ಸರ್ಕಾರ ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡುತ್ತಿದೆ

| Published : Jan 04 2025, 12:30 AM IST

ಸಾರಾಂಶ

ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ. ಗೋವುಗಳು ಬಾರದ ಹಿನ್ನೆಲೆ ಹೊಸ ಗೋ ಶಾಲೆ ಆರಂಭಿಸುವುದಿಲ್ಲ ಎಂದು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಈ ನಿರ್ಧಾರ ಹಿಂಪಡೆಯಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಫ ಆಗ್ರಹಿಸಿದರು.

ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ. ಗೋವುಗಳು ಬಾರದ ಹಿನ್ನೆಲೆ ಹೊಸ ಗೋ ಶಾಲೆ ಆರಂಭಿಸುವುದಿಲ್ಲ ಎಂದು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಈ ನಿರ್ಧಾರ ಹಿಂಪಡೆಯಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಫ ಆಗ್ರಹಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಇನ್ನು ಯಾವುದೇ ಗೋಶಾಲೆ ಮಾಡಲ್ಲ ಎನ್ನುವ ನಿರ್ಧಾರ ಕೈಗೊಂಡಿದ್ದಾರೆ. ಹಿಂದೂ ಸಮಾಜ ಏನು ಮಾಡಿದರೂ ತಡೆದುಕೊಳ್ಳುತ್ತದೆ ನಡೆಯುತ್ತದೆ ಎಂದುಕೊಂಡಿದ್ದಾರೆ. ಇಡೀ ಹಿಂದೂ ಸಮಾಜ ರಾಜ್ಯದಲ್ಲಿ ಜಾಗೃತವಾಗಿ ಏನಾಗುತ್ತದೋ ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಗಮನಿಸಬೇಕು. ಮುಂದೆ ಏನೇ ಆದರೂ ರಾಜ್ಯ ಸರ್ಕಾರವೇ ಹೊಣೆ ಎಂದರು.ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಪ್ರತಿ ಜಿಲ್ಲೆಗೊಂದರಂತೆ ಗೋಶಾಲೆ ಆರಂಭ ಮಾಡಬೇಕೆಂದು ತೀರ್ಮಾನವಾಗಿತ್ತು. ರಾಜ್ಯದಲ್ಲಿ 14 ಗೋಶಾಲೆ ಇತ್ತು, ಉಳಿದ 24 ಗೋಶಾಲೆ ಆರಂಭ ಮಾಡುತ್ತಾರೆ ಅಂದುಕೊಂಡಿದ್ದೆ. ಆದರೆ, ಗೋಶಾಲೆಗೆ ಯಾವುದೇ ಗೋವು ಬರುತ್ತಿಲ್ಲ ಅದಕ್ಕೆ ಗೋಶಾಲೆ ಆರಂಭ ಮಾಡಲ್ಲ ಎಂದಿದ್ದಾರೆ. ಶಿವಮೊಗ್ಗದಲ್ಲೇ 3-4 ಗೋಶಾಲೆ ನಡೆಯುತ್ತಿವೆ. ಇನ್ನು ಯಾವ ಗೋಶಾಲೆ ತೆರೆಯಲು ಅವಕಾಶ ಕೊಡಲ್ಲ ಎನ್ನುತ್ತಿದ್ದಾರೆ. ಅನೇಕ ಉರ್ದು ಶಾಲೆ ಮದರಸಾಗಳಲ್ಲಿ ಮಕ್ಕಳಿಲ್ಲ ಅವುಗಳನ್ನು ಮುಚ್ಚಿಸಿದರಾ ಎಂದು ಪ್ರಶ್ನಿಸಿದರು.