ಭೀಮಾತೀರದ ಹಂತಕ ಬಾಗಪ್ಪನ ಭೀಕರ ಕೊಲೆ

| Published : Feb 12 2025, 12:30 AM IST

ಸಾರಾಂಶ

ಭೀಮಾತೀರದ ಹಂತಕ, ಕುಖ್ಯಾತ ನಟೋರಿಯಸ್, ರೌಡಿಶೀಟರ್ ಎನಿಸಿಕೊಂಡಿದ್ದ ಬಾಗಪ್ಪ ಹರಿಜನ ಭೀಕರ ಕೊಲೆಯಾಗಿದೆ. ನಗರದ ರೇಡಿಯೋ ಕೇಂದ್ರದ ಬಳಿ ಬಾಗಪ್ಪನನ್ನು ದುಷ್ಕರ್ಮಿಗಳು ಮನಬಂದಂತೆ ಮಂಗಳವಾರ ರಾತ್ರಿ ಕೊಚ್ಚಿ ಕೊಲೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಭೀಮಾತೀರದ ಹಂತಕ, ಕುಖ್ಯಾತ ನಟೋರಿಯಸ್, ರೌಡಿಶೀಟರ್ ಎನಿಸಿಕೊಂಡಿದ್ದ ಬಾಗಪ್ಪ ಹರಿಜನ ಭೀಕರ ಕೊಲೆಯಾಗಿದೆ. ನಗರದ ರೇಡಿಯೋ ಕೇಂದ್ರದ ಬಳಿ ಬಾಗಪ್ಪನನ್ನು ದುಷ್ಕರ್ಮಿಗಳು ಮನಬಂದಂತೆ ಮಂಗಳವಾರ ರಾತ್ರಿ ಕೊಚ್ಚಿ ಕೊಲೆ ಮಾಡಿದ್ದಾರೆ.

ಕಳೆದ ಹಲವು ದಶಕಗಳಿಂದ ಭೀಮಾತೀರದ ಹಂತಕರ ಹೆಸರಿನಲ್ಲಿ ಸಂಚಲನ ಸೃಷ್ಟಿಸಿದ್ದ ಬಾಗಪ್ಪ ಹರಿಜನ ಈಗ ದುಷ್ಕರ್ಮಿಗಳ ಹೊಡೆತಕ್ಕೆ ಪ್ರಾಣವನ್ನೇ ಬಲಿಕೊಟ್ಟಿದ್ದಾನೆ. ಹಲವಾರು ಕೊಲೆ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಬಾಗಪ್ಪನ ಮೇಲಿದ್ದವು. ಮಂಗಳವಾರ ರಾತ್ರಿ ದಾಳಿ ವಿಜಯಪುರದ ಮದಿನಾ ನಗರದಲ್ಲಿ ಬಾಡಿಗೆ ಮನೆಯಲ್ಲಿ ಬಾಗಪ್ಪ ವಾಸ ಮಾಡುತ್ತಿದ್ದ. ಫೆಬ್ರವರಿ 11 ರಾತ್ರಿ 8.50ರ ಸುಮಾರಿಗೆ ಮನೆಯಿಂದ ಹೊರಬರುತ್ತಿದ್ದಂತೆ ದುಷ್ಕರ್ಮಿಗಳು ಏಕಾಏಕಿ ಮಚ್ಚಿನಿಂದ ದಾಳಿ ಮಾಡಿದ್ದಾರೆ. ಸಿಕ್ಕ ಸಿಕ್ಕಲ್ಲಿ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ದುಷ್ಕರ್ಮಿಗಳು ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ. ಘಟನೆಯಿಂದ ಇಡಿ ವಿಜಯಪುರ ಸ್ತಬ್ಧವಾಗಿದೆ.

ಬಾಗಪ್ಪನ ಹಿನ್ನೆಲೆ:

ಬಾಗಪ್ಪ ಹರಿಜನ ಮೂಲತಃ ಆಲಮೇಲ ತಾಲೂಕಿನ ಬ್ಯಾಡಗಿಹಾಳ ಗ್ರಾಮದವನು. ಮೊದಲಿನಿಂದಲೂ ಭೀಮಾತೀರದ ಹಂತಕರ ನಂಟಿನಲ್ಲೇ ಬೆಳೆದ ಬಾಗಪ್ಪ ಸಹ ಅದೇ ಹಾದಿ ಹಿಡಿದು ಹಂತಕ ಚಂದಪ್ಪನ ಸಹಚರನಾಗಿದ್ದ. ಚಂದಪ್ಪನ ಜೊತೆಗೆ ಸೇರಿ ಹಲವಾರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಗಳು ಈತನ ಮೇಲಿದ್ದವು.

ಬಾಗಪ್ಪನ ಮೇಲಿದ್ದ ಪ್ರಕರಣಗಳು:

ಕುಖ್ಯಾತ ಹಂತಕ ಚಂದಪ್ಪ ಹರಿಜನನ ಜೊತೆಗೆ ಸಹಚರನಾಗಿ ಬೆಳೆದಿದ್ದ ಬಾಗಪ್ಪ ಚಂದಪ್ಪನ ಕಾಲಾ ನಂತರದಲ್ಲಿ ಚಂದಪ್ಪನ ತಮ್ಮ ಬಸವರಾಜ ಹರಿಜನನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಚಂದಪ್ಪ ಹರಿಜನನ ಸಂಬಂಧಿ ಮುತ್ತುರಾಜನನ್ನು ಕೊಲೆ ಮಾಡಿದ ಆರೋಪ ಈತನ ಮೇಲಿದೆ.

