ಶಿಕ್ಷಣ ಬಲಹೀನಗೊಳಿಸುತ್ತಿರುವ ಸರ್ಕಾರ-ರಾಠೋಡ

| Published : May 27 2025, 12:21 AM IST

ಸಾರಾಂಶ

ಪಟ್ಟಣದ ಡಿ. ದೇವರಾಜ ಅರಸು ಬಾಲಕರ ಮೆಟ್ರಿಕ್‌ ನಂತರದ ವಸತಿ ನಿಲಯದಲ್ಲಿ ಎಸ್‌ಎಫ್‌ಐ ತಾಲೂಕು ಸಮಿತಿ ನೇತೃತ್ವದಲ್ಲಿ ರಾಜ್ಯಮಟ್ಟದ ಅಧ್ಯಯನ ಶಿಬಿರದ ಕರಪತ್ರ ಬಿಡುಗಡೆ ಮಾಡಲಾಯಿತು.

ಗಜೇಂದ್ರಗಡ: ಪಟ್ಟಣದ ಡಿ. ದೇವರಾಜ ಅರಸು ಬಾಲಕರ ಮೆಟ್ರಿಕ್‌ ನಂತರದ ವಸತಿ ನಿಲಯದಲ್ಲಿ ಎಸ್‌ಎಫ್‌ಐ ತಾಲೂಕು ಸಮಿತಿ ನೇತೃತ್ವದಲ್ಲಿ ರಾಜ್ಯಮಟ್ಟದ ಅಧ್ಯಯನ ಶಿಬಿರದ ಕರಪತ್ರ ಬಿಡುಗಡೆ ಮಾಡಲಾಯಿತು.

ಈ ವೇಳೆ ಎಸ್ಎಫ್ಐ ಜಿಲ್ಲಾ ಅಧ್ಯಕ್ಷ ಚಂದ್ರು ರಾಠೋಡ ಮಾತನಾಡಿ, ವಿದ್ಯಾರ್ಥಿಗಳನ್ನು ಅಭ್ಯಾಸ ಮತ್ತು ಹೋರಾಟ ಎಂಬ ಘೋಷವಾಕ್ಯ ಅಡಿಯಲ್ಲಿ, ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ದುಡಿಯುವಂತೆ ಮಾಡಲು ಆಣಿಗೊಳಿಸುತ್ತಿದೆ. ಬಡ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಕಿಸಿಕೊಡಲು, ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ಮತ್ತು ಅದರ ಬಲವರ್ಧನೆಗಾಗಿ ಸಂಘಟನೆ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯುತ್ತಾ ಬಂದಿದೆ. ಇತ್ತ ಶಿಕ್ಷಣದ ಕೇಸರೀಕರಣ, ಕೋಮುವಾದೀಕರಣ ಮತ್ತು ಖಾಸಗೀಕರಣದ ವಿರುದ್ಧ ಬಲಿಷ್ಠ ಚಳವಳಿಯನ್ನು ಎಸ್‌ಎಫ್‌ಐ ಮುನ್ನಡೆಸುತ್ತಿದೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಜೆಟ್‌ನಲ್ಲಿ ಶಿಕ್ಷಣಕ್ಕೆ ವರ್ಷದಿಂದ ವರ್ಷಕ್ಕೆ ಅನುದಾನವನ್ನು ಕಡಿತ ಮಾಡುತ್ತಾ, ಶಿಕ್ಷಣವನ್ನು ಬಲಹೀನಗೊಳಿಸುತ್ತಿದೆ. ಪರಿಣಾಮ ಸರ್ಕಾರಿ ಶಾಲೆಗಳನ್ನು ಮುಚ್ಚುವ, ಇಲ್ಲವೆ ಇತರ ಶಾಲೆಗಳೊಂದಿಗೆ ವಿಲೀನಗೊಳಿಸಿ, ವಿದ್ಯಾರ್ಥಿಗಳು ಬಲವಂತವಾಗಿ ಖಾಸಗಿ ಶಾಲೆಗಳತ್ತ ಮುಖಮಾಡುವ ಅನಿವಾರ್ಯ ಸ್ಥಿತಿಯನ್ನು ಸರ್ಕಾರ ಸೃಷ್ಟಿ ಮಾಡುತ್ತಿವೆ ಎಂದು ದೂರಿದರು.

ಶಿಕ್ಷಣದ ಹಕ್ಕುಗಳ ಪರವಾಗಿ ಮಾತನಾಡುವ ಉಪನ್ಯಾಸಕರನ್ನು ಹಾಗೂ ಪ್ರಶ್ನೆ ಮಾಡುವ ವಿದ್ಯಾರ್ಥಿಗಳ ಮೇಲೆ ಹಿಂಸಾತ್ಮಕ ದಾಳಿಗಳನ್ನು ನಡೆಸಲಾಗುತ್ತಿದೆ. ಶೈಕ್ಷಣಿಕ ಕ್ಷೇತ್ರದ ಮೇಲೆ ನಡೆಯುತ್ತಿರುವ ಈ ಎಲ್ಲ ದಾಳಿಗಳನ್ನು ಹಿಮ್ಮೆಟ್ಟಿಸಲು ಹಾಗೂ ಶಿಕ್ಷಣ ಸಾರ್ವತ್ರೀಕರಣಗೊಳಿಸಲು, ವಿದ್ಯಾರ್ಥಿಗಳಲ್ಲಿ ಶಾಂತಿ, ಸೌಹಾರ್ದತೆ, ಐಕ್ಯತೆ ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ, ಸಾರ್ವಜನಿಕ ಶಿಕ್ಷಣ ಬಲಪಡಿಸಲು ಆಗ್ರಹಿಸಿ, ವಿದ್ಯಾರ್ಥಿ ಚಳವಳಿಯನ್ನು ಬಲಿಷ್ಠಗೊಳಿಸಲು ರಾಮನಗರ ಜಿಲ್ಲೆಯ ಜಾನಪದ ಲೋಕದ ದೊಡ್ಡಮನಿ, ಮಂಟಪ ಸಭಾಂಗಣದಲ್ಲಿ ಮೇ ೨೯ರಿಂದ ಜೂ. ೧ರ ವರೆಗೆ ನಾಲ್ಕು ದಿನಗಳ ಕಾಲ ರಾಜ್ಯಮಟ್ಟದ ಸೈದ್ಧಾಂತಿಕ ಅಧ್ಯಯನ ಶಿಬಿರ ನಡೆಸಲಾಗುತ್ತದೆ ಎಂದರು.

ಶಿಬಿರವನ್ನು ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಲಿದ್ದು, ಶಿಬಿರದ ಸಮಾರೋಪಕ್ಕೆ ಹಿರಿಯ ನಟ ಡಾ. ಅಶೋಕ ಆಗಮಿಸಲಿದ್ದಾರೆ. ವಿವಿಧ ಜಿಲ್ಲೆಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿ ಮುಖಂಡರು, ಶಿಬಿರಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.

ಅನಿಲ ರಾಠೋಡ, ಮಾಸಪ್ಪ ಮ್ಯಾಗಲಮನಿ, ಕೃಷ್ಣ ತಳವಾರ, ರಮೇಶ ಭಜಂತ್ರಿ, ಯಮನೂರಪ್ಪ ಕಂಬಳಿ, ಮಂಜುನಾಥ ತೇಗ್ಗಿ, ಭೀಮೇಶ ಕರೆಕಲ್ಲ ಇದ್ದರು.