ಸಾರಾಂಶ
ನರೇಗಲ್ಲ: ಗುರು ಇಲ್ಲದೆ ಯಾವ ವ್ಯಕ್ತಿಯ ವ್ಯಕ್ತಿತ್ವವೂ ವಿಕಸನವಾಗುವುದಿಲ್ಲ. ಮನೆಯಲ್ಲಿ ತಾಯಿ ಮೊದಲ ಗುರುವಾದರೆ, ನಮ್ಮ ಭವಿಷ್ಯದ ಜೀವನಕ್ಕೆ ಗುರುಗಳು ಅವಶ್ಯಕವಾಗಿ ಬೇಕೇ ಬೇಕು. ಆದ್ದರಿಂದ ಈ ಜಗತ್ತಿನಲ್ಲಿ ಗುರುವಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ಗದಗ ಕನಕದಾಸ ಶಿಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿ ದಂಡಿನ ಹೇಳಿದರು.ಸಮೀಪದ ನಿಡಗುಂದಿ ಗ್ರಾಮದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ನಿಡಗುಂದಿಕೊಪ್ಪದ ಶಾಖಾ ಮಠದಿಂದ ಜರುಗಿದ ಶಿವಾನುಭವ ಸಂಪದ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಭಾರತೀಯ ಪರಂಪರೆಯಲ್ಲಿ ಗುರು-ಶಿಷ್ಯ ಪರಂಪರೆಗೆ ಅಪಾರವಾದ ಮಹತ್ವವಿದೆ. ರಾಮಕೃಷ್ಣ ಪರಮಹಂಸರು-ಸ್ವಾಮಿ ವಿವೇಕಾನಂದ, ಗುರು ಗೋವಿಂದಭಟ್ಟರು-ಸಂತ ಶಿಶುನಾಳ ಶರೀಫರು ಈ ಮುಂತಾದ ಗುರು ಪರಂಪರೆ ನಮ್ಮ ಕಣ್ಣ ಮುಂದೆ ಆದರ್ಶವಾಗಿ ನಿಲ್ಲುತ್ತದೆ. ಗುರುಪೌರ್ಣಿಮೆಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಿದ ಶ್ರೀ ಅಭಿನವ ಚನ್ನಬಸವ ಸ್ವಾಮಿಗಳವರಿಗೆ ನಾನು ಭಕ್ತಿಯಿಂದ ತಲೆ ಬಾಗುತ್ತೇನೆ. ಇಂತಹ ಸ್ವಾಮೀಜಿಗಳು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಗುರುವನ್ನು ಮತ್ತು ತಂದೆ-ತಾಯಿಯನ್ನು ಗೌರವಿಸದ ಯಾವುದೇ ವ್ಯಕ್ತಿ ಸಮಾಜದಲ್ಲಿ ಇರಲು ಅನರ್ಹವೆನಿಸಿಕೊಳ್ಳುತ್ತಾನೆ. ಆದ್ದರಿಂದ ನಾವೆಲ್ಲರೂ ಅವರಿಗೆ ಋಣಿಯಾಗಿರೋಣ ಎಂದರು.ಗುಡದೂರು ಕಲ್ಲಮಠದ ಸಿದ್ದಲಿಂಗಯ್ಯ ಶಾಸ್ತ್ರಿ ವಿಶೇಷ ಉಪನ್ಯಾಸ ನೀಡಿದರು. ಸಾನ್ನಿಧ್ಯ ವಹಿಸಿದ್ದ ಅಭಿನವ ಚನ್ನಬಸವ ಸ್ವಾಮಿಗಳು ಆಶೀರ್ವಚನ ನೀಡಿ, ಶಿವಾನುಭವ ಸಂಪದ ಶಿವನ ಅನುಭೂತಿಯನ್ನು ನೀಡುತ್ತದೆ. ಇಲ್ಲಿ ವ್ಯಕ್ತವಾಗುವ ವಿಚಾರಗಳನ್ನು ನೀವು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದರೆ ನಿಮ್ಮ ಜೀವನ ಪಾವನವಾಗುತ್ತದೆ ಎಂದರು.ನಿಡಗುಂದಿಯ ಅಕ್ಕಮಹಾದೇವಿ ಮಹಿಳಾ ವೇದಿಕೆಯವರು ಕುಮಾರೇಶ್ವರ ನಾಮಾವಳಿ ಹೇಳಿದರು. ಧರ್ಮರ ಮಠದ ಷಣುಖಪ್ಪಜ್ಜನವರು ಇದ್ದರು. ಬಸವರಾಜ ಜಂಗಣ್ಣವರ ಹಾಗೂ ಶರಣಪ್ಪ ಅರಮನಿ ಸಂಗೀತ ಸೇವೆ ನೀಡಿದರು. ಶಿಕ್ಷಕ ಡಿ.ಎಸ್. ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಎ.ಎಸ್. ಗೆದಗೇರಿ ಸ್ವಾಗತಿಸಿದರು.