ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಅಯೋಧ್ಯೆ ಶ್ರೀರಾಮಮಂದಿರ ಉದ್ಘಾಟನೆ ಅಂಗವಾಗಿ ಜ.22ರಂದು ಸೋಮವಾರಪೇಟೆ ಪಟ್ಟಣದ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ.ವಿಶೇಷವೆಂದರೆ, ಇಡೀ ದೇಶವೇ ಎದುರು ನೋಡುತ್ತಿರುವ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ವೀರಾಜಮಾನವಾಗಲಿರುವ ಶ್ರೀರಾಮನ ವಿಗ್ರಹವನ್ನು ನಮ್ಮದೇ ರಾಜ್ಯದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿದ್ದರೆ. ಆದರ ಸೋಮವಾರಪೇಟೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡು ನಿತ್ಯ ಪೂಜೆ ಸ್ವೀಕರಿಸುತ್ತಿರುವ ಶ್ರೀರಾಮನ ವಿಗ್ರಹ ಅರುಣ್ ಅವರ ತಂದೆ ಯೋಗಿರಾಜ್ ಅವರಿಂದ ನಿರ್ಮಿಸಲ್ಪಿಟ್ಟಿದೆ.೦೫.೦೭.೧೯೯೯ರಲ್ಲಿ ಜೀರ್ಣೋದ್ಧಾರಗೊಂಡ ಸೋಮವಾರಪೇಟೆಯ ಶ್ರೀರಾಮ ಮಂದಿರದಲ್ಲಿ ಪ್ರಸ್ತುತ ಪ್ರತಿಷ್ಠಾಪನೆಗೊಂಡಿರುವ ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮನ ವಿಗ್ರಹಗಳನ್ನು ದಿ. ಯೋಗಿರಾಜ್ ಅವರು ಕೆತ್ತನೆ ಮಾಡಿದ್ದಾರೆ.
ಅಯೋಧ್ಯೆಯ ವಿಗ್ರಹಗಳು ಹಾಗೂ ಸೋಮವಾರಪೇಟೆ ಶ್ರೀರಾಮ ಮಂದಿರದ ವಿಗ್ರಹಗಳ ಶಿಲ್ಪಕಲೆಯನ್ನು ಅಪ್ಪ-ಮಗ ನಿರ್ವಹಿಸಿರುವುದು ವಿಶೇಷ ಎಂದು ಕಳೆದ ೮ ವರ್ಷಗಳಿಂದ ಇಲ್ಲಿನ ಶ್ರೀರಾಮ ಮಂದಿರದಲ್ಲಿ ನಿತ್ಯಪೂಜೆ ನೆರವೇರಿಸುತ್ತಿರುವ ಮೋಹನ್ ಮೂರ್ತಿ ಶಾಸ್ತ್ರಿ ಹೇಳಿದ್ದಾರೆ.* ನಾಳೆ ವಿಶೇಷ ಪೂಜೆ
ಅಯೋಧ್ಯೆ ಶ್ರೀರಾಮಮಂದಿರ ಉದ್ಘಾಟನೆ ಅಂಗವಾಗಿ ಜ.22ರಂದು ಸೋಮವಾರಪೇಟೆ ಪಟ್ಟಣದ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ ಎಂದು ಕುರುಹಿನ ಶೆಟ್ಟಿ ಸಮಾಜದ ಅಧ್ಯಕ್ಷ ಬಿ.ಸಿ. ವೆಂಕಟೇಶ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಜ.೨೨ರಂದು ಬೆಳಗ್ಗೆ ೮ ಗಂಟೆಯಿಂದ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ತಾರಕ ಹೋಮ, ಅಭಿಷೇಕಾಧಿ ಸೇವೆಗಳು, ಅಷ್ಟೋತ್ತರ ಸೇರಿದಂತೆ ವಿಶೇಷ ಪೂಜೆಗಳು ನಡೆಯಲಿವೆ ಎಂದರು.
ಬೆಳಗ್ಗೆ ೧೧ ಗಂಟೆಯಿಂದ ಭಕ್ತರಿಂದ ಅಕ್ಷತಾರೋಹಣ, ರಾಜೋಪಚಾರ, ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಕುರುಹಿನ ಶೆಟ್ಟಿ ಸಮಾಜದ ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಯುವಕ ಸಂಘ ಅಧ್ಯಕ್ಷ ಬಿ.ಜಿ. ರವಿ, ಸಲಹಾ ಸಮಿತಿ ಸದಸ್ಯ ಎನ್.ಎಂ. ರಮೇಶ್, ಸೀತಾ ಬಳಗದ ಅಧ್ಯಕ್ಷೆ ಯಶೋದಾ ಪ್ರಶಾಂತ್ ಉಪಸ್ಥಿತರಿದ್ದರು.