ಸಾರಾಂಶ
ಸಿದ್ದಾಪುರ: ನಿವೃತ್ತ ನೌಕರರ, ಹಿರಿಯ ನಾಗರಿಕರ ಅನುಭವ, ವಿಚಾರಗಳು ಸಮಾಜಕ್ಕೆ ಅಗತ್ಯವಾಗಿದೆ. ಅವರ ಮಾರ್ಗದರ್ಶನ ಕಿರಿಯರ ಬದುಕಿನಲ್ಲಿ ಬದಲಾವಣೆ ತರುವ ಸಾಮರ್ಥ್ಯವನ್ನು ಹೊಂದಿವೆ. ನನ್ನಂಥ ಜನಪ್ರತಿನಿಧಿಗಳಿಗೂ ಅವರ ಸಲಹೆ, ಸೂಚನೆ, ಆಶೀರ್ವಾದ ಖಂಡಿತವಾಗಿಯೂ ಅಗತ್ಯವಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.ಪಟ್ಟಣದ ಲಯನ್ಸ್ ಬಾಲಭವನದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಘಟಕ ಆಯೋಜಿಸಿದ್ದ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ, ೮೦ ವರ್ಷ ಪೂರೈಸಿದ ನಿವೃತ್ತ ನೌಕರರನ್ನು ಸನ್ಮಾನಿಸಿ ಮಾತನಾಡಿದರು.ಪ್ರತಿ ವ್ಯಕ್ತಿ ಹಿರಿಯರನ್ನು ಗೌರವದಿಂದ ನೋಡಿದಾಗ ನಮಗೂ ಗೌರವ ಸಿಗುತ್ತದೆ. ಪ್ರಾಮಾಣಿಕತೆಗೆ ಒಂದಲ್ಲ ಒಂದು ದಿನ ಬೆಲೆ ಸಿಕ್ಕೇ ಸಿಗುತ್ತದೆ. ಬದುಕಿಗೆ ವಿವಿಧ ಕಾಯಕ ಅನಿವಾರ್ಯ. ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವವರನ್ನು ಸನ್ಮಾನಿಸಿರುವುದು ಶಾಘ್ಲನೀಯ ಎಂದರು.ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವಿ.ಎಂ. ಹೆಗಡೆ ಮಾತನಾಡಿ, ಯಾವ ಕುಟುಂಬದಲ್ಲಿ ತಮ್ಮ ಕುಟುಂಬದ ಹಿರಿಯರನ್ನು ಗೌರವದಿಂದ ಕಾಣಲಾಗುತ್ತದೆಯೋ ಆ ಕುಟುಂಬ ಉನ್ನತಿ ಹೊಂದುತ್ತದೆ. ಪ್ರಾಮಾಣಿಕತೆ ಇದ್ದರೆ ಜೀವನ ಸಹ ಉನ್ನತಿ ಹೊಂದುತ್ತದೆ ಎಂದು ನಿವೃತ್ತ ನೌಕರರ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸುವಲ್ಲಿ ಶಾಸಕರು ಮುಂದಾಗಬೇಕು ಎಂದರು.ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಮಾತನಾಡಿ, ಹಲವು ಸವಾಲುಗಳನ್ನು ಎದುರಿಸಿ ಸೇವಾವೃತ್ತಿ ಮುಗಿಸಿ ನಿವೃತ್ತರಾದ ಹಿರಿಯರು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು ಎಂದರು. ತಾಲೂಕು ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ಟಣದಲ್ಲಿ ಒಂದು ಸಂಕೀರ್ಣ ನಿರ್ಮಿಸಿ ನಿವೃತ್ತ ನೌಕರರ ಸಂಘ, ಕನ್ನಡ ಸಾಹಿತ್ಯ ಪರಿಷತ್, ಪತ್ರಕರ್ತರ ಸಂಘ ಹಾಗೂ ಮಾಜಿ ಸೈನಿಕರ ಸಂಘಗಳಿಗೆ ಕಾರ್ಯಾಲಯ ಒದಗಿಸುವಂತಾಗಬೇಕು ಎಂದರು.ಮುಖ್ಯ ಅತಿಥಿಗಳಾಗಿ ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ಪತ್ರಕರ್ತ ಗಂಗಾಧರ ಕೊಳಗಿ, ಲಯನ್ಸ ಕ್ಲಬ್ ಅಧ್ಯಕ್ಷ ಎ.ಜಿ. ನಾಯ್ಕ ಮಾತನಾಡಿದರು.ಸಂಘದ ಉಪಾಧ್ಯಕ್ಷ ಎನ್.ವಿ. ಹೆಗಡೆ, ಕಾರ್ಯದರ್ಶಿ ವಿ.ಎಸ್. ಶೇಟ್ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘದ ಸದಸ್ಯೆ ತ್ರಿವೇಣಿ ಹೆಗಡೆ ಪ್ರಾರ್ಥಿಸಿದರು. ಜಿ.ಜಿ. ಹೆಗಡೆ ಬಾಳಗೋಡ ನಿರೂಪಿಸಿದರು.