಕ ಇರಿಸಬೇಕಿದೆ ಎಂದು ಸಲಹೆ ನೀಡಿದರು.