ಸಾರಾಂಶ
ವಿದ್ಯಾರ್ಥಿ ದೆಸೆಯಲ್ಲಿ ಸಮಯಕ್ಕೆ ಆದ್ಯತೆ ನೀಡಬೇಕು. ಕಳೆದು ಹೋದ ವಸ್ತುವನ್ನು ಯಾವಾಗಲಾದರೂ ಪಡೆಯಬಹುದು, ಗಳಿಸಬಹುದು. ಆದರೆ ಸಮಯ ಮತ್ತು ಸಮುದ್ರದ ಅಲೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಕೊಪ್ಪಳ:
ಶಿಕ್ಷಣದ ಪ್ರಾಮುಖ್ಯತೆ ಒತ್ತಿ ಹೇಳುವ ದುರ್ಗತಿ ಯಾವ ದೇಶಕ್ಕೂ ಬರಬಾರದು. ಪ್ರತಿಯೊಬ್ಬರು ಅದನ್ನು ಅರಿತುಕೊಂಡು ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಉಪನ್ಯಾಸಕ, ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಾರ್ಷಿಕ ಸಮಾರೋಪ ಸಮಾರಂಭ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕವಾಗಿ ಪ್ರಗತಿ ಸಾಧಿಸದಿದ್ದರೆ ಸಾಮಾಜಿಕವಾಗಿ ಕೊಡುಗೆ ಶೂನ್ಯ. ಸಮಾಜ ಚನ್ನಾಗಿಲ್ಲ ಎನ್ನುವ ಬದಲು ನಾವು ಸರಿಯಾಗಬೇಕಿದೆ. ಸಂಸ್ಕಾರ ರಹಿತ ವಿದ್ಯಾರ್ಥಿಗಳಿಂದ ಭಯಾನಕ ವಾತಾವರಣ ಸೃಷ್ಟಿಯಾಗುತ್ತದೆ. ವಿದ್ಯಾರ್ಥಿಗಳು ಸಂಸ್ಕಾರ, ಸಂಸ್ಕೃತಿ ಅಳವಡಿಸಿಕೊಂಡು ಬದುಕನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.ವಿದ್ಯಾರ್ಥಿ ದೆಸೆಯಲ್ಲಿ ಸಮಯಕ್ಕೆ ಆದ್ಯತೆ ನೀಡಬೇಕು. ಕಳೆದು ಹೋದ ವಸ್ತುವನ್ನು ಯಾವಾಗಲಾದರೂ ಪಡೆಯಬಹುದು, ಗಳಿಸಬಹುದು. ಆದರೆ ಸಮಯ ಮತ್ತು ಸಮುದ್ರದ ಅಲೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಓದುವ ಸಮಯದಲ್ಲಿ ಓದುವುದನ್ನು ಬಿಟ್ಟು ಉಳಿದೆಲ್ಲ ಮಾಡಿದರೆ ಮುಂದೆ ಜೀವನ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಹೆತ್ತವರಿಗೆ ಮಕ್ಕಳ ಬಗ್ಗೆ ಅಪಾರ ಕನಸುಗಳಿರುತ್ತವೆ, ಭರವಸೆ ಇರುತ್ತದೆ. ಅದನ್ನು ಅರಿತುಕೊಂಡು ಸಮಯದೊಂದಿಗೆ ಹೆಜ್ಜೆ ಹಾಕಬೇಕು ಎಂದು ಮಾರ್ಮಿಕವಾಗಿ ತಿಳಿಸಿದರು.
ಕಾಲೇಜಿನ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರು, ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಭಾಗ್ಯಜ್ಯೋತಿ ಪರೀಕ್ಷಾ ಸಿದ್ಧತೆ ವಿವರಿಸಿದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ವೈ.ಬಿ. ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅತಿಥಿ ಉಪನ್ಯಾಸಕ ಶಿವಪುತ್ರಪ್ಪ.ಎಂ., ಪತ್ರಾಂಕಿತ ವ್ಯವಸ್ಥಾಪಕ ಮಹಾಂತೇಶ, ಡಾ. ತುಕಾರಾಂ ನಾಯ್ಕ, ವಿಜಯ ಮಠಪತಿ, ಡಾ. ನಾಗರಾಜ ದೊರೆ, ಡಾ. ಮಹಾಂತೇಶ ನೆಲಾಗಣಿ ಇದ್ದರು.ಶಾರದಾ ಹಾಗೂ ಸಂಗಡಿಗರಿಂದ ಸ್ವಾಗತ ನೃತ್ಯ ಗಮನ ಸೆಳೆಯಿತು.