ಕುಷ್ಟಗಿ: ಸಂತ ಕವಿ ಸರ್ವಜ್ಞ ನೇರ, ನಿಷ್ಠುರವಾಗಿ ತ್ರಿಪದಿಗಳ ಮೂಲಕ ಸಮಾಜದಲ್ಲಿ ಸಮಾನತೆ ಸಾರಿದ್ದಾರೆ ಎಂದು ಎಂದು ನಿವೃತ್ತ ಉಪನ್ಯಾಸಕ ಶಿವಪುತ್ರಪ್ಪ ಕುಂಬಾರ ಹೇಳಿದರು
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕಾಡಳಿತ ಹಾಗೂ ಕುಂಬಾರ ಸಮಾಜದ ವತಿಯಿಂದ ನಡೆದ ಸರ್ವಜ್ಞ ಜಯಂತಿಯಲ್ಲಿ ಮಾತನಾಡಿದರು.ಜಾತಿ ವ್ಯವಸ್ಥೆ, ಅಂಧಶ್ರದ್ಧೆ, ಜಾತೀಯತೆ, ದೌರ್ಜನ್ಯ, ಕಂದಾಚಾರ, ದಬ್ಬಾಳಿಕೆ, ಶೋಷಣೆ, ಮೌಢ್ಯತೆಗಳೆಂಬ ಅನಿಷ್ಟ ಪದ್ಧತಿಯನ್ನು ಧಿಕ್ಕರಿಸಿ ಸಮ ಸಮಾಜದ ಪರಿಕಲ್ಪನೆಗಾಗಿ ಮುನ್ನೆಲೆಗೆ ತರುವ ಪ್ರಯತ್ನ ಮಾಡಿದ್ದಾರೆ. ಸರ್ವಜ್ಞ ಜನರಿಗೆ ಸಾಮಾನ್ಯ ಭಾಷೆಯಲ್ಲಿ ತ್ರಿಪದಿಗಳನ್ನು ರಚಿಸುವ ಮೂಲಕ ಮೂಢನಂಬಿಕೆ, ಜಾತಿ ಪದ್ಧತಿ, ಅಸ್ಪೃಶ್ಯತೆ ಸೇರಿದಂತೆ ಹಲವು ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದರು.
ಕುಂಬಾರ ಸಮಾಜದ ಮುಖಂಡರಾದ ಸುವರ್ಣಮ್ಮ ಕುಂಬಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕುಂಬಾರರ ಮೂಲ ವೃತ್ತಿಯನ್ನು ಬಿಟ್ಟು ಬದುಕು ನಡೆಸಲು ಅನ್ಯ ಉದ್ಯೋಗವನ್ನು ಮಾಡುತ್ತಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಮೂಲ ವೃತ್ತಿಯ ಆಧಾರದ ಮೇಲೆ ಕುಂಬಾರ ಜಾತಿಗೆ 2ಎ ಪ್ರಮಾಣ ಪತ್ರ ಕೊಡಬೇಕು. ನಮ್ಮದು ಸಣ್ಣ ಸಮುದಾಯವಾಗಿದ್ದು, ಎಲ್ಲ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸುವ ಮೂಲಕ ಸದೃಢ ಸಮಾಜ ಕಟ್ಟಲು ಮುಂದಾಗಬೇಕು ಎಂದರು.ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹೇಶ ಹಡಪದ ಸರ್ವಜ್ಞರ ಕುರಿತು ಉಪನ್ಯಾಸ ನೀಡಿದರು. ಗ್ರೇಡ್ 2 ತಹಸೀಲ್ದಾರ್ ರಜನಿಕಾಂತ ಕೆಂಗೇರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ರಾಮಣ್ಣ ಕುಂಬಾರ, ಸಂಗಮೇಶ ಕುಂಬಾರ, ಬಸವರಾಜಪ್ಪ ಕುಂಬಾರ, ರವಿಕುಮಾರ ಕುಂಬಾರ, ತಿಪ್ಪಣ್ಣ ಕುಂಬಾರ, ಚಂದ್ರಶೇಖರ ಕುಂಬಾರ ಮುದೇನೂರು ಸೇರಿದಂತೆ ಅನೇಕರು ಇದ್ದರು.