ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸೌಹಾರ್ದ ಎಂದರೆ ಪಕ್ಷಪಾತವಲ್ಲ, ಪೂರ್ವಾಗ್ರಹವಲ್ಲ. ಇದು ಎಲ್ಲಾ ವಲಯದ ಅವಿವೇಕಗಳನ್ನು ಮೀರಿದ ವಿವೇಕದ ಹಾದಿ. ಶಾಂತಿ, ಸಮಾಧಾನ ಮತ್ತು ಸಮಾನ ಮನಸ್ಥಿತಿಯ ಸಾಮಾಜಿಕ ಮೌಲ್ಯಪರ ಮತ್ತು ವಿರೋಧಿ ನೆಲೆಗಳಲ್ಲಿರುವ ವೈರುದ್ಯಗಳನ್ನು ಒಂದಾಗಿಸುವ ಪ್ರಕ್ರಿಯೆಯ ಪ್ರತೀಕವೇ ಸೌಹಾರ್ದ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಕೋಡಿ ರಂಗಪ್ಪ ಅಭಿಪ್ರಾಯ ಪಟ್ಟರು.ನಗರದ ಅಂಬೇಡ್ಕರ್ ವೃತ್ತದಲ್ಲಿ ರೈತಪರ,ಪ್ರಗತಿ ಪರ,ದಲಿತ ಪರ ಮತ್ತು ಕನ್ನಡ ಪರ ಸಂಘಟನೆಗಳಿಂದ ಏರ್ಪಡಿಸಿದ್ದ ಸೌಹಾರ್ದತಾ ಮಾನವಸರಪಳಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಸೋದರತ್ವ ಪ್ರತಿಪಾದನೆನಮ್ಮ ದೇಶಕ್ಕೆ ಬಹುದೊಡ್ಡ ಸೌಹಾರ್ದ ಪರಂಪರೆಯಿದೆ. ಬಹು ಸಂಸ್ಕೃತಿ, ಬಹುಭಾಷೆ ಮತ್ತು ಬಹು ಧರ್ಮಗಳ ಎಲ್ಲರೂ ಪರಸ್ಪರ ಸೌಹಾರ್ದದಿಂದ ಬದುಕುತ್ತ, ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕೆಂಬ ಬದ್ಧತೆಯಿಂದ ಅನೇಕ ಸಾಧಕರು ಶ್ರಮಿಸಿದ್ದಾರೆ. ಜಾತಿ, ಮತ ಧರ್ಮಗಳನ್ನು ಮೀರಿ ಒಟ್ಟಾಗಿ ಜೀವಿಸಿದ ಸೋದರತ್ವದ ಮೌಲ್ಯವನ್ನು ಪ್ರತಿನಿಧಿಸಿದ್ದಾರೆ. ಇದು ಬಹುತ್ವದ ಬದುಕಿನ ಮಾದರಿಯಾಗಿ ವಿಶ್ವಕ್ಕೆ ದಾರಿ ತೋರಿಸಿದೆ ಎಂದು ಹೇಳಿದರು.ರಾಜ್ಯ ಕೃಷಿ ಕೂಲಿಕಾರರ ಸಂಘದ ಉಪಾಧ್ಯಕ್ಷ ಬಿ.ಪಿ.ಮುನಿವೆಂಕಟಪ್ಪ ಮಾತನಾಡಿ, ಇಂದು ವಿವೇಕ-ಅವಿವೇಕ, ಸತ್ಯ-ಅಸತ್ಯ, ವಿಚಾರ-ವಿಕಾರಗಳ ನಡುವಿನ ''''''''ಅಂತರ'''''''' ಕಡಿಮೆಯಾಗುತ್ತಿದೆ. ಆದರೆ ಮನುಷ್ಯ-ಮನುಷ್ಯರ ನಡುವಿನ ''''''''ಕಂದರ'''''''' ಹೆಚ್ಚಾಗುತ್ತಿದೆ. ಈ ಕಂದರದ ಒಳಗಿಂದ ಬರುತ್ತಿರುವ ಕರುಳ ಬಳ್ಳಿಯ ಕರೆ ಕ್ಷೀಣ ದನಿಯಾಗುತ್ತಿದೆ. ಇಂಥ ಕಳವಳಕಾರಿ ವಾತಾವರಣದಲ್ಲಿ ಸೌಹಾರ್ದವನ್ನು ಮುನ್ನೆಲೆಗೆ ತರಲು ಎಲ್ಲ ಕ್ಷೇತ್ರಗಳ ಮಾನವೀಯ ಮನಸ್ಸುಗಳು ಮುಂದಾಗಬೇಕಾಗಿದೆ ಎಂದರು.ಸಂಕುಚಿತ ಸವಾಲು ಕಡೆಗಣಿಸಿ
ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ನಮ್ಮ ದೇಶದಲ್ಲಿ ಸೌಹಾರ್ದತೆಯ ಗಟ್ಟಿ ಪರಂಪರೆಯಿದೆ. ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೂ ಈ ಸೌಹಾರ್ದ ಪರಂಪರೆಯು ಸಂಕುಚಿತ ಸವಾಲುಗಳನ್ನು ಮೆಟ್ಟಿ ಮುಂದುವರೆಯುತ್ತ ಬಂದಿದೆ ಎಂದರು.ಕಸಾಪ ತಾಲ್ಲೂಕುಕಸಾಪ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಅಭಿಮತದಂತೆ "ಧರ್ಮವು ರಾಷ್ಟ್ರೀಯತೆಗೆ ಮಾನದಂಡವಲ್ಲ, ಅದೇನಿದ್ದರೂ ಮನುಷ್ಯ ಮತ್ತು ದೇವರ ನಡುವಿನ ವೈಯಕ್ತಿಕ ಸಂಬಂಧ. ಎಲ್ಲ ಧರ್ಮಗಳನ್ನೂ ಸಮದೃಷ್ಟಿಯಿಂದ ನೋಡಬೇಕು " ಎಂದು ಹೇಳಿದರು.ಈ ಸಂಧರ್ಭದಲ್ಲಿ , ಕಿಸಾನ್ ಕಾಂಗ್ರೇಸ್ ಅಧ್ಯಕ್ಷ ರಾಮಕೃಷ್ಣಪ್ಪ, ರೈತ ಸಂಘದ ಲಕ್ಷ್ಮೀನಾರಾಯಣರೆಡ್ಡಿ, ಹಳ್ಳಿ ಮಕ್ಕಳ ಸಂಘದ ವೆಂಕಟರವಣಪ್ಪ, ಚಿಂತಾಮಣಿ ಆನಂದ್,ಕನ್ನಡಸೇನೆಯ ರವಿಕುಮಾರ್, ಅಂತರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್,ದಲಿತ ಮುಖಂಡ ಬಿ.ಹೆಚ್.ನರಸಿಂಹಪ್ಪ, ಮಳ್ಳೂರು,ಎಸ್.ಎಫ್.ಐ.ಜಿಲ್ಲಾಧ್ಯಕ್ಷ ಸೋಮಶೇಖರ್ ಶಿವಣ್ಣ ಇದ್ದರು.