ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿದ ಶ್ರೀ ಅಮರಗಿರಿ ರಂಗನಾಥ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಎಸ್.ಡಿ.ಪರಮಶಿವಯ್ಯ, ಗುರುಶಿಷ್ಯರ ಸಂಬಂಧ ಎಂದಿಗೂ ಕೊನೆಗೊಳ್ಳುವ ಬಾಂಧವ್ಯವಲ್ಲ. ಅದೊಂದು ಪವಿತ್ರವಾದ ಸಂಬಂಧವಾಗಿದೆ. ಆಧುನಿಕ ಕಾಲಘಟ್ಟದಲ್ಲಿ ಆಧುನಿಕತೆ ಬೆಳೆದಂತೆ ಎಲ್ಲವೂ ಬದಲಾಗುತ್ತಿದೆ. ಆದರೆ ಇವತ್ತಿನ ಇಂತಹ ಪರಿಸ್ಥಿತಿಯಲ್ಲಿ ಕಳೆದ 27 ವರ್ಷಗಳ ನಂತರ ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವ ಮೂಲಕ ಗುರುವಂದನೆ ಕಾರ್ಯಕ್ರಮದ ಹೆಸರಿನಲ್ಲಿ ಅಮರ ಬಂಧ ಎಂಬ ಕಾರ್ಯಕ್ರಮವನ್ನು ಆಯೋಜಿಸುವುದು ಖುಷಿ ತರಿಸಿದೆ. ಈ ಕಾರ್ಯಕ್ರಮ ಬೇರೆಯವರಿಗೂ ಪ್ರೇರಣೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಹೋಬಳಿಯ ಚಿಕ್ಕೋನಹಳ್ಳಿ ಗೇಟ್‌ನಲ್ಲಿರುವ ಶ್ರೀ ಅಮರಗಿರಿ ರಂಗನಾಥ ಪ್ರೌಢಶಾಲೆ 1997-98 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಳೆಯ ವಿದ್ಯಾರ್ಥಿಗಳಿಂದ ಅಮರ ಬಂಧ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪಟ್ಟಣದ ನಂದಗೋಕುಲ ಹೋಟೆಲ್‌ನಲ್ಲಿ 1997-98ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿದ ಶ್ರೀ ಅಮರಗಿರಿ ರಂಗನಾಥ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಎಸ್.ಡಿ.ಪರಮಶಿವಯ್ಯ, ಗುರುಶಿಷ್ಯರ ಸಂಬಂಧ ಎಂದಿಗೂ ಕೊನೆಗೊಳ್ಳುವ ಬಾಂಧವ್ಯವಲ್ಲ. ಅದೊಂದು ಪವಿತ್ರವಾದ ಸಂಬಂಧವಾಗಿದೆ. ಆಧುನಿಕ ಕಾಲಘಟ್ಟದಲ್ಲಿ ಆಧುನಿಕತೆ ಬೆಳೆದಂತೆ ಎಲ್ಲವೂ ಬದಲಾಗುತ್ತಿದೆ. ಆದರೆ ಇವತ್ತಿನ ಇಂತಹ ಪರಿಸ್ಥಿತಿಯಲ್ಲಿ ಕಳೆದ 27 ವರ್ಷಗಳ ನಂತರ ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವ ಮೂಲಕ ಗುರುವಂದನೆ ಕಾರ್ಯಕ್ರಮದ ಹೆಸರಿನಲ್ಲಿ ಅಮರ ಬಂಧ ಎಂಬ ಕಾರ್ಯಕ್ರಮವನ್ನು ಆಯೋಜಿಸುವುದು ಖುಷಿ ತರಿಸಿದೆ. ಈ ಕಾರ್ಯಕ್ರಮ ಬೇರೆಯವರಿಗೂ ಪ್ರೇರಣೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ನಿವೃತ್ತ ಶಿಕ್ಷಕ ವಿ.ಎನ್.ಶೇಷಮೂರ್ತಿ ಮಾತನಾಡಿ, ಶಾಲೆಯ 1997- 98ನೇ ಸಾಲಿನ ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಅವತ್ತಿನ ಕಾಲದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇತ್ತು. ಗ್ರಾಮೀಣ ಪ್ರದೇಶದಲ್ಲಿ ಬಡತನವಿದ್ದರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲೆಂದು ಜನರು ಕೂಲಿ ಮಾಡಿ ಓದಿಸುತ್ತಿದ್ದರು. ಇನ್ನು ಅನೇಕ ವಿದ್ಯಾರ್ಥಿಗಳು 8ರಿಂದ 10 ಕಿ.ಮೀ. ದೂರದಿಂದ ಶಾಲೆಗೆ ಆರ್ಥಿಕವಾಗಿ ಚೆನ್ನಾಗಿರುವ ವಿದ್ಯಾರ್ಥಿಗಳು ಸೈಕಲ್‌ನಲ್ಲಿ ಬರುತ್ತಿದ್ದರು. ಇನ್ನೂ ಕೆಲವರು ನಡೆದುಕೊಂಡು ಬರುತ್ತಿದ್ದರು. ಶಾಲೆಯಲ್ಲೂ ಕೂಡ ಶಿಕ್ಷಕರಿಗೆ ಹೆಚ್ಚಿನ ಗೌರವ ಕೊಡುವ ಮೂಲಕ ಓದಿನ ಕಡೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಅವರ ಈ ಪರಿಶ್ರಮದಿಂದಲೇ ಈಗ ವಿವಿಧ ರಂಗಗಳಲ್ಲಿ ಹೆಚ್ಚು ಹೆಸರು ಮಾಡಲು ಸಾಧ್ಯವಾಗಿದೆ ಎಂದರು.

