ಆರೋಗ್ಯವೇ ಭಾಗ್ಯ ಎಂಬುದು ಜೀವನದ ಅತ್ಯಂತ ದೊಡ್ಡ ಸತ್ಯವಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವು ಎಲ್ಲಾ ಸಂಪತ್ತುಗಳಿಗಿಂತ ಮಿಗಿಲಾದದ್ದು, ಏಕೆಂದರೆ ಉತ್ತಮ ಆರೋಗ್ಯವಿದ್ದರೆ ಮಾತ್ರ ಜೀವನದ ಸಂತೋಷವನ್ನು ಅನುಭವಿಸಲು ಮತ್ತು ಇತರ ಸಂಪತ್ತುಗಳನ್ನು ಗಳಿಸಲು ಸಾಧ್ಯ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಹಿರೇಕೆರೂರು:ಆರೋಗ್ಯವೇ ಭಾಗ್ಯ ಎಂಬುದು ಜೀವನದ ಅತ್ಯಂತ ದೊಡ್ಡ ಸತ್ಯವಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವು ಎಲ್ಲಾ ಸಂಪತ್ತುಗಳಿಗಿಂತ ಮಿಗಿಲಾದದ್ದು, ಏಕೆಂದರೆ ಉತ್ತಮ ಆರೋಗ್ಯವಿದ್ದರೆ ಮಾತ್ರ ಜೀವನದ ಸಂತೋಷವನ್ನು ಅನುಭವಿಸಲು ಮತ್ತು ಇತರ ಸಂಪತ್ತುಗಳನ್ನು ಗಳಿಸಲು ಸಾಧ್ಯ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹೇಳಿದರು.ಪಟ್ಟಣದ ಬಸ್ ಸ್ಟ್ಯಾಂಡ್ ಹತ್ತಿರ ಇರುವ ಬಣಕಾರ ಚಾಳಾದಲ್ಲಿ ನೂತನವಾಗಿ ನಿರ್ಮಾಣಗೊಂಡ ಮಾಗನೂರ ಆಸ್ಪತ್ರೆಯನ್ನು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಂದರೆ ಕೇವಲ ರೋಗರಹಿತವಾಗಿರುವುದಲ್ಲ, ಬದಲಿಗೆ ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಉತ್ತಮ ಸ್ಥಿತಿಯಲ್ಲಿರುವುದಾಗಿದೆ. ಆರೋಗ್ಯವೇ ಜೀವನದ ಅಡಿಪಾಯ ಇದ್ದಂತೆ. ಆರೋಗ್ಯ ವಲಯವು ಜನರ ದೈಹಿಕ-ಮಾನಸಿಕ ಕ್ಷೇಮವನ್ನು ಸುಧಾರಿಸಿ, ರೋಗಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಮೂಲಕ ಆರೋಗ್ಯಕರ ಸಮಾಜವನ್ನು ರೂಪಿಸುತ್ತದೆ. ಉತ್ತಮ ಆರೋಗ್ಯ ವ್ಯವಸ್ಥೆಯು ಸಮಗ್ರ ಅಭಿವೃದ್ಧಿಗೆ ಅಡಿಪಾಯವಾಗಿದೆ ಎಂದರು. ಶಾಸಕ ಯು.ಬಿ. ಬಣಕಾರ ಮಾತನಾಡಿ ಆರೋಗ್ಯ ಎಂದರೆ ಕೇವಲ ರೋಗಗಳಿಲ್ಲದ ಸ್ಥಿತಿಯಲ್ಲ, ಬದಲಾಗಿ ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಸಂಪೂರ್ಣ ಸದೃಢವಾಗಿರುವ ಯೋಗಕ್ಷೇಮದ ಸ್ಥಿತಿಯಾಗಿದೆ. ಇಂದು ಪಟ್ಣಣದಲ್ಲಿ ಡಾ. ಮನು ಮಾಗನೂರ ಅವರು ಉತ್ತಮ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುವ ಮೂಲಕ ತಾಲೂಕಿನ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಮುಂದಾಗಿದ್ದಾರೆ. ವೈದ್ಯ ಸೇವೆ ಒಂದು ಸಾಮಾಜಿಕ ಸೇವೆಯಾಗಿದ್ದು ಜನರಿಗೆ ಸರಿಯಾದ ಸಮಯಕ್ಕೆ ತಕ್ಕ ಸೇವೆ ಒದಗಿಸುವದು ಮುಖ್ಯವಾಗಿದೆ ಎಂದರು. ಡಾ. ಮನು ಮಾಗನೂರ ಮಾತನಾಡಿ, ಇಂದು ಜನರು ಆರೋಗ್ಯಕರ ನಡವಳಿಕೆಗಳನ್ನು ಜೀವನದ ಆರಂಭದಲ್ಲಿಯೇ ಕಲಿಯುವುದು ಅಗತ್ಯ. ಇದರಿಂದಾಗಿ ಅವು ನಮಗೆ ಆರೋಗ್ಯಕರ ಅಭ್ಯಾಸವಾಗಿ ಮಾರ್ಪಡುತ್ತವೆ ಮತ್ತು ಜೀವನದುದ್ದಕ್ಕೂ ಸ್ವಾಸ್ಥ್ಯವನ್ನು ಖಚಿತಪಡಿಸುತ್ತದೆ. ಆರೋಗ್ಯ ಮತ್ತು ಆರೋಗ್ಯಕರ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಯುವಕರನ್ನು ಪ್ರೇರೇಪಿಸಬೇಕಿದೆ ಎಂದರು.