ವಾಣಿಜ್ಯ ಬಂದರು ನಿರ್ಮಾಣ ಕೈಬಿಡಲು ಸರ್ಕಾರ ಮನಸ್ಸು ಮಾಡಲಿ: ಆನಂದ ಅಸ್ನೋಟಿಕರ್

| Published : Nov 24 2025, 03:00 AM IST

ವಾಣಿಜ್ಯ ಬಂದರು ನಿರ್ಮಾಣ ಕೈಬಿಡಲು ಸರ್ಕಾರ ಮನಸ್ಸು ಮಾಡಲಿ: ಆನಂದ ಅಸ್ನೋಟಿಕರ್
Share this Article
  • FB
  • TW
  • Linkdin
  • Email

ಸಾರಾಂಶ

ಜನರನ್ನು ಒಕ್ಕಲಿಬ್ಬಿಸಿ ಅವರ ಬದುಕನ್ನು ಸರ್ವನಾಶ ಮಾಡುವ ಯೋಜನೆಗಳು ಎಂದಿಗೂ ಬೇಡ.

ಕೇಣಿ ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಅಂಕೋಲಾ ಉಳಿಸಿ ಸಮಿತಿಯಿಂದ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಮಾಜಿ ಸಚಿವ

ಕನ್ನಡಪ್ರಭ ವಾರ್ತೆ ಅಂಕೋಲಾ

ವಿವಿಧ ಯೋಜನೆಗಳ ನಂತರ ಜಿಲ್ಲೆಯಲ್ಲಿ ಉಳಿದಿರುವ ಸೀಮಿತ ಕಡಲ ತೀರವನ್ನು ಉಳಿಸಲು ಸರ್ಕಾರ ಮನಸ್ಸು ಮಾಡಲಿ. ಜನರನ್ನು ಒಕ್ಕಲಿಬ್ಬಿಸಿ ಅವರ ಬದುಕನ್ನು ಸರ್ವನಾಶ ಮಾಡುವ ಯೋಜನೆಗಳು ಎಂದಿಗೂ ಬೇಡ. ಕೇಣಿ ವಾಣಿಜ್ಯ ಬಂದರು ನಿರ್ಮಾಣ ಪ್ರಸ್ತಾವನೆಯನ್ನು ಸರ್ಕಾರ ಕೈಬಿಡಬೇಕು ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಒತ್ತಾಯಿಸಿದರು.

ಕೇಣಿ ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಅಂಕೋಲಾ ಉಳಿಸಿ ಸಮಿತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಜನರ ಸಮಸ್ಯೆ ಆಲಿಸಲು ಸಮಯವಿಲ್ಲ. ಅವುಗಳು ಯೋಜನೆಯನ್ನು ಕೈ ಬಿಡಲು ಮನಸ್ಸು ಮಾಡುತ್ತಿಲ್ಲ. ಕೇಣಿ ವಾಣಿಜ್ಯ ಬಂದರು ಅಹವಾಲು ಸಭೆಯಲ್ಲಿ ಶೇ.99ರಷ್ಟು ಜನರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದನ್ನು ಜಿಲ್ಲಾಧಿಕಾರಿ ಕಣ್ಣಾರೆ ಕಂಡಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿ ಮನಸ್ಸು ಮಾಡಿ ಜನರ ಸಂಕಷ್ಟ ಅರ್ಥೈಸಿಕೊಂಡು ಯೋಜನೆ ಕೈ ಬಿಡುವ ವರದಿಯನ್ನು ಸರ್ಕಾರಕ್ಕೆ ತಲುಪಿಸಿದರೆ ಮಾತ್ರ ಕಾರ್ಯಗತವಾಗುತ್ತದೆ ಎಂದರು.

ಇಲ್ಲಿನ ಹೋರಾಟಗಾರ ತಾಳ್ಮೆ ಹಾಗೂ ನಿರಂತರ ಹೋರಾಟವನ್ನು ಕಾಯ್ದಿಟ್ಟುಕೊಂಡ ರೀತಿ ಮೆಚ್ಚುತ್ತೇನೆ. ಜನಶಕ್ತಿಯ ಮುಂದೆ ಯಾವುದೇ ಸರ್ಕಾರ ಇಲ್ಲ. ಕೆಲವರಿಗೆ ಬಂದರು ಬರಬೇಕು ಎನ್ನುವ ಆಸೆ ಹೆಚ್ಚಾಗಿದೆ ಆದರೆ ಇಂತಹ ಬೃಹತ್ ಬಂದರಿನಿಂದ ಆಗುವ ದುಷ್ಪರಿಣಾಮ ತಿಳಿದಿಲ್ಲ ಎಂದರು.

ನಾನು ರಾಜಕೀಯವಾಗಿ ಈಗ ಅಷ್ಟೊಂದು ಕಾಣಿಸಿಕೊಳ್ಳುತ್ತಿಲ್ಲ. ಬಂದರು ವಿರೋಧಿ ಹೋರಾಟದ ಕುರಿತಂತೆ ಎಂಎಲ್‌ಸಿ ಗಣಪತಿ ಉಳ್ವೇಕರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ತಿಳಿದುಕೊಳ್ಳುತ್ತಿದ್ದೇನೆ. ಅವರಿಂದ ಅಭಿಪ್ರಾಯ ಪಡೆಯುತ್ತಿದ್ದೇನೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ತಿಳಿಸಿದರು.