ಕನ್ನಡಪ್ರಭ ವಾರ್ತೆ ಹುನಗುಂದ

ಪತ್ರಿಕೆಗಳು ದೇಶದ ಅವಿಭಾಜ್ಯ ಅಂಗವಾಗಿದ್ದು, ಅದಕ್ಕಾಗಿ ಪತ್ರಿಕಾ ದಿನಾಚರಣೆಯನ್ನು ಸರ್ಕಾರವೇ ಆಚರಿಸಿದರೆ ಒಳ್ಳೆಯ ಮೆರಗು ಬರುತ್ತದೆ ಎಂದು ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪತ್ರಿಕೆಗಳು ಇರದಿದ್ದರೆ ಈ ಜಗತ್ತೆಲ್ಲ ಕುರುಡಾಗುತ್ತಿತ್ತು. ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆಯುವ ಸುದ್ದಿ ಸಮಾಚಾರಗಳನ್ನು ಮನೆ ಬಾಗಿಲಿಗೆ ಪತ್ರಿಕೆಗಳು ತಲುಪುಸುತ್ತಿವೆ. ಸಮಾಜದಲ್ಲಿ ಪತ್ರಕರ್ತರು ಜವಾಬ್ದಾರಿಯಿಂದ ಸುದ್ದಿಗಳನ್ನು ಬರೆಯಬೇಕು. ನೀವು ಬರೆಯುವ ಒಂದು ಶಬ್ದದಿಂದ ಶಾಂತಿ ಮತ್ತು ಅಶಾಂತಿಯನ್ನು ಮೂಡಿಸುತ್ತದೆ. ಇದೀಗ ವಸ್ತು ನಿಷ್ಠೆ ವರದಿಗಳು ಕಡಿಮೆಯಾಗಿದೆ. ಸರ್ಕಾರದ ಸೌಲಭ್ಯಗಳು ಹಾಗೂ ವೈಫಲ್ಯಗಳ ವರದಿ ಕುರಿತು ಪತ್ರಕರ್ತರು ಸುದ್ದಿ ಭಿತ್ತರಿಸಬೇಕು. ದೇಶದ ಪ್ರಗತಿಗೆ ವಸ್ತು ನಿಷ್ಠ ವರದಿ ಅವಶ್ಯಕವಾಗಿದೆ ಎಂದರು.

ಮಾಜಿ ಶಾಸಕ ದೊಡನಗೌಡ ಪಾಟೀಲ ಮಾತನಾಡಿ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ತಪ್ಪುಗಳು ಮಾಡಿದಾಗ 4ನೇ ಅಂಗವಾದ ಪತ್ರಿಕಾರಂಗ ಜನರಿಗೆ ಎತ್ತಿತೋರಿಸುವ ಕೆಲಸ ಪತ್ರಿಕೆಗಳು ಮಾಡುತ್ತೇವೆ. ಸಮಾಜದಲ್ಲಿ ಪತ್ರಕರ್ತರು ಜವಾಬ್ದಾರಿ ಕೆಲಸದಲ್ಲಿ ಗುರುತಿಸಿಕೊಂಡು ಉತ್ತಮ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದಾರೆ. ಸಮಾಜದಲ್ಲಿ ಜನರಿಗೆ ಅನ್ಯಾಯ ತೊಂದರೆಯಾದಾಗ ಪತ್ರಕರ್ತರು ನಿರ್ಭಿಡೆಯಿಂದ ಬರೆಯಬೇಕು. ಸಾಮಾಜಿಕ ಜಾಲತಾಣದಲ್ಲಿ ಕೆಲವು ಮಾಧ್ಯಮಗಳು ದಾರಿ ತಪ್ಪಿಸುವ ಕೆಲವನ್ನು ಮಾಡುತ್ತಿವೆ. ಎಚ್ಚರಿಕೆಯಿಂದ ಸುದ್ದಿಗಳನ್ನು ಬರೆಯಬೇಕು. ಸಮಾಜಕ್ಕೆ ತಪ್ಪು ಮಾಹಿತಿಯನ್ನು ಪತ್ರಕರ್ತರು ನೀಡಬಾರದು. ನಿಷ್ಪಕ್ಷಪಾತವಾದ ವರದಿಗಳನ್ನು ಪತ್ರಕರ್ತರು ಬರೆಯಬೇಕು. ಮಾಧ್ಯಮಗಳ ಕಲುಷಿತ ವಾತಾವರಣ ನಿರ್ಮಾಣ ಮಾಡಬಾರದು. ಒಳ್ಳೆಯ ಸಂದೇಶ ಸಮಾಜದಲ್ಲಿ ನಿರ್ಮಾಣ ಆಗಬೇಕಾಗಿದೆ ಎಂದರು.


