ಜಾತ್ರಾ ಮಹೋತ್ಸವ ಪ್ರಯುಕ್ತ ಬೆಳಗ್ಗೆಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆಗಳು, ಅಲಂಕಾರ ಕಾರ್ಯಗಳು ಹಾಗೂ ಧಾರ್ಮಿಕ ವಿಧಿವಿಧಾನಗಳು ನಡೆದವು. ಭಕ್ತರು ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಆಗಮಿಸಿ ದೇವಿಯರಿಗೆ ಪೂಜೆ ಸಲ್ಲಿಸಿ ಹರಕೆಗಳನ್ನು ತೀರಿಸಿದರು. ಜಾತ್ರೆಯ ಅಂಗವಾಗಿ ಮೇ 11ರಂದು ರುದ್ರಾಭಿಷೇಕ, ಅಂಕುರಾರ್ಪಣೆ ಹಾಗೂ ಶ್ರೀ ಗುರು ಕೆಂಗಲ್ ಸಿದ್ದೇಶ್ವರ ಸ್ವಾಮಿಗೆ 101 ಎಡೆ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು. ಅದರ ಮುಂದುವರಿದ ಭಾಗವಾಗಿ ಮಂಗಳವಾರ ಶ್ರೀ ದೇವಿಯರಿಗೆ ಮದುವಣಗೆ ಶಾಸ್ತ್ರ ನೆರವೇರಿಸಿ, ನಂತರ ಬಾನನೈವೇದ್ಯ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಗ್ರಾಮ ದೇವತೆಗಳಾದ ಶ್ರೀ ಕರಿಯಮ್ಮ ದೇವಿ ಹಾಗೂ ಶ್ರೀ ಮಲ್ಲಿಗಮ್ಮ ದೇವಿಯರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ ನಡೆದ ಬಾನನೈವೇದ್ಯ ಕಾರ್ಯಕ್ರಮ ಭಕ್ತಿಭಾವ, ಸಾಂಪ್ರದಾಯಿಕ ವೈಭವ ಮತ್ತು ಅದ್ದೂರಿ ಮೆರವಣಿಗೆಯೊಂದಿಗೆ ಗಮನ ಸೆಳೆಯಿತು.ಜಾತ್ರಾ ಮಹೋತ್ಸವ ಪ್ರಯುಕ್ತ ಬೆಳಗ್ಗೆಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆಗಳು, ಅಲಂಕಾರ ಕಾರ್ಯಗಳು ಹಾಗೂ ಧಾರ್ಮಿಕ ವಿಧಿವಿಧಾನಗಳು ನಡೆದವು. ಭಕ್ತರು ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಆಗಮಿಸಿ ದೇವಿಯರಿಗೆ ಪೂಜೆ ಸಲ್ಲಿಸಿ ಹರಕೆಗಳನ್ನು ತೀರಿಸಿದರು. ಜಾತ್ರೆಯ ಅಂಗವಾಗಿ ಮೇ 11ರಂದು ರುದ್ರಾಭಿಷೇಕ, ಅಂಕುರಾರ್ಪಣೆ ಹಾಗೂ ಶ್ರೀ ಗುರು ಕೆಂಗಲ್ ಸಿದ್ದೇಶ್ವರ ಸ್ವಾಮಿಗೆ 101 ಎಡೆ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು. ಅದರ ಮುಂದುವರಿದ ಭಾಗವಾಗಿ ಮಂಗಳವಾರ ಶ್ರೀ ದೇವಿಯರಿಗೆ ಮದುವಣಗೆ ಶಾಸ್ತ್ರ ನೆರವೇರಿಸಿ, ನಂತರ ಬಾನನೈವೇದ್ಯ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ಶ್ರೀ ಮಲ್ಲಿಗಮ್ಮ ದೇವಿ, ಶ್ರೀ ಚೆಲುವರಾಯಸ್ವಾಮಿ ಹಾಗೂ ಶ್ರೀ ದೂತರಾಯಸ್ವಾಮಿ ಉತ್ಸವ ಮೂರ್ತಿಗಳನ್ನು ಮಂಗಳವಾದ್ಯಗಳ ಘೋಷ, ಡೊಳ್ಳು-ತಮಟೆ ಹಾಗೂ ಭಕ್ತರ ಜಯಘೋಷಗಳ ನಡುವೆ ಅದ್ದೂರಿ ಮೆರವಣಿಗೆಯ ಮೂಲಕ ಮೂಲ ಸನ್ನಿಧಿಗೆ ಕರೆತರಲಾಯಿತು. ಈ ವೇಳೆ ನಗರದೆಲ್ಲೆಡೆ ಜಾತ್ರಾ ಸಂಭ್ರಮ ಮನೆಮಾಡಿದ್ದು, ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ದೇವಿಯರ ದರ್ಶನ ಪಡೆದರು.ಬುಧವಾರ ನಗರದ ಭವಾನಿ ಶಂಕರ ದೇವಾಲಯದಲ್ಲಿ ಗಂಗಾಸ್ನಾನ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು, ಬಳಿಕ ಶ್ರೀ ದೇವಿಯರ ಭವ್ಯ ಮೆರವಣಿಗೆ ಮೂಲಕ ಮೂಲ ಸನ್ನಿಧಿಗೆ ಪ್ರವೇಶಿಸಿದವು. ಜೊತೆಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು.ಇಂದು ಗುರುವಾರ ಬೆಳಿಗ್ಗೆ ಶ್ರೀ ಕರಿಯಮ್ಮ ದೇವಿಯ ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ಶಾಸ್ತ್ರೋಕ್ತವಾಗಿ ನೆರವೇರಲಿದ್ದು, ಮಧ್ಯಾಹ್ನ ದೇವಸ್ಥಾನದ ಆವರಣದಲ್ಲಿ ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ಮಹಾರಥೋತ್ಸವ ನಡೆಯಲಿದೆ. ಈ ಮಹೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.