ದಾಬಸ್‍ಪೇಟೆ: ದೇಶದಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿ ಅವರನ್ನು ಮತಪಟ್ಟಿಯಿಂದ ಹೊರತೆಗೆದು ದೇಶದಿಂದ ಹೊರ ಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವರು ಸ್ಪಷ್ಟಪಡಿಸಿದ್ದರೂ ರಾಜ್ಯ ಸರ್ಕಾರ ಈ ವಿಷಯದಲ್ಲಿ ಮೃಧು ಧೋರಣೆ ತೋರುತ್ತಿರುವುದು ಸರಿಯಲ್ಲ, ರಾಜ್ಯ ಸೇರಿದಂತೆ ಎಲ್ಲಾ ರಾಜ್ಯದಲ್ಲೂ ಅಕ್ರಮ ವಲಸಿಗರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ ನಾರಾಯಣ್ ಆಗ್ರಹಿಸಿದರು.

ತ್ಯಾಮಗೊಂಡ್ಲು ಹೋಬಳಿ ಮಾಕನಕುಪ್ಪೆ ಗ್ರಾಮದಲ್ಲಿ ಚಾಲುಕ್ಯ ಫ್ಲ್ಯುಯೆಲ್ ಝೋನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಿನೇದಿನೇ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಅವರನ್ನು ದೇಶದಿಂದ ಹೊರಹಾಕಿದಾಗ ಮಾತ್ರ ರಾಜ್ಯ ಹಾಗೂ ದೇಶದಲ್ಲಿ ಶಾಂತಿ ಕಾಪಾಡಲು ಸಾಧ್ಯ. ನುಸುಳುಕೋರರು ಭಾರತಕ್ಕೆ ವಾಮಮಾರ್ಗದಿಂದ ಬಂದು ಇಲ್ಲಿನ ಪ್ರಜೆಗಳಾಗಿ ಹಕ್ಕು ಚಲಾಯಿಸಲು ಮುಂದಾಗುವ ಬಗ್ಗೆ ಸರ್ಕಾರ ಎಚ್ಚರ ವಹಿಸಬೇಕು ಎಂದರು.

ಗೊತ್ತಿಲ್ಲ ಬಿಟ್ಟರೇನೂ ಹೇಳಲ್ಲ: ರಾಜ್ಯ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಸಿದ್ದ ಉತ್ತರ ''''''''ಗೊತ್ತಿಲ್ಲ'''''''' ಎಂಬುದು ಬಿಟ್ಟರೆ ಇನ್ನೇನೂ ಇಲ್ಲ. ಅಸಹಾಯಕ ಗೃಹ ಮಂತ್ರಿಯಿಂದ ನಾವೇನು ನಿರೀಕ್ಷಿಸಲು ಸಾಧ್ಯ? ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟ ಮಂತ್ರಿಗಳ ಹೆಚ್ಚಳದಿಂದ ಪ್ರಾಮಾಣಿಕರಿಗೆ ಕೆಲಸ ಮಾಡಲು ಆಗುತ್ತಿಲ್ಲ. ವೋಟ್ ಬ್ಯಾಂಕ್ ರಾಜಕಾರಣದಿಂದ ಒಂದು ವರ್ಗದ ಜನರಿಗೆ ಮಾತ್ರ ಈ ಸರ್ಕಾರದಲ್ಲಿ ಹೆಚ್ಚಿನ ಅವಕಾಶ ಸಿಗುತ್ತಿದೆ. ಅದು ತಪ್ಪಬೇಕು ಎಂದು ಹೇಳಿದರು.

ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಹೊಸ ಉದ್ಯಮಗಳ ಸ್ಥಾಪನೆಗೆ ಅನುದಾನದ ಜೊತೆಗೆ ಸಾಕಷ್ಟು ಸೌಲಭ್ಯ ನೀಡುತ್ತಿವೆ. ಯುವ ಸಮುದಾಯ ಉದ್ಯಮ ಆರಂಭಿಸಿ ಅಭಿವೃದ್ಧಿ ಸಾಧಿಸಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಂಕ್ ಮಾಲೀಕ ಎಂ.ಎಸ್. ಶಶಿಧರ್, ಎಚ್.ಜಿ.ಪಾರ್ವತಿ, ಬಿಜೆಪಿ ಎಸ್ಸಿ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಹೊಂಬಯ್ಯ, ತಾಪಂ ಮಾಜಿ ಸದಸ್ಯ ಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷ ನರಸೀಪುರ ನಾಗರಾಜು, ಮಾಜಿ ಸದಸ್ಯ ಅರುಣ್, ಜಯರಾಮು, ಗಿರೀಶ್, ನಿಡವಂದ ಕುಮಾರ್, ಕಾಸರಘಟ್ಟ ಗಂಗಾಧರ್, ಚಂದ್ರಣ್ಣ ಇತರರಿದ್ದರು.


ಪೋಟೋ 1 :

ತ್ಯಾಮಗೊಂಡ್ಲು ಹೋಬಳಿ ಮಾಕನಕುಪ್ಪೆ ಗ್ರಾಮದಲ್ಲಿ ಚಾಲುಕ್ಯ ಫ್ಯುಯೆಲ್ ಝೋನ್ ನಯಾರ ಪೆಟ್ರೋಲ್ ಬಂಕ್‍ಗೆ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಚಾಲನೆ ನೀಡಿದರು. ಸ್ಥಳೀಯ ಬಿಜೆಪಿ ಮುಖಂಡರು ಹಾಜರಿದ್ದರು.