ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ಉತ್ತರ ಕರ್ನಾಟಕದ ಭಾಗದ ಜನರು ಮುಗ್ಧರು, ಅವರ ಆತಿಥ್ಯೋಪಚಾರ ಯಾವತ್ತೂ ಮರೆಯುವುದಿಲ್ಲ ಎಂದು ಖ್ಯಾತ ಚಿತ್ರ ನಟ ಶೋಭರಾಜ್ ಹೇಳಿದರು.ಇಳಕಲ್ಲ ತಾಲೂಕಿನ ಸುಕ್ಷೇತ್ರ ಸಿದ್ಧನಕೊಳ್ಳದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಿದ್ಧಶ್ರೀ ಚಲನ ಚಿತ್ರೋತ್ಸವದಲ್ಲಿ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಬೆಂಗಳೂರಿಗೆ ಮರಳುತ್ತಿರುವಾಗ ಮಾರ್ಗ ಮಧ್ಯೆ ಇಳಕಲ್ಲ ನಗರಕ್ಕೆ ಭೇಟಿ ನೀಡಿದ್ದಾಗ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಉಪಹಾರ ಕೂಟದಲ್ಲಿ ಪಾಲ್ಗೊಂಡು ಆತಿಥ್ಯ ಸ್ವೀಕರಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಕಲಾವಿದರಿಗೆ ಸಿಗುವಂತಹ ಆತಿಥ್ಯ ಎಂದಿಗೂ ಮರೆಯುವಂತಿಲ್ಲ. ಇಳಕಲ್ಲ ಎಂದೊಡನೆ ಥಟ್ಟನೆ ನೆನಪಾಗುವುದು ಇಳಕಲ್ಲ ಸೀರೆ. ಈ ಹಿಂದೆ ಒಂದು ಬಾರಿ ನನ್ನ ಪತ್ನಿಗಾಗಿ ಇಳಕಲ್ಲ ಸೀರೆ ಖರೀದಿಸಲು ಇಲ್ಲಿಗೆ ಬಂದಿದ್ದೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ವತಿಯಿಂದ ಏರ್ಪಡಿಸಿದ್ದ ಉಪಹಾರ ಕೂಟಕ್ಕೆ ದಂಪತಿ ಸಮೇತ ಆಗಮಿಸಿ ಉಪಹಾರ ಸ್ವೀಕರಿಸಿ 2 ಗಂಟೆಗಳ ಕಾಲ ಪತ್ರಕರ್ತರೊಂದಿಗೆ ಅನೇಕ ವಿಷಯಗಳ ಕುರಿತು ಚರ್ಚಿಸಿದರು.ಪತ್ರಕರ್ತ ವಿಜಯ ಪಲ್ಲೇದ ಅವರ ಕುಟುಂಬದವರು ಶೋಭರಾಜ್ ದಂಪತಿಗೆ ಸನ್ಮಾನಿಸಿ, ಗೌರವಿಸಿದರು. ಸಮಾಜ ಸೇವಕ ವಿಠ್ಠಲ ಜಕ್ಕಾ ಅತಿಥಿಗಳಿಗೆ ಇಳಕಲ್ಲ ಸೀರೆ ಉಡುಗೊರೆಯಾಗಿ ನೀಡಿದರು.
ಪುನಿತ್ರಾಜಕುಮಾರ ಅಭಿಮಾನಿ ಬಳಗ ಅಧ್ಯಕ್ಷ ಪಂಪನಗೌಡ ಪಾಟೀಲ, ಪತ್ರಿಕಾ ವಿತರಕ ಇಮಾಮ್ ಹುಸೇನ್ ಮುಲ್ಲಾ ಶೋಭ ರಾಜ್ ಅವರನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಉದ್ಯಮಿ ಮಲ್ಲಿಕಾರ್ಜುನಗೌಡ ಗೌಡರ, ವೈದ್ಯ ಬಸವರಾಜ ಬಾದಿಮನಾಳ, ಪೃಥ್ವಿರಾಜ ಹಿರೇಮಠ ಸೇರಿದಂತೆ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಸದಸ್ಯರು ಉಪಸ್ಥಿತರಿದ್ದರು.