2020 ಜುಲೈ 19ರಂದು ಇಂಡಿಯ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆಗೆ ಮೂರು ಕೇಜಿ ಚಿನ್ನ ಅಥವಾ ₹5 ಕೋಟಿ ಹಣ ಕೊಡುವಂತೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದ ಆರೋಪವಿದೆ.

1997ರಲ್ಲಿ ಬಾಗಪ್ಪ ಚಡಚಣ ಠಾಣೆ ವ್ಯಾಪ್ತಿ ನಡೆದಿದ್ದ ಕೊಲೆಯೊಂದರಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. 1998ರಲ್ಲಿ ಆಳಂದ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಕೊಲೆಗಳು ಹಾಗೂ ಅಪಹರಣ ಪ್ರಕರಣದಲ್ಲೂ ಈತನ ಹೆಸರು ಕೇಳಿಬಂದಿತ್ತು. 1999ರಲ್ಲಿ ಆಲಮೇಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆಯೊಂದರಲ್ಲಿ ಈತನ ಹೆಸರು ತಳುಕು ಹಾಕಿಕೊಂಡಿತ್ತು. 2000ರಲ್ಲಿ ಪೊಲೀಸರ ಮೇಲೆ ಫೈರಿಂಗ್, ಬ್ಯಾಡಗಿಹಾಳದಲ್ಲಿ ನಡೆದ ಕೊಲೆ, ಆಳಂದ ಠಾಣೆ ವ್ಯಾಪ್ತಿ ಕೊಲೆ, ಬಸವಕಲ್ಯಾಣ ಠಾಣೆ ವ್ಯಾಪ್ತಿ ಕೊಲೆ ಯತ್ನ ಆರೋಪವಿತ್ತು.

2001ರಲ್ಲಿ ಆಲಮೇಲ ಠಾಣೆ ವ್ಯಾಪ್ತಿ ಕೊಲೆ, ಸಾಕ್ಷಿಗಳ ಮೇಲೆ ಗುಂಡು ಹಾರಿಸಿದ್ದ ಆರೋಪ. 2003ರಲ್ಲಿ ಅಪ್ಜಲಪುರ ತಾಲೂಕಿನ ಶಿರೋಳದಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿತ್ತು.

2017ರಲ್ಲಿ ಈತನ ಮೇಲೆ ಗುಂಡಿನ ದಾಳಿ:

ಹಂತಕ ಬಾಗಪ್ಪ ಹರಿಜನನ ಮೇಲೆ 2017 ಆಗಸ್ಟ್ 8ರಂದು ಜಿಲ್ಲಾ ನ್ಯಾಯಾಲಯದ ಆವರಣದಲ್ಲೇ ಬೆಳಗ್ಗೆ 10.40ಕ್ಕೆ ಗುಂಡಿನ ದಾಳಿ ನಡೆದಿತ್ತು. ಭೀಮಾತೀರದ ಹಂತಕ ಚಂದಪ್ಪ ಹರಿಜನ 2000ರಲ್ಲಿ ಪೊಲೀಸ್ ಎನಕೌಂಟರ್‌ಗೆ ಬಲಿಯಾದ ಬಳಿಕ 14 ವರ್ಷಗಳ ನಂತರದಲ್ಲಿ ಚಂದಪ್ಪನ ತಮ್ಮ ಬಸವರಾಜ ಹರಿಜನನ ಕೊಲೆಯಾಗಿತ್ತು. ಇದರಲ್ಲಿ ಬಾಗಪ್ಪ ಭಾಗಿಯಾಗಿದ್ದ ಎನ್ನಲಾಗಿತ್ತು. ಹೀಗೆ ಬಿಟ್ಟರೆ ಬಾಗಪ್ಪ ನಮ್ಮನ್ಯಾರನ್ನೂ ಉಳಿಸೋದಿಲ್ಲ ಎಂದುಕೊಂಡ ಚಂದಪ್ಪನ ಅಣ್ಣನ ಮಗನಾದ ಭೀಮಶ್ಯಾ ಹರಿಜನ ತನ್ನ ಪರಿಚಯಸ್ಥರಿಗೆ ಸುಪಾರಿ ನೀಡಿ ಕೊಲೆ ಮಾಡಲು ಯತ್ನಿಸಿದ್ದ. ಈ ವೇಳೆ ಸುಪಾರಿ ಪಡೆದಿದ್ದ ಪೀರಪ್ಪ ಹಡಪದ ಎಂಬಾತ ಬಾಗಪ್ಪನ ಮೇಲೆ ಕೋರ್ಟ್ ಆವರಣದಲ್ಲೇ ಮೂರು ಸುತ್ತು ಗುಂಡು ಹಾರಿಸಿದ್ದರೂ ಬಾಗಪ್ಪ ಚಿಕಿತ್ಸೆ ಪಡೆದು ಬದುಕುಳಿದಿದ್ದ. ಬಾಗಪ್ಪನ ಮೇಲೆ ಗುಂಡು ಹಾರಿಸಿದ್ದ ಪ್ರಕರಣದಲ್ಲಿ ಒಟ್ಟು ಆರು ಆರೋಪಿಗಳಿದ್ದರು.