ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯ ಕಾಂಗ್ರೆಸ್ನಲ್ಲಿ ಆಂತರಿಕ ಕಚ್ಚಾಟ ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ತನ್ನ ಆಂತರಿಕ ಕಚ್ಚಾಟದಿಂದಲೇ ಸರ್ಕಾರ ಬೀಳಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗರ್ವಾಲ್ ಹೇಳಿದ್ದಾರೆ.ಮಂಗಳೂರಲ್ಲಿ ಬುಧವಾರ ಅವರು ಸುದ್ದಿಗಾರರಲ್ಲಿ ಮಾತನಾಡುತ್ತಾ, ಬಿಜೆಪಿ ರಾಜಕಾರಣದಲ್ಲಿ ವ್ಯವಹಾರ ನೋಡುವುದಿಲ್ಲ, ಅದರ ಲಾಭ, ನಷ್ಟವನ್ನೂ ಗಮನಿಸುವುದಿಲ್ಲ. ಯಾರದೋ ವೈಫಲ್ಯವನ್ನು ಎನ್ಕ್ಯಾಶ್ ಮಾಡುವ ಚಿಂತನೆ ನಮ್ಮದಲ್ಲ ಎನ್ನುವ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಉದ್ದೇಶ ಇಲ್ಲ ಎಂದು ಹೇಳಿದರು. ರಾಜ್ಯ ಸರ್ಕಾರ ಕಳೆದ ಎರಡು ವರ್ಷದಲ್ಲಿ ಅರಾಜಕತೆ ಸೃಷ್ಟಿಸಿದೆ. ಮುಸ್ಲಿಂ ತುಷ್ಟಿಕರಣ, ಭ್ರಷ್ಟಾಚಾರದಲ್ಲಿ ಮುಳುಗಿ ಎಲ್ಲೆ ಮೀರಿದೆ. ಈ ವಿಚಾರವನ್ನು ಮುಂದಿಟ್ಟು ರಾಜ್ಯ ಬಿಜೆಪಿ ಮುಖಂಡರು, ನಾಯಕರು ಜನರ ಮುಂದೆ ಹೋಗಿದ್ದಾರೆ. ರಾಜ್ಯದ ಪ್ರಸ್ತುತ ಸ್ಥಿತಿಯನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ ಎಂದರು.ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನ ಗಮನಿಸುತ್ತಿದ್ದಾರೆ. ದೇವರ ದಯೆಯಿಂದ ಈ ರಾಜ್ಯ ಸರ್ಕಾರ ಹೀಗೆಯೇ ನಡೆಯಲಿ, ಅರಾಜಕತೆ ಮುಂದುವರೆಸಲಿ ಎಂದು ಅವರು ಕುಹಕವಾಡಿದರು.
ಪ್ರಸಕ್ತ ರಾಜ್ಯದಲ್ಲಿ ಒಂದರ್ಥದಲ್ಲಿ ತುರ್ತುಪರಿಸ್ಥಿತಿ ಇದೆ. ಕಾಂಗ್ರೆಸ್ನ ಡಿಎನ್ಎಯಲ್ಲಿ ಪ್ರಜಾಪ್ರಭುತ್ವವಿಲ್ಲ, ಕೇವಲ ಸರ್ವಾಧಿಕಾರ ಮಾತ್ರ ಇದೆ. ಮುಂಬರುವ ಚುನಾವಣೆಗಳಲ್ಲಿ ಜನತೆ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ. ರಾಜ್ಯ ಸರ್ಕಾರದಲ್ಲಿನ ಭ್ರಷ್ಟಾಚಾರ, ಅರಾಜಕತೆ, ಲಂಚಾವತಾರ ಕೇವಲ ಒಂದೆರಡು ಶಾಸಕರು ಮಾತ್ರ ಅಲ್ಲ ಎಲ್ಲ ಶಾಸಕರು ಹೇಳುತ್ತಿದ್ದಾರೆ. ಸರ್ಕಾರದ ವಸ್ತುಸ್ಥಿತಿಯನ್ನು ಅವರೇ ಬಟಾಬಯಲು ಗೊಳಿಸುತ್ತಿದ್ದಾರೆ ಎಂದರು.ರಾಜ್ಯದ ಜನರಿಗೆ ಕಳೆದ ಚುನಾವಣೆಯಲ್ಲಿ ಮಾಡಿದ ತಪ್ಪಿನ ಅರಿವಾಗಿದೆ. ಭ್ರಷ್ಟಾಚಾರದಲ್ಲಿ ಖರ್ಗೆ, ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ನಡುವೆ ಆಂತರಿಕ ಸ್ಪರ್ಧೆ ನಡೆಯುತ್ತಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಡುವೆ ಏನು ಸರಿಯಿಲ್ಲ ಎಂಬುದು ಹಲವಾರು ಸಂದರ್ಭದಲ್ಲಿ ಸಾಬೀತಾಗಿದೆ. ನಮಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ , ಈ ಸರ್ಕಾರವನ್ನು ಬೀಳಿಸುವುದರಲ್ಲಿ ನಮಗೆ ನಂಬಿಕೆ ಇಲ್ಲ ಎಂದರು.
ಬಿಜೆಪಿಗೆ ಘರ್ವಾಪ್ಸಿ ಇಲ್ಲ:ಬಿಜೆಪಿ ರಾಜ್ಯಧ್ಯಕ್ಷರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಅವರು, ಈ ವಿಚಾರದಲ್ಲಿ ಏನೇ ಹೇಳಿಕೆ ನೀಡುವ ಅಧಿಕಾರ ನನಗಿಲ್ಲ. ಅಧ್ಯಕ್ಷರ ವಿಚಾರದಲ್ಲಿ ಕೇಂದ್ರದ ಪಾರ್ಲಿಮೆಂಟರಿ ಬೋರ್ಡ್ ನಿರ್ಧಾರ ಕೈಗೊಳ್ಳಲಿದೆ. ಈಶ್ವರಪ್ಪ ಮತ್ತು ಯತ್ನಾಳ್ ಬಿಜೆಪಿಗೆ ಘರ್ವಾಪ್ಸಿ ವಿಚಾರ ಕುರಿತ ಪ್ರಶ್ನೆಗೆ, ಈಶ್ವರಪ್ಪ ಮತ್ತು ಯತ್ನಾಳ್ ಯಾವ ಪಕ್ಷದವರು ಗೊತ್ತಿಲ್ಲ.ನಮ್ಮ ಪಕ್ಷದ ಸದಸ್ಯರಂತೂ ಅಲ್ಲ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರವೇ ಇಲ್ಲ. ಪಕ್ಷದ ಗೌರವಕ್ಕೆ ಧಕ್ಕೆ ಉಂಟು ಮಾಡಿದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಬಿಜೆಪಿ ಲಕ್ಷಾಂತರ ಕಾರ್ಯಕರ್ತರನ್ನು ಹೊಂದಿರುವ ಅತಿ ದೊಡ್ಡ ಪಕ್ಷವಾಗಿದೆ ಎಂದು ಈ ಕುರಿತ ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.