ಕಿಡಿಗೇಡಿಗಳು ಮೃತ್ಯುಂಜಯ ನದಿಗೆ ಗೋಮಾಂಸ ಹಾಕಿದ್ದಾರೆ. ಗೋಮಾಂಸ ತ್ಯಾಜ್ಯ ನೇತ್ರಾವತಿ ನದಿಗೆ ಸೇರುತ್ತದೆ. ಹಿಂದೂಗಳು ಸ್ನಾನ ಮಾಡುವ ನದಿಯನ್ನು ಅಪವಿತ್ರ ಮಾಡಲು ಹೊರಟ್ಟಿದ್ದಾರೆ. ಗೋಹತ್ಯೆ ನಿಷೇಧ ಕಾನೂನು ಬಿಜೆಪಿ ಸರ್ಕಾರ ಜಾರಿಗೆ ತಂದಿತ್ತು. ಹಿಂದೂಗಳಿಗೆ ಏನೇನು ತೊಂದರೆ ಕೊಡಬೇಕೋ ಎಲ್ಲಾ ಕೊಡುತ್ತಿದ್ದಾರೆ. ಆದರೂ ಈ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಹಿಂದುಗಳ ಮನಸನ್ನು ನೋಯಿಸುತ್ತಿದೆ. ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ ತೆರೆಯಬೇಕು. ನೇತ್ರಾವತಿ ನದಿ ಅಪವಿತ್ರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಮುಂದೆ ಆಗುವ ಅನಾಹುತಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಬಸ್ ದರ ಏರಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಲಾಗಿದೆ. ಇದು ಸಾಲ ಮಾಡಿ ಹಬ್ಬದೂಟ ಮಾಡಿದಂತಾಗಿದೆ. ಸಾಲ ಮಾಡಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದರಿಂದ ಎಲ್ಲದರ ದರ ಹೆಚ್ಚಳ ಮಾಡುತ್ತಿದ್ದಾರೆ. ಇನ್ನು ಹಲವು ಬೆಲೆ ಏರಿಕೆಗಳು ಬಾಕಿ ಇದೆ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು ಡೆತ್ ನೋಟಿನಲ್ಲಿ ನನ್ನ ಹೆಸರು ಇಲ್ಲ ಎನ್ನುತ್ತಾರೆ. ಬಿಜೆಪಿಯವರು ಪ್ರಿಯಾಂಕ್ ಖರ್ಗೆ ಹೆಸರಿದೆ ರಾಜೀನಾಮೆ ತಗೊಳ್ಳಿ ಎನ್ನುತ್ತಿದ್ದಾರೆ. ನನ್ನ ಮೇಲೆ ಆರೋಪ ಬಂದಾಗ ನಾನು ಆ ದಿನವೇ ರಾಜೀನಾಮೆ ಕೊಟ್ಟೆ. ಭಗವಂತನ ದಯೆಯಿಂದ ನನ್ನ ವಿರುದ್ಧ ತನಿಖೆ ನಡೆದು ನಿರ್ದೋಷಿ ಎಂದಾಗಿತ್ತು. ನನಗೆ ಯಾರು ಯಾರು ತೊಂದರೆ ಕೊಟ್ಟರು ಅವರೆಲ್ಲಾ ಈಗ ಅನುಭವಿಸುತ್ತಿದ್ದಾರೆ. ಭಗವಂತ ಇದ್ದಾನೆ, ಹೀಗಾಗಿಯೇ ಅವರೆಲ್ಲಾ ಅನುಭವಿಸುತ್ತಿದ್ದಾರೆ. ಮುಂದೆಯೂ ಅನುಭವಿಸುತ್ತಾರೆ. ಭಗವಂತ ಇದ್ದಾನೆ ಎನ್ನುವುದನ್ನು ನೆನಪಿಟ್ಟುಕೊಂಡು ಸಂಬಂಧಪಟ್ಟವರು ಯೋಚನೆ ಮಾಡಲಿ. ತಪ್ಪಿತಸ್ಥರ ವಿರುದ್ಧ ಭಗವಂತ ನೋಡಿಕೊಳ್ಳುತ್ತೇನೆ. ಈಗಾಗಲೇ ಹಲವರು ಅನುಭವಿಸುತ್ತಿದ್ದಾರೆ ಮುಂದೆಯೂ ಅನುಭವಿಸುತ್ತಾರೆ ಎಂದು ಕಿಡಿಕಾರಿದರು.ಸುದ್ದಿಗೋಷ್ಠಿಯಲ್ಲಿ ರಾಷ್ಟ್ರಭಕ್ತರ ಬಳಗದ ಎಂ.ಶಂಕರ್, ಮಹಾಲಿಂಗಯ್ಯ ಶಾಸ್ತ್ರಿ ಸೇರಿದಂತೆ ಹಲವರು ಇದ್ದರು.