ಮಕ್ಕಳ ಮನಸ್ಥಿತಿ ಅರಿತು ಬೋಧಿಸಿದಾಗ ಭವಿಷ್ಯ ಉಜ್ವಲ: ಭರತರಾಜ ಕೆ.ಎನ್.

| Published : Jun 01 2025, 03:19 AM IST

ಮಕ್ಕಳ ಮನಸ್ಥಿತಿ ಅರಿತು ಬೋಧಿಸಿದಾಗ ಭವಿಷ್ಯ ಉಜ್ವಲ: ಭರತರಾಜ ಕೆ.ಎನ್.
Share this Article
  • FB
  • TW
  • Linkdin
  • Email

ಸಾರಾಂಶ

ಸವಣೂರು ಪಟ್ಟಣದ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಶುಕ್ರವಾರ ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ತಹಸೀಲ್ದಾರ್‌ ಭರತರಾಜ ಕೆ.ಎನ್. ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲಾಯಿತು.

ಸವಣೂರು: ಮಕ್ಕಳನ್ನು ಒತ್ತಡಕ್ಕೆ ಸಿಲುಕಿಸಿ ಶಿಕ್ಷಣವನ್ನು ನೀಡುವ ಬದಲಾಗಿ ಮಕ್ಕಳ ಮನಸ್ಥಿತಿಯನ್ನು ಅರಿತು ಬೋಧಿಸಿದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿದೆ ಎಂದು ತಹಸೀಲ್ದಾರ್‌ ಭರತರಾಜ ಕೆ.ಎನ್. ಹೇಳಿದರು.

ಪಟ್ಟಣದ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವ ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ಸ್ವಾಗತಿಸಿ ಅವರು ಮಾತನಾಡಿದರು. ಬಾಲ್ಯದಲ್ಲಿ ಮಕ್ಕಳಿಗೆ ಪುಸ್ತಕದ ಜ್ಞಾನ ನೀಡಿದರೆ ಅದಕ್ಕೆ ಮಾತ್ರ ಸೀಮಿತವಾಗುತ್ತಾರೆ. ಅದನ್ನು ಮೀರಿ ಹೊಸತನವನ್ನು ಕಲಿಸಲು ಮುಂದಾದರೆ ಸಮಾಜಕ್ಕೆ ಕೊಡುಗೆ ನೀಡುವಂತಹ ವ್ಯಕ್ತಿಗಳಾಗಿ ಹೊರ ಹೊಮ್ಮುತ್ತಾರೆ ಎಂದರು.

ಬಿಇಒ ಎಂ.ಎಫ್. ಬಾರ್ಕಿ ಮಾತನಾಡಿ, ಕೆಪಿಎಸ್ ಶಾಲೆಗೆ ಇಂದಿನ ದಿನಮಾನದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ಆಂಗ್ಲ ಮಾಧ್ಯಮ. ಆದ್ದರಿಂದ, ಪ್ರಸಕ್ತ ಸಾಲಿನಿಂದ ತಾಲೂಕಿನಲ್ಲಿ ಅತಿ ಹೆಚ್ಚು ಮಕ್ಕಳಿರುವ ಕಡಕೋಳ, ಸಿದ್ದಾಪುರ, ಹೆಸರೂರು, ತವರಮರಳಿಹಳ್ಳಿಯ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸುತ್ತಿದ್ದೇವೆ. ಪಾಲಕರ ಅಪೇಕ್ಷಕ್ಕೆ ತಕ್ಕಂತೆ ಕನ್ನಡ ಮಾಧ್ಯಮದ ಜತೆಗೆ ಆಂಗ್ಲ ಮಾಧ್ಯಮ ಪ್ರಾರಂಭಿಸಿ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಹೆಚ್ಚಿನ ಬೇಡಿಕೆಗಳು ಬಂದರೆ ಅವಕಾಶ ಇದ್ದಲ್ಲಿ ಹೆಚ್ಚಿನ ಶಾಲೆಗಳನ್ನು ತೆರೆಯಲು ಇಲಾಖೆ ಸಿದ್ಧವಾಗಿದೆ. ತಾಲೂಕಿನಲ್ಲಿ ಅತಿ ಹೆಚ್ಚು ಬೇಡಿಕೆ ಇರುವಂತಹ ಕೆಪಿಎಸ್ ಶಾಲೆಗೆ 200 ಅರ್ಜಿಗಳು ಬಂದಿದ್ದವು. ಅವುಗಳನ್ನು ಪರಿಶೀಲನೆ ಕೈಗೊಂಡು 60 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಶಾಲೆಯಲ್ಲಿ ಶಿಕ್ಷಕರ ಕೊರತೆ ಹೆಚ್ಚಿರುವುದರಿಂದ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ 11 ಅತಿಥಿ ಶಿಕ್ಷಕರನ್ನು ನೀಡಿ ಅವರಿಗೆ ಆಂಗ್ಲ ಮಾಧ್ಯಮದ ತರಬೇತಿ ನೀಡಲು ಡಯಟ್ ಸಹಾಯದಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುದಾನಿತ, ಅನುದಾನ ರಹಿತ ಶಾಲೆಗಳಿಗಿಂತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವ ಮೂಲಕ ತಾಲೂಕು ಜಿಲ್ಲೆಯಲ್ಲಿ 2ನೇ ಸ್ಥಾನ ಪಡೆಯುವಂತೆ ಮಾಡಿದ್ದಾರೆ ಎಂದು ಹೇಳಿದರು.

ಎಸ್‌ಡಿಎಂಸಿ ಸದಸ್ಯ ನಾಗರಾಜ ಬಂಕಾಪುರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಗುರು ಲಕ್ಷ್ಮಣ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಯಟ್ ಉಪನ್ಯಾಸಕಿ ಮಂಜುಳಾ ಚಂದ್ರಗಿರಿ, ಬಿಆರ್‌ಸಿ ಎಂ.ಎನ್. ಅಡಿವೆಪ್ಪನವರ, ಸರ್ಕಾರಿ ಮಜೀದ ಪಿಯು ಕಾಲೇಜ್ ಪ್ರಾಚಾರ್ಯ ಖಾಜಾಮೊದ್ದೀನ್ ಖಾದ್ರಿ, ಸಿಆರ್‌ಪಿ ನಾಗರಾಜ ಬಂಡಿವಡ್ಡರ, ಪುರಸಭೆ ಸದಸ್ಯ ಅಶೋಕ ಮನ್ನಂಗಿ, ಎಸ್‌ಡಿಎಂಸಿ ಸದಸ್ಯ ಸುರೇಶ ಹಾವನೂರ ಪಾಲ್ಗೊಂಡಿದ್ದರು. ಶಿಕ್ಷಕಿಯರಾದ ಚಂಪಾ ನೀರಲಗಿ, ಉಪಾ ಉಪ್ಪಿನ ಕಾರ್ಯಕ್ರಮ ನಿರ್ವಹಿಸಿದರು.