ಮದ್ಯಕ್ಕೆ ಕಾಸು ಕೊಡದಿದ್ದಕ್ಕೆ ಮನೆಗೆ ಬೆಂಕಿಯಿಟ್ಟ ಗಂಡ

| Published : Mar 24 2024, 01:33 AM IST

ಮದ್ಯಕ್ಕೆ ಕಾಸು ಕೊಡದಿದ್ದಕ್ಕೆ ಮನೆಗೆ ಬೆಂಕಿಯಿಟ್ಟ ಗಂಡ
Share this Article
  • FB
  • TW
  • Linkdin
  • Email

ಸಾರಾಂಶ

ಮದ್ಯ ಸೇವನೆಗೆ ಹೆಂಡತಿ ಹಣ ಕೊಡುತ್ತಿಲ್ಲ ಎಂದು ಗಲಾಟೆ ಮಾಡಿ ಮನೆಗೆ ಬೆಂಕಿಯಿಟ್ಟು ಸಾಮಗ್ರಿಗಳನ್ನು ಸುಟ್ಟಿರುವ ಪ್ರಕರಣ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಮದ್ಯ ಸೇವನೆಗೆ ಹೆಂಡತಿ ಹಣ ಕೊಡುತ್ತಿಲ್ಲ ಎಂದು ಗಲಾಟೆ ಮಾಡಿ ಮನೆಗೆ ಬೆಂಕಿಯಿಟ್ಟು ಸಾಮಗ್ರಿಗಳನ್ನು ಸುಟ್ಟಿರುವ ಪ್ರಕರಣ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸೋಲದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಕೊಟ್ಟನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಕಿರಣ್‌ಕುಮಾರ್(37) ಬಂಧಿತ ಆರೋಪಿ. ಈತ 11 ವರ್ಷಗಳ ಹಿಂದೆ ಆಶಾಳನ್ನು ಪ್ರೀತಿಸಿ ಮದುವೆಯಾಗಿದ್ದು ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಇವರ ಕುಟುಂಬ ಕೆಲ ವರ್ಷಗಳಿಂದ ಪ್ರತ್ಯೇಕ ಮನೆಯಲ್ಲಿ ವಾಸವಾಗಿದ್ದರು.

ಕಿರಣ್ ಕುಡಿತಕ್ಕೆ ದಾಸನಾಗಿದ್ದು, ಆಶಾ ಮೇಲೆ ಗಲಾಟೆ ಮಾಡಿ ಮಕ್ಕಳಿಗೂ ಹಿಂಸೆ ನೀಡುತ್ತಿದ್ದ. ಐದಾರು ದಿನದ ಹಿಂದೆ ಹೆಂಡತಿ ಆಶಾ ಬಳಿ ಕುಡಿಯಲು ಹಣ ಕೇಳಿದ್ದಾನೆ. ಆಕೆ ಹಣ ಕೊಡದಿದ್ದಕ್ಕೆ ಗಲಾಟೆ ಮಾಡಿ ತಲೆಗೆ ಹೊಡೆದಿದ್ದನು. ಈ ವಿಚಾರ ಆಶಾ ತಂದೆ ತಾಯಿಗೆ ತಿಳಿದು ಅವರು ಕೇಳಲು ಬಂದಾಗ ಅವರಿಗೆ ಕೊಲೆ ಬೆದರಿಕೆ ಹಾಕಿ ಮನೆಯಲ್ಲಿದ್ದ ಆಶಾ ಹಾಗೂ ಮಕ್ಕಳ ಬಟ್ಟೆ, ಟಿವಿ, ಫ್ರಿಡ್ಜ್‌, ಪ್ಯಾನ್, ಪಾತ್ರೆಗಳಿಗೆ ಬೆಂಕಿ ಇಟ್ಟಿದ್ದಾನೆ. ತಕ್ಷಣ ಇವರು ಹೊರಗೆ ಬೆಂಕಿ ನಂದಿಸಲು ಹೋದಾಗ ಕೊಲೆ ಬೆದರಿಕೆ ಹಾಕಿ ಮತ್ತೆ ಹೊಡೆದು ಪರಾರಿಯಾಗಿದ್ದಾನೆ.

ಸ್ಥಳೀಯರು ಮನೆಯ ಬೆಂಕಿ ನಂದಿಸಿ ಆಶಾಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆಶಾ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಡವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಿರಣ್‌ನನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.