ತಹಸೀಲ್ದಾರ ಪ್ರದೀಪಕುಮಾರ ಹಿರೇಮಠ ಮಾತನಾಡಿ, ಸಂವಿಧಾನದ 4ನೇ ಅಂಗ ಪತ್ರಿಕಾರಂಗವಾಗಿದ್ದು, ಸಮಾಜದ ಕನ್ನಡಿ ಇದ್ದಂತೆ ಪತ್ರಿಕೆಗಳು ಸಮಾಜದಲ್ಲಿ ನಡೆಯುವ ಅಂಕುಡೊಂಕುಗಳನ್ನು ಜನರಿಗೆ ಎತ್ತಿ ತೋರಿಸಿಕೊಡುವ ಕಾರ್ಯ ಮಾಡುತ್ತದೆ ಎಂದರು.

ಕಾನಿಪ ಜಿಲ್ಲಾಧ್ಯಕ್ಷ ಮಹೇಶ ಅಂಗಡಿ ಮಾತನಾಡಿ, ಇಂದಿನ ಪತ್ರಕರ್ತರು ಗ್ರಾಮೀಣ ಭಾಗದ ಸಮಸ್ಯೆಗಳ ಕುರಿತು ವರದಿಗಳನ್ನು ಬರೆಯಬೇಕು. ಮುಂದಿನ ದಿನಗಳಲ್ಲಿ ಪತ್ರಕರ್ತರ ಕಾರ್ಯಾಗಾರ ಆಗಬೇಕು. ಸಂಘದ ಯಾವುದೇ ಸಮಸ್ಯೆಗಳ ಕುರಿತು ಜಿಲ್ಲಾ ಘಟಕ್ಕೆ ತಿಳಿಸಬೇಕು ಎಂದರು.

ಕಾನಿಪ ಆಧ್ಯಕ್ಷ ಅಮರೇಶ ನಾಗೂರ ಮಾತನಾಡಿ, ಹುನಗುಂದ ಪುರಸಭೆಯ ಆವರಣದಲ್ಲಿ ₹ 10 ಲಕ್ಷದ ಪತ್ರಿಕಾ ಭವನದ ಕಾಮಗಾರಿ ಆರಂಭವಾಗಿದೆ. ವಸ್ತು ನಿಷ್ಠೆ ವರದಿ ಆದ್ಯತೆಯಿದ್ದು, ನಮ್ಮ ಪತ್ರಕರ್ತರು ಎಂದಿಗೂ ಪಕ್ಷಪಾತ ಮಾಡುವುದಿಲ್ಲ ಎಂದರು.

ಕಾಲೇಜು ಪ್ರಾಚಾರ್ಯ ಸಿಕಂದರ ಧನ್ನೂರ ಮಾತನಾಡಿದರು. ಗಚ್ಚಿನಮಠದ ಅಮರೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಗಾಣಿಗೇರ, ಕಾನಿಪ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ದರಗಾದ, ಸದಸ್ಯ ಸಂಗಮೇಶ ಹೂಗಾರ, ಕಾರ್ಯದರ್ಶಿ ಮಲ್ಲಿಕಾರ್ಜುನ ಹೊಸಮನಿ ವೇದಿಕೆಯಲ್ಲಿದ್ದರು.

ಇದೇ ಸಂದರ್ಭದಲ್ಲಿ ನಿತ್ಯ ಮನೆ ಮನೆಗೆ ವಿತರಣೆಯ ಮಾಡುವ ಮಕ್ಕಳಿಗೆ ಬಸಯ್ಯ ತೆಗ್ಗಿನಮಠ ಅವರ ಸ್ಮರಣಾರ್ಥವಾಗಿ ಮಹಾಂತೇಶ ತೆಗ್ಗಿನಮಠ ಜಾಕೆಟ್ ಕೊಡುಗೆಯನ್ನು ನೀಡಿದರು.

ಹಿರಿಯ ಪತ್ರಕರ್ತರಾದ ಮಲ್ಲಿಕಾರ್ಜುನ ಹೊಸಮನಿ, ವಿತರಕ ಮಲ್ಲಿಕಾರ್ಜುನ ಬಂಡರಗಲ್ಲ ಅವರನ್ನು ಸನ್ಮಾನಿಸಲಾಯಿತು.