ನಿವೃತ್ತ ಶಿಕ್ಷಕ ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ಸದ್ಯ ಶ್ರೀ ಅಮರಗಿರಿ ರಂಗನಾಥ ಪ್ರೌಢಶಾಲೆ ಅನೇಕ ವರ್ಷಗಳಿಂದ ವಿದ್ಯಾರ್ಥಿಗಳ ಕೊರತೆಯಿಂದ ಶಾಲೆಯನ್ನು ಮುಚಲಾಗಿದ್ದು, ಈ ಬಗ್ಗೆ ಶಾಲೆಯನ್ನು ಪುನರ್ ಪ್ರಾರಂಭಿಸಲು ಎಲ್ಲಾ ಹಳೇ ವಿದ್ಯಾರ್ಥಿಗಳು ಒಗ್ಗೂಡಿ ಶ್ರಮಿಸಿದರೆ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಈ ಬಗ್ಗೆ ಎಲ್ಲರೂ ಚಿಂತಿಸುವ ಅಗತ್ಯವಿದೆ ಎಂದರು.

ವಿಭಿನ್ನ ಕಾರ್ಯಕ್ರಮ ಆಯೋಜನ : ಅಮರಗಿರಿಯ ಗುರುಗಳ, "ಅಮರ ಬಂಧ " ಗುರು ಶಿಷ್ಯರ ಸಮಾಗಮ ಕಾರ್ಯಕ್ರಮದಲ್ಲಿ ಪ್ರತಿ ಶಿಕ್ಷಕರನ್ನು ಮಾತನಾಡಿಸಿ ಅವರ ಸಲಹೆ ಮಾರ್ಗದರ್ಶನದ ಜೊತೆಗೆ ನಿವೃತ್ತಿಯ ಜೀವನದ ನಂತರ ಅವರು ಯಾವ ರೀತಿ ಜೀವನ ಸಾಗಿಸುತ್ತಿದ್ದಾರೆ. ಜೊತೆಗೆ ಮುಂಬರುವ ದಿನಗಳಲ್ಲಿ ನಾವು ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಕುರಿತು ಹಳೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರಿಂದ ಸಲಹೆ ಸೂಚನೆಗಳನ್ನು ಪಡೆದರು.

ಕಾರ್ಯಕ್ರಮದಲ್ಲಿ ತಮ್ಮನೆಚ್ಚಿನ ಶಿಕ್ಷಕರಾದ ಎಚ್.ಎಮ್.ಪರಮಶಿವಯ್ಯ, ವಿ.ಎನ್.ಶೇಷಮೂರ್ತಿ, ವಿ.ಮಲ್ಲಿಕಾರ್ಜುನಯ್ಯ, ಟಿ ಬಿ ಲಿಂಗದೇವರು, ಎಂ.ಹೆಚ್.ಬೋರೇಗೌಡ, ವೈ.ಎನ್.ಮಲ್ಲೇಶ್, ಎನ್.ಎಸ್.ಸಣ್ಣನಂಜಪ್ಪ, ಎನ್.ಸಿ.ರುದ್ರಚಾರ್, ಗಂಗಾಧರ್ ಮೂರ್ತಿ, ಟಿ ಚಂದ್ರಚಾರ್, ನಿರ್ಮಲ, ಶ್ಯಾಮಲ, ಜಯಮ್ಮ, ಅವರನ್ನು ಹಳೆ ವಿದ್ಯಾರ್ಥಿಗಳು ಹೃದಯಪೂರ್ವಕವಾಗಿ ಸನ್ಮಾನಿಸಿದರು.

1997-98ನೇ ಸಾಲಿನಲ್ಲಿ ಶ್ರೀ ಅಮರಗಿರಿ ರಂಗನಾಥ ಪ್ರೌಢಶಾಲೆ ಇಡೀ ತಾಲೂಕಿನಲ್ಲೇ ಶಿಕ್ಷಣದಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿತ್ತು. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲೂ ಕೂಡ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದುತ್ತಿದ್ದರು. ಅವತ್ತಿನ ಶಿಕ್ಷಕರ ಹಗಲು ರಾತ್ರಿ ಎನ್ನದೆ ತಮ್ಮ ಮನೆಯ ಮಕ್ಕಳಂತೆ ಕಾಣುವುದರ ಜೊತೆಗೆ ಹೆಚ್ಚು ಓದಿನ ಕಡೆ ಮಕ್ಕಳನ್ನು ಆಕರ್ಷಿಸುವಂತೆ ಮಾಡುತ್ತಿದ್ದರು. ಇದರಿಂದ ಇಂದು ಅನೇಕ ವಿದ್ಯಾರ್ಥಿಗಳು ಸರ್ಕಾರಿ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಳೆಯ ವಿದ್ಯಾರ್ಥಿ ಗೋವಿಂದರಾಜ್ ತಮ್ಮ ಅಭಿಪ್ರಾಯವನ್ನು ವೇದಿಕೆಯಲ್ಲಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳಾದ ಧರ್ಮರಾಜ್, ಸತೀಶ್, ತಿಮ್ಮೇಗೌಡ, ಚಿರಂಜೀವಿ, ಹರೀಶ್, ಲೋಕೇಶ್, ಆನಂದ, ಮೋಹನ್ ಕುಮಾರ್, ಮನು, ಪ್ರೇಮಕುಮಾರಿ, ರುಕ್ಮಿಣಿ, ಸುಮನ, ನಳಿನ, ಗಾಯತ್ರಿ, ರಾಧಾ, ನಾಗಶ್ರೀ, ಸೇರದಂತೆ 1997-98ನೇ ಸಾಲಿನ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.

----------------------------------